ಸಿಎಲ್‌ಸಿಯಿಂದ ಮೊ|ಪತ್ರಾವೋ ಅಂತರ್-ವಾಳೆ ಕ್ರಿಕೆಟ್ ಉದ್ಘಾಟನೆ

0

ಸ್ವಾರ್ಥ ಬದಿಗಿರಿಸಿ ಪ್ರಾಮಾಣಿಕತೆ, ಒಗ್ಗಟ್ಟು, ಹೃದಯಶ್ರೀಮಂತಿಕೆ ನಮ್ಮದಾಗಲಿ-ವಂ|ಲಾರೆನ್ಸ್ ಮಸ್ಕರೇನ್ಹಸ್

ಪುತ್ತೂರು: ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಮುಂದಿರುವ ಸಿ.ಎಲ್.ಸಿ ಸಂಸ್ಥೆಯು ಹಲವು ವರ್ಷಗಳಿಂದ ಫಲಾನುಭವಿಗಳಿಗೆ ಆಧಾರದ ಸಹಾಯಹಸ್ತ ನೀಡುತ್ತಾ ಬಂದಿದ್ದಾರೆ. ಚರ್ಚ್ ವಾಳೆಯಲ್ಲಿನ ಯುವ ಸಮೂಹ ಒಗ್ಗಟ್ಟಿನಲ್ಲಿರಬೇಕು ಎನ್ನುವ ದೃಷ್ಟಿಕೋನದಿಂದ ಸಿ.ಎಲ್.ಸಿ ಸಂಸ್ಥೆಯು ಈ ಕ್ರೀಡಾಕೂಟವನ್ನು ಹಮ್ಮಿಕೊಳ್ಳುತ್ತಿದ್ದು ನಮ್ಮಲ್ಲಿನ ಸ್ವಾರ್ಥ ಬದಿಗಿರಿಸಿ ಪ್ರಾಮಾಣಿಕತೆ, ಒಗ್ಗಟ್ಟು, ಹೃದಯಶ್ರೀಮಂತಿಕೆಯನ್ನು ಬೆಳೆಸಿಕೊಂಡಾಗ ಸಮುದಾಯದಲ್ಲಿ ಶಾಂತಿ, ನೆಮ್ಮದಿ ನೆಲೆಸಿಕೊಳ್ಳುತ್ತದೆ ಎಂದು ಸಿ.ಎಲ್.ಸಿ ಸಂಘಟನೆಯ ಆತ್ಮೀಕ ನಿರ್ದೇಶಕ ಹಾಗೂ ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ರವರು ಹೇಳಿದರು.


ಮಾಯಿದೆ ದೇವುಸ್ ಚರ್ಚ್ ಅಧೀನದಲ್ಲಿರುವ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ(ಸಿಎಲ್‌ಸಿ) ಸಂಸ್ಥೆಯ ವತಿಯಿಂದ ‘ಒಗ್ಗಟ್ಟಿಗಾಗಿ ಕ್ರೀಡೆ’ ಎಂಬ ಧ್ಯೇಯವಾಕ್ಯದಡಿಯಲ್ಲಿ ವರ್ಷಂಪ್ರತಿ ಹಮ್ಮಿಕೊಳ್ಳುವ ಮೊ|ಆಂಟನಿ ಪತ್ರಾವೋ ಸ್ಮರಣಾರ್ಥ 31ನೇ ವರ್ಷದ ಅಂತರ್-ವಾಳೆ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಜ.7 ರಂದು ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜ್‌ನ ಕ್ರೀಡಾಂಗಣದಲ್ಲಿ ಜರಗಿದ್ದು, ಈ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಮುಖ್ಯ ಅತಿಥಿ, ಸೇಡಿಯಾಪು ಕೋಸ್ಟಲ್ ಕೋಕನಟ್ ಇಂಡಸ್ಟ್ರೀ ಮಾಲಕ ಡೆನ್ನಿಸ್ ಮಸ್ಕರೇನ್ಹಸ್ ಮಾತನಾಡಿ, ಸೇವೆ, ತ್ಯಾಗ, ಪ್ರೀತಿಯ ಪ್ರತೀಕವಾಗಿರುವ ಶಿಕ್ಷಣ ಶಿಲ್ಪಿ ಮೊ|ಪತ್ರಾವೋರವರ ಹೆಸರಿನಲ್ಲಿ ಹಲವಾರು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಈ ಕ್ರಿಕೆಟ್ ಪಂದ್ಯಾಟವು ಸಮಾಜದಲ್ಲಿ ಉತ್ತಮವಾದ ಹೆಸರನ್ನು ಗಳಿಸಿದೆ. ಕ್ರೀಡೆಯಿಂದ ನಮಗೆ ದೈಹಿಕ ಹಾಗೂ ಮಾನಸಿಕವಾದ ಆರೋಗ್ಯ ಲಭಿಸುತ್ತದೆ. ಸೋಲು-ಗೆಲುವು ಮುಖ್ಯವಲ್ಲ, ಬದಲಾಗಿ ಕ್ರೀಡಾಪಟುಗಳು ಕ್ರೀಡಾಸ್ಪೂರ್ತಿಯಿಂದ ಆಡುವುದು ಬಹಳ ಮುಖ್ಯವಾಗಿದೆ ಎಂದರು.


ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟ ಮಾತನಾಡಿ, ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಯ ಫಲಾನುಭವಿಗಳಿಗೆ ನಾನಾ ರೀತಿಯಲ್ಲಿ ಸಿ.ಎಲ್.ಸಿ ಸಂಸ್ಥೆಯು ಸೇವೆಯನ್ನು ನೀಡುತ್ತಾ ಬಂದಿದೆ. ಈ ಸೇವೆಯು ಮುಂದಿನ ದಿನಗಳಲ್ಲಿ ನಿರಂತರ ಮುಂದುವರೆಯಲಿ. ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯ ಎಂದರು.


ಸಿ.ಎಲ್.ಸಿ ಸದಸ್ಯರು ಸಿ.ಎಲ್.ಸಿ ಪ್ರಾರ್ಥನಾ ಗೀತೆಯನ್ನಾಡಿದರು. ವೇದಿಕೆಯಲ್ಲಿ ಸಿ.ಎಲ್.ಸಿ ಕಾರ್ಯದರ್ಶಿ ರುಡೋಲ್ಫ್ ಪಿಂಟೊ ಉಪಸ್ಥಿತರಿದ್ದರು. ಸಿ.ಎಲ್.ಸಿ ಅಧ್ಯಕ್ಷ ಎಲ್ಯಾಸ್ ಪಿಂಟೊ ಸ್ವಾಗತಿಸಿ, ಉಪಾಧ್ಯಕ್ಷ ದೀಪಕ್ ಮಿನೇಜಸ್ ವಂದಿಸಿದರು. ಸದಸ್ಯರಾದ ಪಾವ್ಲ್ ಹೆರಾಲ್ಡ್ ಮಸ್ಕರೇನ್ಹಸ್, ವಿನ್ಸೆಂಟ್ ಮಸ್ಕರೇನ್ಹಸ್, ಉಪಾಧ್ಯಕ್ಷ ದೀಪಕ್ ಮಿನೇಜಸ್ ರವರು ಅತಿಥಿಗಳಿಗೆ ಶಾಲು ಹೊದಿಸಿ ಸ್ವಾಗತಿಸಿದರು. ಸದಸ್ಯ ವಿಲಿಯಂ ನೊರೋನ್ಹಾ ಕಾರ್ಯಕ್ರಮ ನಿರೂಪಿಸಿದರು.

ಮೊ|ಪತ್ರಾವೋರವರ ಪ್ರತಿಮೆಗೆ ಹಾರಾರ್ಪಣೆ…
ಕಳೆದ 30 ವರ್ಷಗಳಿಂದ ಶಿಕ್ಷಣ ಶಿಲ್ಪಿ ಮೊ|ಪತ್ರಾವೋರವರ ಹೆಸರಿನಲ್ಲಿ ಸಿ.ಎಲ್.ಸಿ ಸಂಸ್ಥೆಯು ಶಿಸ್ತುಬದ್ಧವಾಗಿ ಯಶಸ್ವಿಯಾಗಿ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸುತ್ತಾ ಬಂದಿರುತ್ತದೆ. ಮಾತ್ರವಲ್ಲ, ಕ್ರಿಕೆಟ್ ಪಂದ್ಯಾಟ ಆರಂಭಕ್ಕೆ ಮುಂಚಿತವಾಗಿ ಫಿಲೋಮಿನಾ ಪ್ರೌಢಶಾಲೆಯ ಬಳಿಯಿರುವ ಮೊ|ಪತ್ರಾವೋರವರ ಪ್ರತಿಮೆಗೆ ಹಾರಾರ್ಪಣೆ ಹಾಕಿ ಗೌರವ ಸಲ್ಲಿಸುವುದು ವಾಡಿಕೆ. ಅದರಂತೆ ಈ ಬಾರಿಯೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಿ.ಎಲ್.ಸಿ ಸಂಸ್ಥೆಯ ಆತ್ಮೀಕ ನಿರ್ದೇಶಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್ ರವರು ಮೊ|ಪತ್ರಾವೋರವರ ಪ್ರತಿಮೆಗೆ ಹಾರಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಿ.ಎಲ್.ಸಿ ಸಂಸ್ಥೆಯ ಸದಸ್ಯರು ಸಿ.ಎಲ್.ಸಿ ಲೋಗೊದೊಂದಿಗೆ ನೀಲಿ-ಹಳದಿ ಬಣ್ಣದ ಜೆರ್ಸಿಯೊಂದಿಗೆ ಉಪಸ್ಥಿತರಿದ್ದರು.

17 ವಾಳೆಗಳು..
ಮಾದೆ ದೇವುಸ್ ಚರ್ಚ್ ವ್ಯಾಪ್ತಿಯ 19 ವಾಳೆಗಳ ಪೈಕಿ 17 ವಾಳೆಗಳಾದ ಬಲ್ನಾಡು, ದರ್ಬೆ, ಗುಂಡ್ಯಡ್ಕ, ಹಾರಾಡಿ, ಕಲ್ಲಾರೆ, ಪದವು, ಪಾಂಗ್ಲಾಯಿ, ಪರ್ಲಡ್ಕ, ನಿತ್ಯಾಧರ್, ಪುತ್ತೂರು, ರೋಟರಿಪುರ, ಸಾಲ್ಮರ, ಸಾಮೆತ್ತಡ್ಕ, ಸಂಟ್ಯಾರು, ಶಿಂಗಾಣಿ, ತೆಂಕಿಲ, ಮಿತ್ತೂರು ವಾಳೆ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸುತ್ತಿದೆ.

LEAVE A REPLY

Please enter your comment!
Please enter your name here