ವಿಟ್ಲ: ನಿನ್ನೆಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೊಳ್ಳಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ರಸ್ತೆ ಜಲಾವೃತವಾದ ಘಟನೆ ಜೂ.30ರಂದು ನಡೆದಿದ್ದು, ನೀರಿನ ಮಟ್ಟ ಇನ್ನೂ ಇಳಿಕೆಯಾಗದ ಹಿನ್ನೆಲೆಯಲ್ಲಿ ಘನವಾಹನಗಳನ್ನು ಹೊರತುಪಡಿಸಿ ಕೆಲವೊಂದು ವಾಹನಗಳು ಸುತ್ತು ಬಳಿಸಿ ಸಂಚಾರ ನಡೆಸುತ್ತಿದೆ.
ವಿಟ್ಲ-ಸಾಲೆತ್ತೂರು ರಸ್ತೆಯ ಕೊಳ್ಳಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ರಸ್ತೆ ಬದಿಯಲ್ಲಿ ಹರಿಯುತ್ತಿರುವ ಹೊಳೆಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ರಸ್ತೆ ಜಲಾವೃತವಾಗಿದೆ. ಇದರಿಂದಾಗಿ ಈ ದಾರಿಯಾಗಿ ವಾಹನ ಸಂಚಾರಕ್ಕೆ ತೊಡಕಾಗಿದ್ದು,ಸಣ್ಣ ಪುಟ್ಟ ವಾಹನಗಳು ಸುತ್ತಿ ಬಳಸಿ ಪ್ರಯಾಣ ಬೆಳೆಸುವಂತಾಗಿದೆ. ಕೆಲವೊಂದು ದ್ವಿಚಕ್ರ ವಾಹನಗಳ ಸಹಿತ ಆಟೋ ರಿಕ್ಷಗಳು ಸ್ಥಳೀಯರ ಸಹಕಾರದಲ್ಲಿ ಈ ದಾರಿಯಿಂದಲೇ ಸಂಚಾರ ನಡೆಸಿದೆ.
ಬೆಳಗ್ಗಿನಿಂದಲೇ ನೀರಿನ ಮಟ್ಟ ಏರುತ್ತಿದ್ದು, ಅಲ್ಪ ಹೊತ್ತು ಇಳಿಮುಖವಾಗಿತ್ತು. ಇದೀಗ ಮತ್ತೆ ಏರಿಕೆ ಕಂಡಿದ್ದು ನೀರು ರಸ್ತೆಗೆ ಬಂದಿದೆ. ಇದೀಗ ರಸ್ತೆಯ ಎರಡೂ ಕಡೆಗಳಲ್ಲಿ ಸ್ಥಳೀಯ ನಾಗರೀಕರು ಕಾವಲು ಕಾಯುತ್ತಿದ್ದು ಅಪಾಯಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಮಳೆ ಕಡಿಮೆಯಾಗದಿದ್ದಲ್ಲಿ ರಸ್ತೆ ಸಂಚಾರ ಬಂದ್ ಆಗುವ ಸಾಧ್ಯತೆ ಇದೆ.