ಪೆರುವಾಯಿ ಗ್ರಾ.ಪಂ. ಮುಂಭಾಗದಲ್ಲಿ ಸಾರ್ವಜನಿಕರಿಂದ ಪ್ರತಿಭಟನೆ

0

ಪಂಚಾಯತ್ ಅಧ್ಯಕ್ಷೆಯ ವಜಾ, ಬೆಂಬಲವಾಗಿ ನಿಂತ ಅಧಿಕಾರಿಗಳ ಅಮಾನತಿಗೆ ಆಗ್ರಹ

ವಿಟ್ಲ: ವೃದ್ಧ ಕೃಷಿಕರೋರ್ವರ ಕೆಲಸ ಮಾಡಿಕೊಡುವ ಸಲುವಾಗಿ ಲಂಚ ಪಡೆಯುತ್ತಿದ್ದ ಸಂದರ್ಭ ಲೋಕಾಯುಕ್ತ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಫೀಸರನ್ನು ವಜಾಗೊಳಿಸುವಂತೆ ಮತ್ತು ಭ್ರಷ್ಟಾಚಾರಕ್ಕೆ ಬೆಂಬಲವಾಗಿ ನಿಂತ ಅಧಿಕಾರಿಗಳ ಅಮಾನತಿಗೆ ಆಗ್ರಹಿಸಿ ಪೆರುವಾಯಿ ಗ್ರಾಮಸ್ಥರಿಂದ ಅ.21ರಂದು ಗ್ರಾ.ಪಂ.ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.


ಬಳಿಕ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯರ ಉಪಸ್ಥಿತಿಯಲ್ಲಿ ಗ್ರಾಮ ಪಂಚಾಯತ್ ಪಿಡಿಒ ರವರಿಗೆ ಮನವಿ ನೀಡಿ ಕ್ರಮಕೈಗೊಳ್ಳುವಂತೆ ಆಗ್ರಹಿಸಲಾಯಿತು.


ಮಾಜಿ ಶಾಸಕರಾದ ಸಂಜೀವ ಮಠಂದೂರು ಮಾತನಾಡಿ, ಭ್ರಷ್ಟಾಚಾರವನ್ನು ಯಾವ ರೀತಿ ನಡೆಸಬಹುದೆಂಬುದಕ್ಕೆ ತರಬೇತಿಯನ್ನು ಪೆರುವಾಯಿಯಲ್ಲಿ ಪಡೆದುಕೊಳ್ಳಬಹುದಾಗಿದೆ. ವಿಧಾನ ಸೌಧದಿಂದ ಗ್ರಾಮ ಸೌಧದ ತನಕ ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವುದಕ್ಕೆ ಇಲ್ಲಿನ ಘಟನೆಯೇ ಪ್ರತ್ಯಕ್ಷ ಸಾಕ್ಷಿ. ಕಾಂಗ್ರೆಸ್ ಆಡಳಿತ ಬರಬೇಕಾದರೆ ಬಿಜೆಪಿ ಸರ್ಕಾರವನ್ನು 40% ಎಂದಿತ್ತು. ಈಗ ಕಾಂಗ್ರೆಸ್ ಸರಕಾರ 100% ಸರ್ಕಾರ ಆಗಿದೆ ಎಂಬುದನ್ನು ಪೆರುವಾಯಿ ಅಧ್ಯಕ್ಷರು ತೋರಿಸಿದ್ದಾರೆ. ಕರ್ನಾಟಕದಲ್ಲಿ ಜನ ಅಭಿವೃದ್ಧಿಯಿಲ್ಲದೆ, ಹೊಂಡಗಳಿಂದ ಕೂಡಿದ ರಸ್ತೆಯಲ್ಲಿ ಓಡಾಡುವ ಸ್ಥಿತಿಯಿದೆ ಎಂದರು.


ಹಿಂದೂ ಜಾಗರಣ ವೇದಿಕೆಯ ಮುಖಂಡ ನರಸಿಂಹ ಮಾಣಿ ಮಾತನಾಡಿ, ಸರ್ಕಾರದ ಸವಲತ್ತುಗಳನ್ನು ಅಧಿಕಾರಿಗಳ ಜತೆಗೆ ಸೇರಿಕೊಂಡು ಅಧ್ಯಕ್ಷರು ನುಂಗಿ 14 ದಿನ ನ್ಯಾಯಾಂಗ ಬಂಧನ ಅನುಭವಿಸಿದ್ದಾರೆ. ಬಡವರ ಕಲ್ಯಾಣಕ್ಕಾಗಿ ನೀಡಿದ ಹಣವನ್ನು ತಿನ್ನುವಷ್ಟು ಸಮಸ್ಯೆಯಿದ್ದರೆ ತಿಳಿಸಬಹುದಿತ್ತು. ಲಕ್ಷಾಂತರ ಅವ್ಯವಹಾರ ನಡೆಸಲು ಗ್ರಾಮ ಪಂಚಾಯತ್ ನ ಹಿಂದಿನ ಪಿಡಿಒ ರೂವಾರಿಯಾಗಿದ್ದು, ಪ್ರಕರಣಕ್ಕೆ ಸಹಕಾರ ನೀಡಿರುವ ಬಂಟ್ವಾಳ ಇಓ ಅವರನ್ನು ಅಮಾನತ್ತು ಮಾಡಬೇಕು. ಸಾರ್ವಜನಿಕ ಸ್ಥಳದಲ್ಲಿ ಹಾಕಿದ ಸಿಸಿಟಿವಿಗಳ ಸಂಪರ್ಕವನ್ನು ಅಧ್ಯಕ್ಷರ ಮೊಬೈಲ್ ಗೆ ನೀಡಿದ್ದು, ತಕ್ಷಣ ಸ್ಥಗಿತ ಮಾಡಬೇಕು. ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯಲಿದೆ ಎಂದರು.


ಬಿಜೆಪಿ ಪುತ್ತೂರು ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಪುಣಚ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ಬಾಳೆಕಲ್ಲು, ವಿಶ್ವ ಹಿಂದು ಪರಿಷತ್ ಪ್ರಮುಖ್ ಅಶೋಕ್ ಮಾಣಿಲ, ಪ್ರಮುಖರಾದ ಹರಿಪ್ರಸಾದ್ ಯಾದವ್, ಗಣೇಶ್ ಭಟ್, ಅಜಿತ್ ಭಟ್, ಮನೀಷ್, ಗೋಪಾಲ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜಯರಾಮ ಆಳ್ವ ಬದಿಯಾರು ಸ್ವಾಗತಿಸಿದರು. ಯತೀಶ್ ಪೆರುವಾಯಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮೋಕ್ಷಿತ್ ಪೆರುವಾಯಿ ವಂದಿಸಿದರು.

ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರ ಉಪಸ್ಥಿತಿಯಲ್ಲಿ ಗ್ರಾ. ಪಂ. ಪಿಡಿಒಗೆ ಮನವಿ ಸಲ್ಲಿಕೆ

ಬೆಳಗ್ಗೆ ಪ್ರತಿಭಟನೆ ಆರಂಭಗೊಳಿಸಿದ ಪ್ರತಿಭಟನಾಕಾರರು ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಆಗಮಿಸಬೇಕೆಂದು ಪಟ್ಟು ಹಿಡಿದರು. ಬಳಿಕ ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಸ್ಥಳಕ್ಕೆ ಆಗಮಿಸಿದರಾದರೂ, ಅವರ ಮೇಲೆಯೇ ಆರೋಪ ಮಾಡಿ ಪ್ರತಿಭಟನೆಯನ್ನು ನಡೆಸಿದ ಕಾರಣ ಅವರು ಮನವಿ ಸ್ವೀಕರಿಸುವುದಿಲ್ಲ ಎಂದರು. ಬಳಿಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪಕ್ ರವರಿಗೆ ಮನವಿಯನ್ನು ಸಲ್ಲಿಸಿ ಪ್ರತಿಭಟನೆಯನ್ನು ಕೊನೆಗೊಳಿಸಿದರು.

LEAVE A REPLY

Please enter your comment!
Please enter your name here