ಪುತ್ತೂರು: ಧರ್ಮಸ್ಥಳದ ವಿರುದ್ಧದ ಅಪಪ್ರಚಾರ, ವಿರೋಧ ಆಗುತ್ತಿರುವ ಸಂದರ್ಭ ಕ್ಷೇತ್ರದ ಜೊತೆಗೆ ನಾವಿದ್ದೇವೆ ಎಂಬುದನ್ನು ಸಾರಲು ಮಾಜಿ ಸಂಸದ ಹಾಗೂ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ದ.ಕ. ಜಿಲ್ಲೆಯ ಎಲ್ಲಾ ಮಂಡಲಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆ.25ರಂದು ಮಧ್ಯಾಹ್ನ ಧರ್ಮ ಜಾಗೃತಿಯ ಬೃಹತ್ ಯಾತ್ರೆ ನಡೆಯಿತು. ಪುತ್ತೂರಿನಿಂದ ನೂರು ವಾಹನ ಧರ್ಮಸ್ಥಳಕ್ಕೆ ತೆರಳಿದೆ.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಕೊನೆಯಲ್ಲಿ ಧರ್ಮ ಜಾಗೃತಿ ಯಾತ್ರೆಗೆ ತೆಂಗಿನ ಕಾಯಿ ಒಡೆದು ಚಾಲನೆ ನೀಡಲಾಯಿತು. ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು.
ಈ ಸಂದರ್ಭ ಮಾಜಿ ಸಂಸದರಾಗಿರುವ ಧರ್ಮಸ್ಥಳದ ಪರವಾಗಿ ನಡೆಯುವ ಸಮಾವೇಶದ ಕೇಂದ್ರ ಸಮಿತಿ ಉಸ್ತುವಾರಿ ಹೊಂದಿರುವ ನಳಿನ್ ಕುಮಾರ್ ಕಟೀಲ್, ಪುತ್ತೂರು ತಾಲೂಕು ಜನಾಗ್ರಹ ಸಮಾವೇಶದ ಉಸ್ತುವಾರಿ ದ.ಕ.ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಬಿಜೆಪಿಯ ಹಿರಿಯರಾದ ಚನಿಲ ತಿಮ್ಮಪ್ಪ ಶೆಟ್ಟಿ, ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದು ಸಂಘಟನೆಗಳ ಮುಖಂಡ ಮುರಳಿಕೃಷ್ಣ ಹಸಂತಡ್ಕ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ನಗರಸಭಾ ಸದಸ್ಯ ಕೆ.ಜೀವಂಧರ್ ಜೈನ್ ಸಹಿತ ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಧರ್ಮಸ್ಥಳಕ್ಕೆ ತೆರಳಿದರು.
ಸಂಜೆ ಧರ್ಮಸ್ಥಳಕ್ಕೆ ತಲುಪಿದ ಬಳಿಕ ಶ್ರೀಮಂಜುನಾಥ ಸ್ವಾಮಿ ದೇವಸ್ಥಾನದ ಎದುರು ನೂರೆಂಟು ಬಾರಿ ಶಿವನಾಮಸ್ಮರಣೆ, ಮಂಜುನಾಥನ ಸ್ತೋತ್ರ ಪಠಣದ ಬಳಿಕ ಶ್ರೀದೇವರ ದರ್ಶನ ಮಾಡಿದ ಬಳಿಕ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಾಗುವುದು ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.