ಮೊಟ್ಟೆತ್ತಡ್ಕ ಕಾಂಗ್ರೆಸ್ ಬೂತ್ ಮಟ್ಟದ ಕಾರ್ಯಕರ್ತರ ಸಭೆ-ಬಿಜೆಪಿಯ ಮಾಲಾ ಸುಬ್ಬು ಸಿಂಗ್ ಕಾಂಗ್ರೆಸ್‌ಗೆ ಸೇರ್ಪಡೆ

0

ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯ ಮೊಟ್ಟೆತ್ತಡ್ಕ ಕಾಂಗ್ರೆಸ್ ಬೂತ್ ಮಟ್ಟದ ಕಾರ್ಯಕರ್ತರ ಸಭೆಯು ಮಾ.1 ರಂದು ಸಂಜೆ ಮೊಟ್ಟೆತ್ತಡ್ಕ ಜಂಕ್ಷನ್‌ನಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ್ ರೈಯವರ ಅಧ್ಯಕ್ಷತೆಯಲ್ಲಿ ಜರಗಿತು.


ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮ್ಮದ್ ಆಲಿರವರು ಮಾತನಾಡಿ, ಜನರ ಸಮಸ್ಯೆಗೆ ಪರಿಹಾರ ಇದ್ರೆ ಅದು ಕಾಂಗ್ರೆಸ್ ಆಗಿದೆ. ಕಾಂಗ್ರೆಸ್ ಪಕ್ಷವು ಸರ್ವಧರ್ಮಕ್ಕೆ ಗೌರವ ಕೊಡುವ ಎಲ್ಲರನ್ನೂ ಸಮಾನರಾಗಿ ಕಾಣುವ ಪಕ್ಷವಾಗಿದೆ. ಬಿಜೆಪಿ ದುರಾಡಳಿತ, ಡೋಂಗಿ ಘೋಷಣೆಗಳಿಗೆ ಜನರು ಬೇಸತ್ತು ಹೋಗಿದ್ದಾರೆ. ದೇಶದ ಸಂಸ್ಕೃತಿಯನ್ನು ಕಾಪಾಡುತ್ತೇವೆ ಎಂದು ಹೇಳಿಕೊಂಡು ಬಂದಂತಹ ಬಿಜೆಪಿ ಪಕ್ಷದ ಸ್ಥಿತಿ ಹಾಗೂ ನಡವಳಿಕೆ ನೋಡಿದಾಗ ಗೊತ್ತಾಗುತ್ತದೆ. ನಗರಸಭೆಯಲ್ಲಿ ಬಿಜೆಪಿ ಆಡಳಿತ ಇದ್ದರೂ ಯಾವುದೇ ಜನೋಪಯೋಗಿ ಕಾರ್ಯಕ್ರಮ ಆಗ್ತಾ ಇಲ್ಲ ಎಂದರು.


ಅಧ್ಯಕ್ಷತೆ ವಹಿಸಿದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಮಾತನಾಡಿ, ದೇಶದಲ್ಲಿ ಸತ್ಯ ಉಳಿಯಬೇಕಾದರೆ, ಬಡವರು ಬದುಕಬೇಕಾದರೆ, ಕೃಷಿ, ಉದ್ಯೋಗ, ಕೈಗಾರಿಕೆ ಚೇತರಿಕೆ ಕಾಣಬೇಕಾದರೆ ಅದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಇನ್ನು ಎರಡು ತಿಂಗಳಿನಲ್ಲಿ ಚುನಾವಣೆ ಬರ್‍ತಿದೆ. ಕಾಂಗ್ರೆಸ್ ಈಗಾಗಲೇ ಮನೆಯ ಯಜಮಾನಿಗೆ ಮಾಸಿಕ ರೂ.೨೦೦೦ ಹಾಗೂ ೨೦೦ ಯೂನಿಟ್ ವಿದ್ಯುತ್ ಉಚಿತ ನೀಡುತ್ತೇವೆ ಎಂದು ಅಧಿಕೃತವಾಗಿ ಘೋಷಿಸಿದೆ. ಕಾಂಗ್ರೆಸ್‌ನಲ್ಲಿ ಜಾತಿವಾದ, ಕೋಮುವಾದವಿಲ್ಲ. ಬಿಜೆಪಿ ಪಕ್ಷವು ದುಡ್ಡು ಕೊಟ್ಟು ಮಾಧ್ಯಮವನ್ನು ಖರೀದಿ ಮಾಡಿ ಆಗಿದೆ. ಕಳ್ಳ, ಖದೀಮರಿಗೆ ಆಶ್ರಯ ನೀಡುತ್ತಾ ಬಂದಿದೆ ಎಂದರು.


ಕಾಂಗ್ರೆಸ್ ಮುಖಂಡ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಮಾತನಾಡಿ, ಕೇಸರಿ ಹಾಗೂ ಹಿಂದುತ್ವ ಕೇವಲ ಬಿಜೆಪಿ ಪಕ್ಷಕ್ಕೆ ಫಿಕ್ಸ್ ಅಲ್ಲ. ಪ್ರತಿ ಬೂತ್ ಬೂತ್‌ಗಳಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ ಆಗಬೇಕು, ಆಗ ಮಾತ್ರ ಕಾಂಗ್ರೆಸ್ ಜಯಗಳಿಸಲು ಸಾಧ್ಯ. ಅದಕ್ಕಾಗಿ ಪ್ರತಿ ಕಾರ್ಯಕರ್ತರಲ್ಲಿ ಆತ್ಮಶಕ್ತಿ, ಆತ್ಮಧೈರ್ಯ ತುಂಬಬೇಕು, ಭರವಸೆ ಜಾಸ್ತಿಯಾಗಬೇಕು. ವೋಟರ್ ಲಿಸ್ಟ್‌ನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಹೆಸರನ್ನು ಜಾಸ್ತಿ ಸೇರ್ಪಡೆಗೊಳಿಸುವಂತಾಗಬೇಕು, ಮನೆ ಮನೆಗೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಯೋಜನೆಗಳನ್ನು ತಲುಪಿಸುವಂತಾಗಬೇಕು ಎಂದರು.


ಕಾಂಗ್ರೆಸ್ ಮುಖಂಡ ಎನ್.ಚಂದ್ರಹಾಸ ಶೆಟ್ಟಿ ಮಾತನಾಡಿ, ಕಾಂಗ್ರೆಸ್‌ನ ತತ್ವ ಸಿದ್ಧಾಂತ ಒಪ್ಪಿಕೊಂಡು ಬರುವುದಾದರೆ ಸ್ವಾಗತ. ಪಕ್ಷಕ್ಕೆ ದ್ರೋಹ ಮಾಡುವವರನ್ನು ನಿಸ್ಸಂದೇಹವಾಗಿ ಉಚ್ಚಾಟನೆ ಮಾಡಲೇಬೇಕಾಗುತ್ತದೆ. ಬಿಜೆಪಿಯವರು `ನಾವು ಹಿಂದು’ ಎಂದು ಕೇವಲ ಭಾಷಣಕ್ಕೆ ಮಾತ್ರ ಸೀಮಿತಗೊಳಿಸಿ ಯುವ ಸಮುದಾಯವನ್ನು ತಪ್ಪು ದಾರಿಗೆ ಕೊಂಡೊಯ್ಯುತ್ತಾರೆ. ದೇಶದ ಅಭಿವೃದ್ಧಿಗೆ ಎಲ್ಲಾ ಧರ್ಮದವರು ಒಗ್ಗೂಡಿದರೆ ಮಾತ್ರ ಸಾಧ್ಯವಾಗುವುದಾದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಯಾಕೆಂದರೆ ಕಾಂಗ್ರೆಸ್ ಪಕ್ಷದ್ದು ಮಾನವ ಧರ್ಮ ಆಗಿದೆ ಎಂದರು.


ದಿವ್ಯಪ್ರಭಾ ಚಿಲ್ತಡ್ಕ ಮಾತನಾಡಿ, ಕಾಂಗ್ರೆಸ್ ಪಕ್ಷವು ಸತ್ಯಾಸತ್ಯಾತೆಯನ್ನು ಒಳಗೊಂಡ ಪಕ್ಷ, ಇತಿಹಾಸವುಳ್ಳಂತಹ ಪಕ್ಷ, ಅಂದಿನಿಂದ ಇಂದಿನವರೆಗೆ ಕಾಂಗ್ರೆಸ್ ಪಕ್ಷವು ಜನೋಪಯೋಗಿ ಕಾರ್ಯಕ್ರಮಗಳನ್ನು ಜನರಿಗೆ ನೀಡುತ್ತಾ ಬಂದಿದೆ. ಕಾಂಗ್ರೆಸ್ ಪಕ್ಷದ ಇತಿಹಾಸ, ಯೋಜನೆಗಳನ್ನು ಹಾಗೂ ಬಿಜೆಪಿಯ ಅಧಿಕಾರದಲ್ಲಿ ಜನರು ಏನೆಲ್ಲಾ ಭವನೆಗಳನ್ನು ಅನುಭವಿಸಿದ್ದಾರೆ ಎಂಬುದನ್ನು ಇಂದಿನ ಯುವಪೀಳಿಗೆಗೆ ತಿಳಿಸುವಂತಾಗಬೇಕು. ಹನಿ ಹನಿ ಕೂಡಿದರೆ ಹಳ್ಳ, ಒಗ್ಗಟ್ಟಿನಲ್ಲಿ ಬಲವಿದೆ ಎಂದು ನಾವು ತೋರಿಸಿಕೊಡಬೇಕಾಗಿದೆ ಎಂದರು.
ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವಿ.ಎಚ್ ಶಕೂರ್ ಹಾಜಿ, ನಗರಸಭಾ ಸದಸ್ಯೆ ಶೈಲಾ ಪೈ, ದ.ಕ ಜಿಲ್ಲಾ ಕಾರ್ಮಿಕ ಘಟಕದ ಕಾರ್ಯದರ್ಶಿ ಶರೀಫ್ ಬಲ್ನಾಡು, ನಗರಸಭಾ ಸದಸ್ಯ ರಿಯಾಝ್ ಪರ್ಲಡ್ಕ, ಯಂಗ್ ಬ್ರಿಗೇಡ್ ಅಧ್ಯಕ್ಷ ರಂಜಿತ್ ಬಂಗೇರ, ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿ ಆಸ್ಮಾ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯದರ್ಶಿ ಸೀತಾ ಭಟ್, ಮೊಟ್ಟೆತ್ತಡ್ಕ ಕಾಂಗ್ರೆಸ್ ಬೂತ್ ಸಮಿತಿಯ ಅಧ್ಯಕ್ಷರಾದ ರೊನಾಲ್ಡ್ ಮೊಂತೇರೊ, ರವೀಂದ್ರ ರೈ, ಪುತ್ತೂರು ನಗರ ಕಾಂಗ್ರೆಸ್ ಕಾರ್ಯದರ್ಶಿ ದಾಮೋದರ್ ಭಂಡಾರ್‍ಕರ್ ಹಾಗೂ ಉಪಾಧ್ಯಕ್ಷ ಸುರೇಶ್ ಪೂಜಾರಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಉಪಾಧ್ಯಕ್ಷ ಅಬ್ದುಲ್ಲ ಕೆ, ನಗರ ಕಾಂಗ್ರೆಸ್ ಉಪಾಧ್ಯಕ್ಷ ಹಮೀದ್, ಮೊಟ್ಟೆತ್ತಡ್ಕ ಬೂತ್ ಸಮಿತಿ ಸದಸ್ಯರಾದ ನೌಫಲ್, ಮೋಹನ್ ಮಾರಾರ್, ಬಾಲಚಂದ್ರ, ನವಾಜ್, ಸನ ಇಲೆಕ್ಟ್ರಿಕಲ್ಸ್‌ನ ನಿಝಾರ್, ವಿಶ್ವ, ಅದ್ದು, ಇಸುಬು, ಆದಂ ಸೌಹಾರ್ದ, ಬಾಬಚ್ಚ, ಅದ್ರಾಮ, ಬಾಬು, ಸಂದೀಪ್, ಅಹಮ್ಮದ್, ಸುಲೈಮಾನ್, ಸುನೀತಾ, ಪ್ರಮೀಳಾ, ಕವಿತಾ, ಸೀತಮ್ಮ, ಸುಂದರಿ, ಸಫಿಯಾ, ಗಿರಿಜ, ಆಶಾಲತಾ, ಬೀಪಾತುಮ, ಮೈಮೂನ, ಮೋಹಿನಿ, ಶೃತಿ, ಲೀಲ, ರೋಹಿಣಿ, ಮೊಹಮದ್ ಹನೀಫ್ ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರಫೀಕ್ ಎಂ.ಕೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಕೆಮ್ಮಿಂಜೆ ವಲಯದ ಮಹಿಳಾ ಘಟಕದ ನೂತನ ಅಧ್ಯಕ್ಷೆಯಾಗಿ ಮಾಲಾ ಸಿಂಗ್ ಆಯ್ಕೆ


ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿದ್ದು, ಇದೀಗ ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತವನ್ನು ಒಪ್ಪಿಕೊಂಡು ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡಿರುವ ಸ್ಥಳೀಯ ನಿವಾಸಿ ಮಹಿಳೆ ಮಾಲಾ ಸುಬ್ಬು ಸಿಂಗ್‌ರವರಿಗೆ ಕಾಂಗ್ರೆಸ್ ಪಕ್ಷದ ಮುಖಂಡರು ಪಕ್ಷದ ಧ್ವಜವನ್ನು ನೀಡಿ ಅಧಿಕೃತವಾಗಿ ಸೇರ್ಪಡೆಗೊಳಿಸಿದರು. ಮುಖಂಡೆ ದಿವ್ಯಪ್ರಭ ಗೌಡ ಚಿಲ್ತಡ್ಕರವರು ಮಾಲಾ ಸಿಂಗ್‌ರವರಿಗೆ ಶಾಲು ಹೊದಿಸಿ ಗೌರವಿಸಿದರು. ಅಲ್ಲದೆ ಮಾಲಾ ಸಿಂಗ್‌ರವರ ತಂದೆ ಪ್ರತಾಪ್ ಸಿಂಗ್, ಮಗ ಆಕಾಶ್‌ರವರು ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡರು. ಮಾಲಾ ಸುಬ್ಬು ಸಿಂಗ್‌ರವರು ಕೆಮ್ಮಿಂಜೆ ವಲಯದ ಮಹಿಳಾ ಘಟಕದ ನೂತನ ಅಧ್ಯಕ್ಷೆಯನ್ನಾಗಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ್ ರೈಯವರು ಘೋಷಿಸಿದರು.

ಮಾಲಾ ಸುಬ್ಬು ಸಿಂಗ್ ಕಾಂಗ್ರೆಸ್ ಸೇರ್ಪಡೆ ವಿಚಾರ
ಬಿಜೆಪಿ ಪ್ರಾಥಮಿಕ ಸದಸ್ಯರಲ್ಲದವರನ್ನು ಬಿಜೆಪಿಯಿಂದ ಬಂದವರೆಂದು ಬಿಂಬಿಸುವುದು ಕಾಂಗ್ರೆಸ್ ಹುಚ್ಚುತನ-ಬಿಜೆಪಿ ನಗರ ಮಂಡಲದ ಅಧ್ಯಕ್ಷರ ಸ್ಪಷ್ಟನೆ
ಮಾಲಾ ಸುಬ್ಬು ಸಿಂಗ್‌ರವರು ಕಾಂಗ್ರೆಸ್ ಸೇರ್ಪಡೆಗೊಂಡಿರುವ ಕುರಿತಂತೆ ಪ್ರತಿಕ್ರಿಯಿಸಿರುವ ಬಿಜೆಪಿ ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್‌ರವರು, ಬಿಜೆಪಿಯ ಪ್ರಾಥಮಿಕ ಸದಸ್ಯರಲ್ಲದದವರನ್ನು ಕಾಂಗ್ರೆಸ್‌ಗೆ ಸೇರ್ಪಡೆಗೊಳಿಸಿ ಬಿಜೆಪಿಯಿಂದ ಬಂದವರೆಂದು ಬಿಂಬಿಸುವುದು ಕಾಂಗ್ರೆಸ್ ಹುಚ್ಚುತನ ಆಗಿದೆ. ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರಿಗೆ ಕೊರತೆಯುಂಟಾಗಿ ಹತಾಶ ಮನೋಭಾವನೆಯಿಂದ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆಯದ ಅಥವಾ ಪಕ್ಷದ ಯಾವುದೇ ಜವಾಬ್ದಾರಿ ಇಲ್ಲದವರನ್ನು ಕಾಂಗ್ರೆಸ್‌ಗೆ ಸೇರ್ಪಡೆಗೊಳಿಸಿ ಬಿಜೆಪಿಯಿಂದ ಬಂದವರೆಂದು ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಜವಾಬ್ದಾರಿಯನ್ನು ನಿಭಾಯಿಸುತ್ತೇನೆ..
ಕಾಂಗ್ರೆಸ್ ಪಕ್ಷಕ್ಕೆ ಸರ್ವರ ಸಮ್ಮುಖದಲ್ಲಿ ಸೇರಿಕೊಂಡ ತಕ್ಷಣವೇ ಮಾಲಾ ಸಿಂಗ್‌ರವರನ್ನು ಕೆಮ್ಮಿಂಜೆ ವಲಯದ ಮಹಿಳಾ ಘಟಕದ ನೂತನ ಅಧ್ಯಕ್ಷೆಯನ್ನಾಗಿ ಘೋಷಿಸಲಾಗಿದ್ದು, ಹುದ್ದೆಯನ್ನು ಸ್ವೀಕರಿಸಿದ ಮಾಲಾ ಸಿಂಗ್‌ರವರು, ತನ್ನಲ್ಲಿ ವಿಶ್ವಾಸವಿಟ್ಟು ಪಕ್ಷದ ಅಭಿವೃದ್ಧಿಗೆ ಮುಖಂಡರು ಆಯ್ಕೆ ಮಾಡಿದ್ದಕ್ಕೆ ಕೃತಜ್ಞತೆಗಳು. ಸರ್ವರ ಸಹಕಾರದೊಂದಿಗೆ ತನಗೆ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತೇನೆ ಜೊತೆಗೆ ಕಾಂಗ್ರೆಸ್ ಪಕ್ಷವನ್ನು ಬಲಿಷ್ಟವಾಗಿ ಕಟ್ಟಲು ಶ್ರಮಿಸುತ್ತೇನೆ ಎಂದು ಮಾಲಾ ಸಿಂಗ್‌ರವರು ಹೇಳಿದರು.

LEAVE A REPLY

Please enter your comment!
Please enter your name here