ಖುರ್ರತುಸ್ಸಾದಾತ್ ಕೂರತ್ ತಂಙಳ್ ಉರೂಸ್ ಉದ್ಘಾಟನೆ

0

ಪುತ್ತೂರು: ಖುರ್ರತುಸ್ಸಾದಾತ್ ಕೂರತ್ ತಂಙಳ್ ಉರೂಸ್ ಕಾರ್ಯಕ್ರಮ ಜೂ.26ರಂದು ಉದ್ಘಾಟನೆಗೊಂಡಿತು. ಸಂಜೆ ಕೂರತ್ ಫಝಲ್ ಜುಮಾ ಮಸ್ಜಿದ್‌ನಿಂದ ಖುರ್ರತುಸ್ಸಾದಾತ್ ಮಖಾಂ ವರೆಗೆ ಪತಾಕೆ ಜಾಥಾ ನಡೆಯಿತು. ಕೂರತ್ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಜಾಥಾಗೆ ಚಾಲನೆ ನೀಡಿದರು.


ನಂತರ ಧ್ವಜಾರೋಹಣ ಹಾಗೂ ಮಖಾಂ ಝಿಯಾರತ್ ನೇತೃತ್ವವನ್ನು ಕೂರತ್ ಉರೂಸ್ ಸ್ವಾಗತ ಸಮಿತಿ ಚೇರ್‌ಮೆನ್ ಅಸ್ಸಯ್ಯದ್ ಕೆ.ಎಸ್ ಆಟ್ಟಕೋಯ ತಂಙಳ್ ಕುಂಬೋಳ್ ವಹಿಸಿದ್ದರು. ಕ್ಯಾಲಿಕಟ್ ಮರ್ಕಝ್ ನಾಲೆಜ್ ಸಿಟಿಯ ಡೈರೆಕ್ಟರ್ ಡಾ.ಎ.ಪಿ ಅಬ್ದುಲ್ ಹಕೀಂ ಅಝ್‌ಹರಿ ಸಹಿತ ಹಲವು ಪ್ರಮುಖ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಮಾತನಾಡಿ ಕೂರತ್ ತಂಙಳ್ ಅವರು ತಮ್ಮ ಜೀವಿತಾವಧಿಯಲ್ಲಿ ಮಾದರಿ ಯೋಗ್ಯವಾದ ಜೀವನ ನಡೆಸಿದ್ದು ಅವರನ್ನು ಅನುಸರಿಸಿಕೊಂಡು ಜೀವನ ನಡೆಸಲು ಪ್ರಯತ್ನಿಸಬೇಕು, ಮಖಾಂ ಝಿಯಾರತ್ ಪುಣ್ಯವೇರಿದ ಕಾರ್ಯವಾಗಿದ್ದು ನಮ್ಮ ಪೂರ್ವಿಕ ಪಂಡಿತರ ಹಾದಿಯಲ್ಲಿ ಮುನ್ನಡೆದರೆ ಇಹಪರ ವಿಜಯ ಸಂಪಾದಿಸಬಹುದು ಎಂದು ಹೇಳಿದರು. ಅಸ್ಸಯ್ಯದ್ ಇಸ್ಮಾಯಿಲ್ ತಂಙಳ್ ಉಜಿರೆ ದುವಾ ನೆರವೇರಿಸಿ ಮಾತನಾಡಿದರು.


ಅಬ್ದುಲ್ ಖಾದರ್ ಮದನಿ ಪಳ್ಳಂಗೋಡು, ರಫೀಕ್ ಸಅದಿ ದೇಲಂಪಾಡಿ, ಅಬ್ದುಲ್ ಖಾದರ್ ಸಖಾಫಿ, ಅಸ್ಸಯ್ಯದ್ ಅಮೀರ್ ತಂಙಳ್, ಅಬ್ದುರ್ರಹ್ಮಾನ್ ಅಹ್ಸನಿ, ಕಾಲಂಬಾಡಿ ಸಹದಿ ಉಸ್ತಾದ್, ಅಶ್ರಫ್ ಸಖಾಫಿ ಮೂಡಡ್ಕ, ಮಹಬೂಬ್ ಸಖಾಫಿ ಮೊದಲಾದವರು ಸಂದರ್ಭೋಚಿತವಾಗಿ ಮಾತನಾಡಿದರು. ಹಲವು ಧಾರ್ಮಿಕ, ಸಾಮಾಜಿಕ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕೂರತ್ ತಂಙಳ್ ಅವರ ನಡೆನುಡಿಗಳು ನಮಗೆ ಆದರ್ಶ-ಸಾದಾತ್ ತಂಙಳ್
ಅಧ್ಯಕ್ಷತೆ ವಹಿಸಿದ್ದ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಬಾಅಲವಿ ಉಲ್ತೂರು ಮಾತನಾಡಿ ಕೂರತ್ ತಂಙಳ್ ಅವರ ನಡೆನುಡಿಗಳು ನಮಗೆ ಆದರ್ಶವಾಗಿದ್ದು ಅದನ್ನು ನಾವೂ ಪಾಲಿಸಬೇಕು, ಪ್ರತಿಯೊಂದು ವಿಚಾರಗಳಲ್ಲೂ ಅಲ್ಲಾಹನ ಮೇಲೆ ದೃಢ ವಿಶ್ವಾಸವಿಡಬೇಕು ಎನ್ನುತ್ತಿದ್ದ ತಂಙಳ್ ಅವರು ಯಾವುದೇ ಜಟಿಲ ಸಮಸ್ಯೆಗಳು ಎದುರಾದರೂ ಅದನ್ನು ಅಲ್ಲಾಹು ನೋಡಿಕೊಳ್ಳುತ್ತಾನೆ ಎನ್ನುವ ಮೂಲಕ ಅಲ್ಲಾಹನಿಗೆ ಸಮರ್ಪಿಸುತ್ತಿದ್ದರು ಎಂದು ಹೇಳಿದರು.


ಕೆ.ವೈ ಹಂಝ ಮದನಿ ಗುರುವಾಯನಕೆರೆ ಸ್ವಾಗತಿಸಿದರು. ಅಬ್ದುಲ್ ಹಮೀದ್ ಸಖಾಫಿ ಬೆಳಂದೂರು ವಂದಿಸಿದರು.ಮಗ್ರಿಬ್ ನಮಾಜಿನ ಬಳಿಕ ಸಯ್ಯಿದ್ ಅಬ್ದುರ್ರಹ್ಮಾನ್ ಮಸ್‌ಊದ್ ತಂಙಳ್ ಅಲ್ ಬುಖಾರಿ ಕೂರತ್ ನೇತೃತ್ವದಲ್ಲಿ ಸ್ವಲಾತ್ ಮಜ್ಲಿಸ್ ನಡೆಯಿತು. ಬಳಿಕ ನೌಫಲ್ ಸಖಾಫಿ ಕಳಸರವರಿಂದ ಮುಖ್ಯ ಪ್ರಭಾಷಣ ನಡೆಯಿತು.

LEAVE A REPLY

Please enter your comment!
Please enter your name here