ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 2.50 ಕೋಟಿ ರೂ ಕಾಮಗಾರಿಗಳಿಗೆ ಚಾಲನೆ

0

ಗ್ಯಾರಂಟಿ ಯೋಜನೆಯಿಂದ ಅನುದಾನ ಬರುತ್ತಿಲ್ಲ ಎಂಬುದು ಬಿಜೆಪಿಯ ಸುಳ್ಳು ಪ್ರಚಾರ-ಶಾಸಕ ಅಶೋಕ್ ರೈ


ವಿಟ್ಲ: ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆ ಜಾರಿಯಾದ ಬಳಿಕ ಅಭಿವೃದ್ದಿ ಕಾಮಗಾರಿಗೆ ಯಾವುದೇ ಅನುದಾನವನ್ನು ನೀಡುತ್ತಿಲ್ಲ ಎಂಬುದು ಬಿಜೆಪಿಗರ ಸುಳ್ಳು ಪ್ರಚಾರವಾಗಿದ್ದು , ಗ್ಯಾರಂಟಿ ಯೋಜನೆಯನ್ನು ಜನರ ಮನೆ ಬಾಗಿಲಿಗೆ ತಲುಪಿಸಿದ್ದು ಮಾತ್ರವಲ್ಲದೆ ಪ್ರತೀ ಗ್ರಾಮಗಳ, ಪಟ್ಟಣಗಳ ಅಭಿವೃದ್ದಿಗೆ ಕೋಟಿಗಟ್ಟಲೆ ಅನುದಾನವನ್ನು ನೀಡುತ್ತಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.


ಅವರು ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 2.58 ಕೋಟಿ ರೂ ಅನುದಾನ ರಸ್ತೆ ಹಾಗೂ ವಿವಿಧ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.


ವಿಟ್ಲ ಪಟ್ಟಣ ಪಂಚಾಯತ್ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರೀ ಮೊತ್ತದ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಇಲ್ಲಿ ಅನೇಕ ವರ್ಷಗಳಿಂದ ಆಗದೇ ಇರುವ ರಸ್ತೆಗಳಿಗೆ ಈ ಬಾರಿ ಕಾಂಕ್ರೀಟ್ ಭಾಗ್ಯ ದೊರಕಿದೆ. ಕಾಂಗ್ರೆಸ್ ಎಂದರೆ ಅಭಿವೃದ್ದಿ ಎಂದು ಜನರಿಗೆ ಗೊತ್ತಾಗಿದೆ. ನಾವು ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ಮೋಸ ಮಾಡುವುದಿಲ್ಲ ನಾವು ಹೇಳಿದ್ದನ್ನು ಮಾಡಿಯೇ ಮಾಡುತ್ತೇವೆ ಎಂದು ಹೇಳಿದರು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಜನ ನೆಮ್ಮದಿಯಿಂದ ಇದ್ದಾರೆ ಎಂದು ಶಾಸಕರು ಹೇಳಿದರು.

ಸರಕಾರದಿಂದ ಮಹಿಳೆಯರಿಗೆ ಮಾಸಿಕ ಸಂಬಳ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಪ್ರತೀ ಮಹಿಳೆಯರಿಗೆ ತಿಂಗಳಿಗೆ 2000ದಂತೆ ಸಂಬಳ ರೂಪದಲ್ಲಿ ನೀಡುತ್ತಿದೆ. ಇದು ರಾಜ್ಯದ ಮಹಿಳೆಯರು ಸ್ವಾಭಿಮಾನದಿಂದ ಬದುಕಲು ಮಾಡಿದ ಯೋಜನೆಯಾಗಿದೆ. ಈ ಯೋಜನೆಯಿಂದ ಪ್ರತೀ ಕುಟುಂಬವೂ ಸಂತೃಪ್ತ ಜೀವನ ನಡೆಸುವಂತಾಗಿದೆ ಎಂದು ಹೇಳಿದರು. ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳು ಎಂದೂ ನಿಲ್ಲುವುದಿಲ್ಲ. ಗ್ಯಾರಂಟಿ ಯೋಜನೆ ವಿರುದ್ದ ಬಿಜೆಪಿ ಎಷ್ಟೇ ಅಪಪ್ರಚಾರ ಮಾಡಿದರೂ ಅದನ್ನು ನಾವು ಇನ್ನು ಮುಂದೆ ಅಧಿಕಾರಕ್ಕೆ ಬಂದಾಗಲೂ ಕೊಟ್ಟೇ ಕೊಡ್ತೀವಿ ಎಂದು ಹೇಳಿದರು.

ಅಭಿವೃದ್ದಿಯಲ್ಲಿ ನಾವೇ ಮುಂದು
ಅಭಿವೃದ್ದಿಯಲ್ಲಿ ನಾವೇ ಮುಂದು. ಇಷ್ಟು ವರ್ಷಗಳ ಕಾಲ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಗೆ ಇಷ್ಟೊಂದು ಮೊತ್ತದ ಅನುದಾನವನ್ನು ನೀಡಿಲ್ಲ. ಬಿಜೆಪಿಗರು ಕೇವಲ ಬೊಗಳೆ ಬಿಟ್ಟು ಜನರನ್ನು ಮೋಸ ಮಾಡಿ ಅಧಿಕಾರಕ್ಕೆ ಬರುತ್ತಾರೆ. ಅಧಿಕಾರಕ್ಕೆ ಬಂದ ಬಳಿಕ ಜನರನ್ನು ಮರೆಯುತ್ತಾರೆ. ಧರ್ಮ, ಜಾತಿಯ ಹೆಸರು ಹೇಳಿ ಅಧಿಕಾರ ಪಡೆಯುವ ಬಿಜೆಪಿಗೆ ಜನರ ನೆಮ್ಮದಿ ಮತ್ತು ಅಭಿವೃದ್ದಿ ಬೇಕಾಗಿಲ್ಲ ಎಂದು ಹೇಳಿದರು.

ವಿಟ್ಲಕ್ಕೆ 24/7 ಕುಡಿಯುವ ನೀರು
ಮುಂದಿನ ದಿನಗಳಲ್ಲಿ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ದಿನದ 24 ಗಂಟೆಯೂ ಶುದ್ದ ಕುಡಿಯುವ ನೀರನ್ನು ಒದಗಿಸಲಾಗುತ್ತದೆ. ಜನ ಇನ್ನು ಕುಡಿಯಲು ನೀರಿಲ್ಲ ಎಂದು ಹೇಳುವ ಪರಿಸ್ಥಿತಿ ಇಲ್ಲ. ಫಿಲ್ಟರ್ ವಾಟರ್ ನ್ನು ನಾವು ಕೊಡುತ್ತೇವೆ ಇದಕ್ಕಾಗಿ ಪ್ರತ್ಯೇಕವಾಗಿ 100 ಕೋಟಿ ಅನುದಾನವನ್ನು ಮೀಸಲಿಟ್ಟಿದ್ದೇವೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ಅಶೋಕ್ ರೈ ಶಾಸಕರಾಗಿರುವುದು ಜನರ ಭಾಗ್ಯ; ಮಂಜುನಾಥ ಭಂಡಾರಿ
ಪುತ್ತೂರು ಶಾಸಕರಾಗಿ ಅಶೋಕ್ ಕುಮಾರ್ ರೈ ಆಯ್ಕೆಯಾಗಿರುವುದು ಪುತ್ತೂರು ಜನರ ಭಾಗ್ಯವಾಗಿದೆ. ಸದಾ ತನ್ನ ಕ್ಷೇತ್ರದ ಜನರ ಪರವಾಗಿ ಸರಕಾರದ ಮುಂದೆ ಅನುದಾನಕ್ಕಾಗಿ ಮನವಿ ಸೇರಿದಂತೆ ಅಭಿವೃದ್ದಿ ಕಾಮಗಾರಿ ನಡೆಸುವಂತೆ ಅತೀ ಹೆಚ್ಚು ಒಲವು ತೋರುತ್ತಿರುವುದು ಅವರಿಗೆ ಅಭಿವೃದ್ದಿ ಮೇಲಿರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ದ ಕ ಜಿಲ್ಲೆಯ ಶಾಸಕರ ಪೈಕಿ ಅಶೋಕ್ ರೈಯವರೇ ಅಬಿವೃದ್ದಿಯಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿ, ಮುಖ್ಯಾಧಿಕಾರಿ ಗೋಪಾಲ ,ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ, ಪ್ರವೀಣ್ ಚಂದ್ರ ಆಳ್ವ, ಮುರಳೀಧರ ರೈ ಮಟಂತಬೆಟ್ಟು, ಉಮಾನಾಥ ಶೆಟ್ಟಿ, ರಮಾನಾಥ ವಿಟ್ಲ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ವಿಕೆಎಂ ಅಶ್ರಪ್, ಹಸೈನಾರ್ ನೆಲ್ಲಿಗುಡ್ಡೆ, ಡೀಕಯ್ಯ, ಲತಾವೇಣಿ, ಪದ್ಮಿನಿ, ನಾಮ ನಿರ್ದೇಶನ ಸದಸ್ಯರಾದ ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಶ್ರೀನಿವಾಸ್ ಶೆಟ್ಟಿ, ಸುನೀತಾ ಕೋಟ್ಯಾನ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಭವಾನಿ ರೈ ಕೊಲ್ಯ, ಬೂತ್ ಅಧ್ಯಕ್ಷರಾದ ವಿಕೆಎಂ ಹಂಝ, ಅಬ್ದುಲ್ ರಹಿಮಾನ್ ಕುರುಂಬಳ, ಎಂಕೆ ಮೂಸಾ, ಶೇಕ್ ಅಲಿ, ಮನೋಹರ ಲ್ಯಾನ್ಸಿ ಡಿ ಸೋಜ, ಎಸ್ ಕೆ ಮೊಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here