ಕಡಬ: ನೂಜಿಬಾಳ್ತಿಲ, ರೆಂಜಿಲಾಡಿ ಗ್ರಾಮಗಳ ವ್ಯಾಪ್ತಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಸಭೆ ರೆಂಜಿಲಾಡಿ ಶಾಲೆಯಲ್ಲಿ ನಡೆಯಿತು. ಕಡಬ ಪೊಲೀಸ್ ಠಾಣೆ ಉಪನಿರೀಕ್ಷಕ ಆಂಜನೇಯ ರೆಡ್ಡಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಉತ್ತಮ ರೀತಿಯ ವಿದ್ಯಾಭ್ಯಾಸ ಪಡೆದು ತಮ್ಮ ಜೀವನ ರೂಪಿಸಲು ಕಠಿಣ ಪರಿಶ್ರಮ ಪಡುವಂತೆ ತಿಳಿಸಿದರು. ಮೊಬೈಲ್ ಬಳಕೆ ಮೀತಿ ಮೀರದಂತೆ ಹೆತ್ತವರು ಎಚ್ಚರಿಕೆ ವಹಿಸಬೇಕು ಎಂದ ಅವರು ಅಂಬೇಡ್ಕರ್ ಅವರ ಸಂವಿಧಾನದಂತೆ ಹಾಗೂ ಅವರ ಮಾರ್ಗದರ್ಶನದಂತೆ ಬದುಕಿ ಬಾಳೋಣ ಎಂದರು. ಪ್ರಸ್ತುತ ಮಳೆಗಾಲವಾಗಿದ್ದು, ಮಕ್ಕಳು, ಸೇರಿದಂತೆ ಜನರು ಎಚ್ಚರಿಕೆಯಿಂದ ಇರಬೇಕು. ಯಾವುದೇ ಸಮಸ್ಯೆಗಳು ಬಂದಲ್ಲಿ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಿದರು.
ಕಾಲೋನಿ ಬಳಿ ಹೊರಗಿನವರು ಬಂದು ತೊಂದರೆ ನೀಡುತ್ತಿದ್ದಾರೆ ಎಂದು ಸಭೆಯಲ್ಲಿ ದೂರು ವ್ಯಕ್ತವಾಯಿತು. ಸಹಾಯಕ ಪೊಲೀಸ್ ಉಪನಿರೀಕ್ಷಕ ಶಿವರಾಮ, ಎಚ್ಸಿ ಭವಿತ್ ರೈ, ಸಿಬ್ಬಂದಿಗಳಾದ ಪ್ರಶಾಂತ್, ವಿನೋದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ. ಸದಸ್ಯ ವಸಂತ ಕುಬಲಾಡಿ, ಪ್ರಮುಖರಾದ ಗುರುವಪ್ಪ ಕಲ್ಲುಗುಡ್ಡೆ, ಸುಂದರಿ ಕಲ್ಲುಗುಡ್ಡೆ, ಕುಂಞಪ್ಪ, ಅಂಗಜ ಗೋಳಿಯಡ್ಕ, ಲತಾ ಮೀನಾಡಿ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.
ಮನೆ ಭೇಟಿ;
ಸಭೆಯ ಬಳಿಕ ಎಸೈ ಹಾಗೂ ಪೊಲೀಸರು ಮನೆ ಭೇಟಿ ನಡೆಸಿ, ಮನೆಯವರೊಂದಿಗೆ ಮಾತು ಕತೆ ನಡೆಸಿದರು. ಯಾವುದೇ ಮಕ್ಕಳು ಶಿಕ್ಷಣ ವಂಚಿತರಾಗಿ ಶಾಲೆಯಿಂದ ಹೊರಗುಳಿಯದಂತೆ ಪೋಷಕರು ಗಮನಹರಿಸಬೇಕು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವಂತೆ ತಿಳಿಸಿದ ಅವರು ಮುಂದಕ್ಕೆ ನಿರಂತರ ಮನೆ ಭೇಟಿ ನಡೆಸುವ ಕೆಲಸ ಮಾಡಲಾಗುವುದು ಎಂದರು.