ಉಪ್ಪಿನಂಗಡಿ : ರಾಷ್ಟ್ರೀಯ ಸ್ವಯಂಸೇವಕ ಸಂಘದ 100 ನೇ ವರ್ಷಚಾರಣೆಯ ಅಂಗವಾಗಿ ಗುರುವಾರದಂದು ಉಪ್ಪಿನಂಗಡಿಯ ಗಾಣಿಗರ ಸಮುದಾಯ ಭವನದಲ್ಲಿ ವಿಜಯದಶಮಿ ಉತ್ಸವವು ಜರುಗಿತು.
ಉತ್ಸವದಲ್ಲಿ ಬೌದ್ಧಿಕ್ ನೀಡಿದ ಸಾಮರಸ್ಯ ವಿಭಾಗದ ಪ್ರಾಂತ ಸಹ ಸಂಯೋಜಕ ರಾಜೇಶ್ ಜಿ ವಿ , ಮಾತನಾಡಿ ಅಸುರೀ ಶಕ್ತಿಯನ್ನು ದೈವೀ ಶಕ್ತಿಯು ದಮನಿಸಿದ ದಿನವಾಗಿ ವಿಜಯದಶಮಿಯನ್ನು ನಾವು ಆಚರಿಸುತ್ತಿದ್ದೇವೆ. ಸಮಾಜದೊಳಗಿನ ಅಸುರೀ ಶಕ್ತಿಯನ್ನು ದಮನಿಸುವ ನಿಟ್ಟಿನಲ್ಲಿ ಜಾಗೃತರಾಗಬೇಕಾಗಿದೆ. ಸಮಾಜಕ್ಕೆ ಕಳಂಕವಾಗಿರುವ ಅಶ್ಪೃಶ್ಯತೆಯನ್ನು ನಿವಾರಿಸುವ ನಿಟ್ಟಿನಲ್ಲಿ ದೇಶದ ಪ್ರತಿ ಮನೆಯೂ ಪಣತೊಡಬೇಕಾಗಿದೆ. ಸಂಘದ ಆಶಯವಾಗಿರುವ ಪಂಚ ಪರಿವರ್ತನೆಯ ಅನುಷ್ಠಾನದಲ್ಲಿ ಪ್ರತಿಯೋರ್ವ ಸ್ವಯಂಸೇವಕ ಶ್ರಮಿಸಬೇಕಾಗಿದೆ ಎಂದರು.

ಉತ್ಸವದ ಅಧ್ಯಕ್ಷತೆಯನ್ನು ವಹಿಸಿದ್ದ ಉಪ್ಪಿನಂಗಡಿಯ ಯುವ ವೈದ್ಯ ಡಾ. ನಿರಂಜನ್ ರೈ ಮಾತನಾಡಿ, ನಮ್ಮಲ್ಲಿನ ಲೋಪದೋಷಗಳನ್ನು ನಿವಾರಿಸಿ ಸಮಾಜದ ಪರಿವರ್ತನೆಗೆ ಶ್ರಮಿಸುತ್ತಿರುವ ಸಂಘ ಸ್ವಯಂಸೇವಕರ ಕಾರ್ಯನಡೆ ಸಾಮರಸ್ಯ ಸಮಾಜದ ನಿರ್ಮಾಣಕ್ಕೆ ಪ್ರೇರಣಾದಾಯಿಯಾಗಿದೆ ಎಂದರು.
ಉತ್ಸವದಲ್ಲಿ ಪೂರ್ಣ ಗಣವೇಷದೊಂದಿಗೆ 357 ಮಂದಿ ಸ್ವಯಂಸೇವಕರು ಭಾಗವಹಿಸಿದ್ದರು.