ಬೆಂಗಳೂರು ಕಂಬಳ: ಸಿ ಎಂ ಸಿದ್ದರಾಮಯ್ಯರಿಗೆ ಆಹ್ವಾನ

0

ರೂ.2ಕೋಟಿ ಅನುದಾನ, ಇಲಾಖೆಗಳ ಸಹಕಾರಕ್ಕೆ ಮನವಿ

ಪುತ್ತೂರು: ನವೆಂಬರ್ 25 ಮತ್ತು 26 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕಂಬಳದ ಕುರಿತು ಚರ್ಚಿಸಲು ಅ.12 ರಂದು ಕಂಬಳ ಸಮಿತಿ ಅಧ್ಯಕ್ಷ ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದ ಕಂಬಳ ಸಮಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.


ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಕರಾವಳಿಯ ಜನಪದ ಕ್ರೀಡೆ ಕಂಬಳವನ್ನು ರಾಜಧಾನಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಅರಮನೆ ಮೈದಾನದಲ್ಲಿ ನಡೆಯಲಿರುವ ಕಂಬಳಕ್ಕೆ ಮುಖ್ಯಮಂತ್ರಿಯವರಿಗೆ ಆಹ್ವಾನವನ್ನು ನೀಡಿ ಮಾತುಕತೆ ನಡೆಸಿದ ಕಂಬಳ ಸಮಿತಿಯ ಅಧ್ಯಕ್ಷ, ಶಾಸಕರಾದ ಅಶೋಕ್ ರೈಯವರು ಕಂಬಳಕ್ಕೆ ಬುರುವಂತೆ ಮೊದಲ ಆಹ್ವಾನ ನೀಡಿದರು. ಬಳಿಕ ಅವರೊಂದಿಗೆ ಚರ್ಚೆ ನಡೆಸಿದ ಶಾಸಕರು ಕಂಬಳಕ್ಕೆ ವಿವಿಧ ಇಲಾಖೆಯಿಂದ ಸಹಕಾರ ಬೇಕಾಗಿದ್ದು ಸಹಕಾರ ನೀಡುವಂತೆ ಇಲಾಖೆಗೆ ಸೂಚನೆಯನ್ನು ನೀಡುವಂತೆ ಕೇಳಿಕೊಂಡರು. ಕಂಬಳಕ್ಕೆ ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು ದೇಶ , ವಿದೇಶಗಳ ಸೆಲೆಬ್ರಿಟಿಗಳು ಭಾಗವಹಿಸುವ ಕಾರಣ ಬೆಂಗಳೂರು ಟ್ರಾಫಿಕ್ ಸಮಸ್ಯೆಯ ಬಗ್ಗೆಯೂ ಮಾಹಿತಿ ನೀಡಲಾಯಿತು.

2 ಕೋಟಿ ಅನುದಾನಕ್ಕೆ ಮನವಿ
ಮೊಟ್ಟ ಮೊದಲ ಬಾರಿಗೆ ರಾಜ್ಯದ ರಾಜಧಾನಿಯಲ್ಲಿ ನಡೆಯುವ ಕಂಬಳಕ್ಕೆ ಸುಮಾರು 7 ಕೋಟಿಗೂ ಮಿಕ್ಕಿ ಖರ್ಚಾಗಲಿದ್ದು ಸರಕಾರ ಕಂಬಳಕ್ಕೆ 2 ಕೋಟಿ ಅನುದಾನವನ್ನು ನೀಡುವಂತೆ ಸಿ ಎಂ ಅವರಿಗೆ ಮನವಿ ಸಲ್ಲಿಸಿದರು. ದ ಕ ಮತ್ತು ಉಡುಪಿ ಜಿಲ್ಲೆಯಿಂದ ಸುಮಾರು 125 ಮಿಕ್ಕಿ ಜೋಡಿ ಕೋಣಗಳು ಭಾಗವಹಿಸಲಿದ್ದು ಕೋಣಗಳಿಗೆ ನೀರಿನಿಂದ ಹಿಡಿದು ಆಹಾರದ ತನಕ ಎಲ್ಲವನ್ನೂ ಕರಾವಳಿ ಜಿಲ್ಲೆಯಿಂದ ಪೂರೈಕೆ ಮಾಡಬೇಕಾಗಿದೆ. ಹೊಸ ಕರೆ ನಿರ್ಮಾಣ ಸೇರಿದಂತೆ ಎಲ್ಲಾ ಖರ್ಚುಗಳು ದುಬಾರಿಯಾಗಲಿರುವ ಕಾರಣ ಸರಕಾರದಿಂದ ಅನುದಾನವನ್ನು ನೀಡುವಂತೆ ಮನವಿ ಮಾಡಿದರು. ಶಾಸಕರ ಮನವಿಗೆ ಮುಖ್ಯಮಂತ್ರಿಗಳು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.
ಕಂಬಳ ಸಮಿತಿಯ ಪ್ರಮುಖ ಸಂಗೀತ ನಿರ್ದೇಶಕ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಗುರುಕಿರಣ್, ಪ್ರಮುಖರಾದ ಗುರುರಂಜನ್, ಗುಣರಾಜ್ ಶೆಟ್ಟಿ, ಸುಂದರ ರಾಜ್ ರಐ, ಮುರಳೀಧರ್ ರೈ ಮಠಂತಬೆಟ್ಟು, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಕಂದಾಯ ಸಚಿವರ ಭೇಟಿ
ಇದೇ ಸಂದರ್ಭದಲ್ಲಿ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರನ್ನು ಭೇಟಿಯಾದ ಶಾಸಕ ಅಶೋಕ್ ರೈಯವರು ಕಂಬಳಕ್ಕೆ ಆಹ್ವಾನ ನೀಡಿದ್ದು ಮಾತ್ರವಲ್ಲದೆ ಇಲಾಖೆಯಿಂದ ಸಹಕಾರವನ್ನು ಕೋರಿದರು.

ಬೆಂಗಳೂರಿನಲ್ಲಿ ನಡೆಯುವ ನಮ್ಮ ಕಂಬಳಕ್ಕೆ ಗುರುವಾರದಂದು ಸಿಎಂ ಅವರನ್ನು ನಾವು ಭೇಟಿಯಾಗಿ ಮಾತುಕತೆ ನಡೆಸಿದ್ದೇವೆ. ಕಂಬಳಕ್ಕೆ ಆಹ್ವಾನ ನೀಡುವುದರ ಜೊತೆಗೆ ಇಲಾಖೆಯ ಸಹಕಾರ ಮತ್ತು ಅನುದಾನವನ್ನು ಕೇಳಿದ್ದೇವೆ. ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆಯನ್ನು ನೀಡಿದ್ದಾರೆ. ಎಲ್ಲರ ಸಹಕಾರದಿಂದ ಬೆಂಗಳೂರು ಕಂಬಳ ಯಶಸ್ವಿಯಾಗಿ ನಡೆಯಲಿದ್ದು ದೇಶ ವಿದೇಶಗಳಲ್ಲಿ ತುಳುನಾಡಿನ ಜನಪದ ಕಲೆ ಪ್ರಚಾರವಾಗಲಿದೆ ಎಂಬ ಸಂತೃಪ್ತಿ ನಮ್ಮಲ್ಲಿದೆ
ಅಶೋಕ್ ರೈ ಕಂಬಳ ಸಮಿತಿ ಅಧ್ಯಕ್ಷರು
ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here