![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ನಡೆಸುತ್ತಿರುವ ಜನಾರೋಗ್ಯ ಆಂದೋಲನದ ಭಾಗವಾಗಿ ಬೃಹತ್ ಕಾಲ್ನಡಿಗೆ ಜಾಥಾ ಮತ್ತು ’ಜನಾರೋಗ್ಯಕ್ಕಾಗಿ ನಾವು’ ಎಂಬ ಸಮಾವೇಶ ಮಾ.30ರಂದು ಪುತ್ತೂರು ಜೈನ ಭವನದಲ್ಲಿ ಬೆಳಿಗ್ಗೆ ನಡೆಯಲಿದೆ ಎಂದು ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಜೇವಿಯರ್ ಡಿಸೋಜಾ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಗ್ರಹಿಸುವುದು ನಮ್ಮ ಸಮಿತಿ ಗುರಿಯಾಗಿದ್ದು, ಬೆಳಿಗ್ಗೆ ದರ್ಬೆ ವೃತ್ತದಿಂದ ಜಾಥಾ ಆರಂಭಗೊಂಡು ಜೈನ ಭವನದಲ್ಲಿ ಸಮಾವೇಶಗೊಳ್ಳಲಿದೆ. ಈಗಾಗಾಲೇ ಸುಮಾರು 30ಸಾವಿರ ಜನರನ್ನು ನೇರವಾಗಿ ಸಂಪರ್ಕಿಸಿ ಅವರಿಗೆ ಆಂದೋಲನದ ವಿಚಾರವನ್ನು ಮನವರಿಕೆ ಮಾಡಿದ್ದೇವೆ. ಚುನಾವಣಾ ಪಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ರಾಜಕೀಯ ಪಕ್ಷವನ್ನು ಭೇಟಿ ಮಾಡಿದ್ದೇವೆ. ಸಮಾವೇಶದಲ್ಲಿ ರಾಜಕೀಯ ಪಕ್ಷದವರನ್ನು ಆಹ್ವಾನಿಸಿದ್ದೇವೆ. ಶಾಸಕರನ್ನು ಕರೆದಿದ್ದೇವೆ. ಅವರು ಬರುತ್ತೇನೆ ಎಂದು ತಿಳಿಸಿದ್ದಾರೆ. ಇಲ್ಲವಾದಲ್ಲಿ ಪಕ್ಷದಿಂದ ಪ್ರತಿನಿಧಿಯನ್ನಾದರೂ ಕಳಿಸಿಕೊಡುತ್ತೇನೆಂದು ಹೇಳಿದ್ದಾರೆ. ಸುಮಾರು ಒಂದೂವರೆ ಸಾವಿರಕ್ಕೂ ಮಿಕ್ಕಿ ಜನರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿ ಉಪಾಧ್ಯಕ್ಷರಾದ ವಿಶ್ವಪ್ರಸಾದ್ ಸೇಡಿಯಾಪು, ಬಾಲಕೃಷ್ಣ ಬೋರ್ಕರ್, ಸದಸ್ಯ ಲೋಕೇಶ್ ಅಲುಂಬುಡ ಉಪಸ್ಥಿತರಿದ್ದರು.