ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿದ್ಯಾಭಾರತಿ ಉಚ್ಚ ಶಿಕ್ಷ ಸಂಸ್ಥಾನ ಕ್ಷೇತ್ರೀಯ ಕಾರ್ಯಗಾರ

0

ಪುತ್ತೂರು:ಸಮಾಜ ಅಭಿವೃದ್ಧಿಗೊಳ್ಳುವಂತಹ ನಮ್ಮ ಸಂಸ್ಕೃತಿಯನ್ನು ಬೆಳೆಸುವಂತಹ ಗುಣಮಟ್ಟದ ಶಿಕ್ಷಣವನ್ನು ಇಂದು ಶಿಕ್ಷಣ ಸಂಸ್ಥೆಗಳು ನೀಡಬೇಕಾಗಿದೆ.ಅಂತಹ ಯೋಜನೆಗಳು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿದೆ. ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಆಸಕ್ತಿಯನ್ನು ಹೊಂದಿರುತ್ತಾರೆ, ಅವರಿಗೆ ಪ್ರೋತ್ಸಾಹ ದೊರಕುವಂತಹ ಶಿಕ್ಷಣ ಇಂದಿನ ಪೀಳಿಗೆಗೆ ಸಿಗಬೇಕಾಗಿದೆ ಈ ರೀತಿಯ ಒಳ್ಳೆಯ ಕಾರ್ಯವನ್ನು ವಿದ್ಯಾಭಾರತಿ ಸಂಸ್ಥೆಯು ಮಾಡುತ್ತಾ ಬಂದಿದೆ ಎಂದು ವಿದ್ಯಾಭಾರತಿ ಉಚ್ಛಶಿಕ್ಷಾ ಸಂಸ್ಥೆ ಇದರ ರಾಷ್ಟ್ರೀಯ ಅಧ್ಯಕ್ಷ ಪ್ರೊ. ಕೈಲಾಶ್ ಚಂದ್ರ ಶರ್ಮ ಹೇಳಿದರು.


ಇವರು ಪುತ್ತೂರಿನ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯ ದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ ವಿದ್ಯಾಭಾರತಿ ಉಚ್ಚ ಶಿಕ್ಷ ಸಂಸ್ಥಾನ ಕ್ಷೇತ್ರಿಯ ಕಾರ್ಯಶಾಲಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.


ನ್ಯಾಕ್ ನಿರ್ದೇಶಕ ಗಣೇಶ್ ಕಣ್ಣಬೀರನ್ ಮಾತನಾಡಿ ರಾಷ್ಟ್ರೀಯ ಶಿಕ್ಷಣ ನೀತಿಯು ನಮ್ಮ ಜೀವನಕ್ಕೆ ಬೇಕಾಗಿರುವ ಅಂಶಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಯು ಈ ಯೋಜನೆಯ ಮುಖ್ಯವಾದ ಅಂಶಗಳಲ್ಲೊಂದು ಮತ್ತು ಇದು ನಮಗೆ ಪ್ರಾಯೋಗಿಕವಾದ ಜ್ಞಾನವನ್ನು ಒದಗಿಸುತ್ತದೆ ಹಾಗೂ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ವಿಷಯವನ್ನು ಕಲಿಯಲು ಅವಕಾಶವಿದೆ.ಅದಲ್ಲದೆ ಪ್ರಸ್ತುತ ಅವಶ್ಯಕವಾಗಿ ನಮ್ಮ ಜೀವನಕ್ಕೆ ಬೇಕಾದ ಯೋಗ ಮತ್ತು ಕ್ರೀಡೆ ಯನ್ನು ಇದು ಒಳಗೊಂಡಿದೆ. ನಮ್ಮ ದೇಶ ಆರ್ಥಿಕತೆ ವೈದ್ಯಕೀಯ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿಯತ್ತ ಸಾಗಿದೆ. ದೇಶದಲ್ಲಿ, ಉಳಿದಿರುವ ಸಮಸ್ಯೆಗಳನ್ನು ಹೋಗಲಾಡಿಸುವಂತಹ ಶಿಕ್ಷಣವನ್ನು ಕಲಿಯುವ ಅವಕಾಶ ನಮ್ಮದಾಗಿಸಿಕೊಳ್ಳಬೇಕು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.


ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನದ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ ರಾವ್ ಮಾತನಾಡಿ ಇಂದಿನ ಯುವ ಜನತೆಗೆ ಬೇಕಾದ ಗುಣಮಟ್ಟದ ಶಿಕ್ಷಣವನ್ನು ವಿದ್ಯಾ ಭಾರತಿ ನೀಡುತ್ತಾ ಬಂದಿದೆ. ಭಾರತೀಯ ಚಿಂತನೆಯನ್ನು ಒಳಗೊಂಡಂತೆ ಜಾಗತಿಕವಾಗಿ ಮುಂದುವರೆಯುವ ಮತ್ತು ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವುದು ಇದರ ಗುರಿಯಾಗಿದೆ. ಸಮಾಜಕ್ಕೆ ಒಳಿತನ್ನು ಮಾಡುವ ವ್ಯಕ್ತಿತ್ವ ನಿರ್ಮಾಣ ಮಾಡುವುದು ಮತ್ತು ಉತ್ತಮ ಜ್ಞಾನವನ್ನು ನೀಡುವುದು ವಿದ್ಯಾ ಭಾರತೀಯ ಉದ್ದೇಶವಾಗಿದೆ ಎಂದರು.


ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ. ಎಂ ಕೃಷ್ಣ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀರಾಮ ಫಸ್ಟ್ ಗ್ರೇಡ್ ಕಾಲೇಜ್ ಕಲ್ಲಡ್ಕ ಇದರ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಲ್ಲಡ್ಕ ಸ್ವಾಗತಿಸಿ, ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ತೆಂಕಿಲ ಇದರ ಪ್ರಾಂಶುಪಾಲೆ ಡಾ. ಶೋಭಿತ ಸತೀಶ್ ವಂದಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು.

LEAVE A REPLY

Please enter your comment!
Please enter your name here