




ಅಂಬಿಕಾ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವದ ಅಂಗವಾಗಿ ವಿಶೇಷ ಕಾರ್ಯಕ್ರಮ
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವದ ಅಂಗವಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ದಕ್ಷಿಣ ಭಾರತದ ಖ್ಯಾತ ಗಾಯಕರಾದ ಪಿ.ಉನ್ನಿಕೃಷ್ಣನ್ ಹಾಗೂ ಅವರ ಪುತ್ರಿ ಉತ್ತರಾ ಉನ್ನಿಕೃಷ್ಣನ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಡಿ.13ರಂದು ಸಂಜೆ 5.30ರಿಂದ ಬಪ್ಪಳಿಗೆಯಲ್ಲಿನ ಅಂಬಿಕಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿರುವ ಶ್ರೀ ಶಂಕರ ಸಭಾಭವನದಲ್ಲಿ ನಡೆಯಲಿದೆ.




ಶಾಸ್ತ್ರೀಯ ಗಾಯನ ಕಾರ್ಯಕ್ರಮದಲ್ಲಿ ವಿದ್ವಾನ್ ನಿಶಾನ್ ಚಂದ್ರನ್ ಅವರು ವಾಯಲಿನ್ನಲ್ಲಿ, ವಿದ್ವಾನ್ ತುಮಕೂರು ಬಿ.ರವಿಶಂಕರ್ ಅವರು ಮೃದಂಗದಲ್ಲಿ, ವಿದ್ವಾನ್ ತುಮಕೂರು ಬಿ. ಶಶಿಶಂಕರ್ ಘಟಂನಲ್ಲಿ ಹಾಗೂ ವಿದ್ವಾನ್ ವಿಕ್ರಮ್ ಭಾರದ್ವಾಜ್ ಅವರು ಮೋರ್ಚಿಂಗ್ ಹಾಗೂ ರಿದಂಪಾಡ್ನಲ್ಲಿ ಸಹಕರಿಸಲಿದ್ದಾರೆ.





2024ರಲ್ಲಿ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮ ನಡೆದಿದ್ದಾಗ ಖ್ಯಾತ ಯುವ ಗಾಯಕಿ ಸೂರ್ಯಗಾಯತ್ರಿ ಅವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೀಗ ರಜತ ಮಹೋತ್ಸವದ ನೆಲೆಯಲ್ಲಿ ಮತ್ತೀರ್ವರು ರಾಷ್ಟ್ರೀಯ ಮಟ್ಟದ ಗಾಯಕರು ಅಂಬಿಕಾ ಆವರಣಕ್ಕೆ ಆಗಮಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಸಾರ್ವಜನಿಕರಿಗೆ ಮುಕ್ತ ಹಾಗೂ ಉಚಿತ ಪ್ರವೇಶ ಕಲ್ಪಿಸಿಕೊಡಲಾಗಿದೆ.






