- ರೂ.27 ಕೋಟಿ ವ್ಯವಹಾರ, ರೂ.26.42 ಲಕ್ಷ ಲಾಭ, ಶೇ.10 ಡಿವಿಡೆಂಡ್
ಪುತ್ತೂರು; ಪಡೀಲು ಮೂರ್ತೆದಾರರ ಸೇವಾ ಸಹಕಾರಿ ಸಂಘವು 2021-22 ನೇ ಸಾಲಿನಲ್ಲಿ ರೂ.27.ಕೋಟಿ ವ್ಯವಹಾರ ನಡೆಸಿ ರೂ.26,42,293.50 ಲಾಭ ಗಳಿಸಿದೆ. ಸದಸ್ಯರಿಗೆ ಶೇ.10 ಡಿವಿಡೆಂಡ್ ವಿತರಿಸಲಾಗುವುದು ಎಂದು ಅಧ್ಯಕ್ಷ ಸುಂದರ ಪೂಜಾರಿ ಬಡಾವು ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು.
ಸಭೆಯು ಆ.9ರಂದು ಬ್ರಹ್ಮಶ್ರಿ ನಾರಾಯಣ ಗುರುಸ್ವಾಮಿ ಸಭಾ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಮಾತನಾಡಿ, ಸಂಘವು ಪುತ್ತೂರು ಕಸಬಾ, ನೆಕ್ಕಿಲಾಡಿ, ಕೋಡಿಂಬಾಡಿ, ಬೆಳ್ಳಿಪ್ಪಾಡಿ, ಬನ್ನೂರು, ಚಿಕ್ಕಮುಡ್ನೂರು, ಪಡ್ನೂರು, ಕಬಕ, ಕೊಡಿಪ್ಪಾಡಿ, ಬಲ್ನಾಡು, ಆರ್ಯಾಪು ಹಾಗೂ ಕುರಿಯ ಗ್ರಾಮಗಳಿಗೆ ವ್ಯಾಪಿಸಿದ್ದು, ವರದಿ ವರ್ಷದಲ್ಲಿ 296 ಸದಸ್ಯರಿಂದ ರೂ.5,21,592 ಪಾಲು ಬಂಡವಾಳ ಹೊಂದಿರುತ್ತದೆ. ರೂ.5,08,56,319.34, ರೂ.1,05,56,800.45 ನಿಧಿಗಳನ್ನು ಹೊಂದಿದೆ. ರೂ.5,55,82,255 ನ್ನು ವಿವಿಧ ರೂಪದಲ್ಲಿ ಸಾಲ ವಿತರಿಸಲಾಗಿದೆ. ಸಂಘದ ವ್ಯಾಪ್ತಿಯಲ್ಲಿ ಶೇಂದಿ ಅಂಗಡಿಗಳು ಕಾರ್ಯಾಚರಿಸುತ್ತಿದೆ. ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಪ್ರಗತಿಯಲ್ಲಿದೆ. ಸಂಘದ ಬೆಳವಣಿಗೆಗೆ ಸದಸ್ಯರ ಸಹಕಾರ ಬಹುಮುಖ್ಯವಾಗಿದ್ದು ಸದಸ್ಯರು ಸಹಕರಿಸುವಂತೆ ಅವರು ಮನವಿ ಮಾಡಿದರು.
ಮುಖ್ಯ ಅತಿಥಿಯಾಗಿದ್ದ ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ, ವಿದ್ಯಾರ್ಜನೆಯಿಂದ ಸ್ವತಂತ್ರರಾಗಿ ಎಂಬ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶದಂತೆ ಸಮಾಜದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಸಮಾಜದಲ್ಲಿನ ಉನ್ನತ ಸ್ಥಾನ ಪಡೆಯುವ ನಿಟ್ಟಿನಲ್ಲಿ ವಿದ್ಯಾಭ್ಯಾಸಕ್ಕೆ ಒತ್ತು ನೀಡಿ ಸಂಘದ ವತಿಯಿಂದ ಸ್ನಾತಕೋತ್ತರ ಪದವಿ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸುವ ಚಿಂತನೆಯಿದೆ ಎಂದರು.
ಮೂರ್ತೆದಾರರ ಮಹಾಮಂಡಲದ ನಿರ್ದೇಶಕ ವಿಜಯ ಕುಮಾರ್ ಸೊರಕೆ ಮಾತನಾಡಿ, ಮೂರ್ತೆದಾರರ ಸಹಕಾರ ಸಂಘದ ಮುಖಾಂತರ ಸಮಾಜದವರಿಗೆ ಉದ್ಯೋಗ, ಬ್ಯಾಂಕಿಂಗ್ ಸಹಕಾರ ನೀಡಲಾಗುತ್ತಿದೆ. ಮುಂದೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಾದರಿಯಲ್ಲಿ ಸಹಕಾರಿ ಸಂಘಗಳನ್ನು ಉನ್ನತೀಕರಿಸುವ ಯೋಜನೆಯಿದೆ. ಇದಕ್ಕಾಗಿ ಎಲ್ಲಾ ಕಡೆ ಶಾಖೆಗಳನ್ನು ತೆರೆಯುಬೇಕು ಎಂದರು.
ಸನ್ಮಾನ;
ಸಭೆಯಲ್ಲಿ ಹಿರಿಯ ಮೂರ್ತೆದಾರರಾದ ಐತ್ತಪ್ಪ ಪೂಜಾರಿ ಅರ್ಕ ಕೊಡಿಪ್ಪಾಡಿ ಹಾಗೂ ಕೃಷ್ಣಪ್ಪ ಪೂಜಾರಿ ರಾಗಿದಕುಮೇರುರವರನ್ನು ಸನ್ಮಾನಿಸಲಾಯಿತು. ಪಿಗ್ಮಿ ಸಂಗ್ರಾಹಕರಾದ ಸತೀಶ್, ಭಾಸ್ಕರ, ದಿನೇಶ್, ಗಣೇಶ್, ಶಿವಪ್ರಸಾದ್ ಹಾಗೂ ಭರತ್ ರವರಿಗೆ ಪ್ರೋತ್ಸಾಹ ಧನದ ಚೆಕ್ ವಿತರಿಸಲಾಯಿತು. ಉಪಾಧ್ಯಕ್ಷ ಬಿ.ಕೆ ಆನಂದ ಸುವರ್ಣ, ನಿರ್ದೇಶಕರಾದ ವೀರಪ್ಪ ಪೂಜಾರಿ ಡೆಕ್ಕಾಜೆ, ಶಯನಾ ಜಯಾನಂದ, ಜಯಲಕ್ಷ್ಮಿ ಸುರೇಶ್, ಜಿನ್ನಪ್ಪ ಪೂಜಾರಿ ಮುರ, ಚಂದಪ್ಪ ಪೂಜಾರಿ ಕಾಡ್ಲ, ಉಮೇಶ್ ಪೂಜಾರಿ ರಾಗಿದಕುಮೇರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರವೀಣ್ ನೆಟ್ಟಾರುರವರಿಗೆ ಸಭೆಯಲ್ಲಿ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಪಿಗ್ಮಿ ಸಂಗ್ರಾಹಕ ದಿನೇಶ್ ಪ್ರಾರ್ಥಿಸಿದರು. ನಿರ್ದೇಶಕ ಚಂದಪ್ಪ ಪೂಜಾರಿ ಕಾಡ್ಲ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಧಾಕೃಷ್ಣ ವಾರ್ಷಿಕ ವರದಿ ಮಂಡಿಸಿದರು. ನಿರ್ದೇಶಕ ಪದ್ಮಪ್ಪ ಪೂಜಾರಿ, ಸದಸ್ಯ ಸೂರಪ್ಪ ಪೂಜಾರಿ ಸನ್ಮಾನಿತರ ಪರಿಚಯ ಮಾಡಿದರು. ಲೆಕ್ಕಿಗ ಸವಿತಾ ಲೆಕ್ಕಪತ್ರ ಮಂಡಿಸಿದರು. ಗುಮಾಸ್ತ ಆದರ್ಶ ಬಜೆಟ್ ಮಂಡಿಸಿದರು. ಪಿಗ್ಮಿ ಸಂಗ್ರಾಹಕರಾದ ಭಾಸ್ಕರ, ದಿನೇಶ್, ಗಣೇಶ್, ಶಿವಪ್ರಸಾದ್ ಹಾಗೂ ಭರತ್ ಸಹಕರಿಸಿದರು. ನಿರ್ದೇಶಕ ಗೋಪಾಲಕೃಷ್ಣ ಸುವರ್ಣ ಗೆನಸಿನ ಕುಮೇರು ವಂದಿಸಿದರು. ಪಿಗ್ಮಿ ಸಂಗ್ರಾಹಕ ಸತೀಶ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು.