ಪುತ್ತೂರು: ತಾಲೂಕು ಕಚೇರಿಯಲ್ಲಿರುವ ಅಭಿಲೇಖಾಲಯ(ರೆಕಾರ್ಡ್ ರೂಂ)ದಲ್ಲಿ ಸಾರ್ವಜನಿಕರಿಗೆ ದಾಖಲೆಪತ್ರಗಳನ್ನು ಪಡೆದುಕೊಳ್ಳುವಲ್ಲಿ ಉಂಟಾಗುತ್ತಿರುವ ಸಮಸ್ಯೆಗಳಿಗೆ ಸೂಕ್ತ ಕ್ರಮಕೈಗೊಳ್ಳುವಂತೆ ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ದಾಖಲೆಗಳಿಗಾಗಿ ಅರ್ಜಿ ಸಲ್ಲಿಸಿ ತಿಂಗಳುಗಟ್ಟೆಲೆ ಅಲೆದಾಡಿದರೂ ಪ್ರಾಮಾಣಿಕವಾಗಿ ಅರ್ಜಿ ಸಲ್ಲಿಸಿದರಿಗೆ ದಾಖಲೆಗಳು ದೊರೆಯುತ್ತಿಲ್ಲ. ಮಧ್ಯವರ್ತಿಗಳಿಗೆ ಇಲ್ಲಿ ಕೂಡಲೇ ಸ್ಪಂದನೆ ದೊರೆಯುತ್ತದೆ. ಪ್ರಾಮಾಣಿಕವಾಗಿ ಅರ್ಜಿ ಸಲ್ಲಿಸಿದವರು ಪ್ರತಿದಿನ ಹೋಗಿ ವಿಚಾರಿಸಿದರೂ ನಾಳೆ ಬನ್ನಿ, ಜೆರಾಕ್ಸ್ ಯಂತ್ರ ಸರಿಯಿಲ್ಲ. ಸಮಯವಿಲ್ಲ ಕೊನೆಗೆ ದಾಖಲೆಗಳೇ ಇಲ್ಲ ಎಂಬ ಹಾರಿಕೆಯ ಉತ್ತರಗಳನ್ನು ನೀಡಿ ಜನರನ್ನು ಸತಾಯಿಸುತ್ತಿದ್ದಾರೆ. ಇದರಿಂದ ಬೇಸತ್ತು ಜನರ ಕೊನೆಗೆ ಲಂಚದ ಆಮಿಷ ತೋರಿಸಿ ದಾಖಲೆಗಳನ್ನು ಪಡೆದುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಇಲ್ಲಿಯದ್ದಾಗಿದೆ. ಲಂಚ ನೀಡಲು ಇಷ್ಟವಿಲ್ಲದ ಜನರು ಪ್ರತಿದಿನ ಅಲೆದಾಡುತ್ತಿದ್ದಾರೆ. ಇಲ್ಲಿನ ಸಮಸ್ಯೆ ಬಗ್ಗೆ ದೂರು ನೀಡಿದರೂ ಪರಿಹಾರವಾಗಿಲ್ಲ. ಹೀಗಾಗಿ ಈ ವಿಚಾರವನ್ನು ಆಧ್ಯತೆ ಮೇರೆಗೆ ಪರಿಗಣಿಸಿ ಮೊದಲು ಬಂದ ಅರ್ಜಿಗಳನ್ನು ಮೊದಲು ವಿಲೇವಾರಿಯಾಗುವಂತೆ ಹಾಗೂ 10 ದಿನಗಳ ಒಳಗೆ ಬಂದಿರುವ ಅರ್ಜಿಗಳನ್ನು ವಿಲೇವಾರಿ ಮಾಡಲು ಹಾಗೂ ಅನಧಿಕೃತ ಶುಲ್ಕ ಇಲ್ಲದೆ ಸಾರ್ವಜನಿಕರಿಗೆ ಪಾರದರ್ಶಕ ರೀತಿಯಲ್ಲಿ ಅರ್ಜಿಗಳ ವಿಲೇವಾರಿಗೆ ಸೂಕ್ತ ಕ್ರಮಕೈಗೊಳ್ಳುಬೇಕು. ಇಲ್ಲಿ ಲಂಚಕ್ಕೆ ಅಪೇಕ್ಷೆ ಪಡೆಯುವ ಸಿಬಂದಿಗಳನ್ನು ಬದಲಾಯಿಸುವಂತೆ ದೂರಿನಲ್ಲಿ ವಿನಂತಿಸಿದ್ದಾರೆ.