ಸರ್ವೀಸ್ ರಸ್ತೆ ಕಾಮಗಾರಿ ವಿಳಂಬ : ವರ್ತಕರಿಂದ ದೂರು

0

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿಯ ನೆಲೆಯಲ್ಲಿ ಉಪ್ಪಿನಂಗಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸರ್ವೀಸ್ ರಸ್ತೆಯ ಕಾಮಗಾರಿಯು ತೀರಾ ಮಂದಗತಿಯಲ್ಲಿ ನಡೆಯುತ್ತಿದ್ದು, ಇದರಿಂದಾಗಿ ಸ್ಥಳೀಯ ವರ್ತಕರು ಸುದೀರ್ಘ ಕಾಲ ಸಮಸ್ಯೆಗೆ ಸಿಲುಕುವಂತಾಗಿದೆ ಎಂದು ಇಲ್ಲಿನ ವರ್ತಕ ಸಂಘವು ಸ್ಥಳೀಯಾಡಳಿತ ಹಾಗೂ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದೆ.


ಕಳೆದ ಮಳೆಗಾಲದ ಮೊದಲು ಶ್ಲಾಘನಾತ್ಮಕ ವೇಗದೊಂದಿಗೆ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದರೆ, ಮಳೆಗಾಲ ಮುಗಿದು ಮತ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆಯಾದರೂ ಕಾಮಗಾರಿಯ ವೇಗ ಮಾತ್ರ ನಿರ್ಲಕ್ಷ್ಯದ ಪರಮಾವಧಿಯಂತಿದೆ. ಇದರಿಂದಾಗಿ ಪರ್ಯಾಯವಾಗಿ ಕಲ್ಪಿಸಲಾದ ಮಾರ್ಗದಲ್ಲಿನ ವಾಹನ ಸಂಚಾರ ಪೇಟೆಯಲ್ಲಿನ ವ್ಯವಹಾರಿಕ ಕ್ಷೇತ್ರವನ್ನು ತಲ್ಲಣಗೊಳಿಸಿದ್ದು, ಆಕ್ರೋಶಗೊಂಡ ವರ್ತಕರು ಕಾಮಗಾರಿಯನ್ನು ಆದ್ಯತೆಯ ನೆಲೆಯಲ್ಲಿ ಕ್ಷಿಪ್ರ ಗತಿಯಲ್ಲಿ ಪೂರ್ತಿಗೊಳಿಸಬೇಕೆಂದು ಆಗ್ರಹಿಸಿ ಬುಧವಾರದಂದು ಪಂಚಾಯತ್ ಕಚೇರಿಗೆ ಲಿಖಿತ ಮನವಿ ಸಲ್ಲಿಸಿದ್ದರು.


ಪಂಚಾಯತ್ ಆಡಳಿತವು ಕಾಮಗಾರಿ ನಿರತ ಕೆಎನ್‌ಆರ್ ಸಂಸ್ಥೆಯ ಎಂಜಿನಿಯರ್ ಗಳನ್ನು ಗುರುವಾರ ಸ್ಥಳಕ್ಕೆ ಕರೆಯಿಸಿ ನಡೆಸಲಾಗುತ್ತಿರುವ ಕಾಮಗಾರಿಯನ್ನು ಅನಗತ್ಯ ವಿಳಂಬ ಮಾಡದೆ ಆದ್ಯತೆಯ ನೆಲೆಯಲ್ಲಿ ತ್ವರಿತಗತಿಯಲ್ಲಿ ನಡೆಸಬೇಕೆಂದು ಆಗ್ರಹಿಸಿತು.


ಜನಪ್ರತಿನಿಧಿಗಳ ನಿರ್ಲಕ್ಷ್ಯ ಸಲ್ಲದು
ಸ್ಥಳದಲ್ಲಿ ಉಪಸ್ಥಿತರಿದ್ದ ಹಿರಿಯ ಉದ್ಯಮಿ ಯು. ರಾಮ , ವರ್ತಕ ಸಮೂಹ ಅನುಭವಿಸುತ್ತಿರುವ ಸಂಕಷ್ಠಗಳನ್ನು ಉಲ್ಲೇಖೀಸಿ , ಆಡಳಿತ ವ್ಯವಸ್ಥೆಯಾಗಲಿ, ಜನಪ್ರತಿನಿಧಿಗಳಾಗಲಿ ಈ ರೀತಿಯ ನಿರ್ಲಕ್ಷ್ಯ ಧೋರಣೆ ಅನುಸರಿಸುವುದು ಸರಿಯಲ್ಲ. ಪೇಟೆಯ ಪ್ರಮುಖ ಭಾಗದಲ್ಲಿ ರಸ್ತೆಯಲ್ಲಿ ಅಗೆತ ಮಾಡಿ ಕಾಮಗಾರಿಯಲ್ಲಿ ವಾರಗಟ್ಟಲೆ ಅವಧಿಯಲ್ಲಿ ನಡೆಸುತ್ತಾ ಇದ್ದರೆ, ಪೇಟೆಗೆ ಜನ ಬರುವುದಾದರೂ ಹೇಗೆ ? ವ್ಯಾಪಾರಿಗಳಿಗೆ ವ್ಯಾಪಾರವಾಗುವುದಾದರೂ ಹೇಗೆ ? ಎಂದು ಪ್ರಶ್ನಿಸಿದರು. ಜನರ ತಾಳ್ಮೆಯನ್ನು ಕೆಣಕುತ್ತಲೇ ಇದ್ದರೆ ಬೀದಿಗಿಳಿದು ಹೋರಾಟ ನಡೆಸುವುದು ನಮಗೆ ಅನಿರ್ವಾಯವಾದೀತೆಂದು ಎಚ್ಚರಿಸಿದರು.


ಇಂಜಿನಿಯರ್ ರಘುನಾಥ್ ರೆಡ್ಡಿ ವರ್ತಕ ಸಮೂಹದ ಆಗ್ರಹವನ್ನು ಆಲಿಸಿ, ಕಾಮಗಾರಿಯನ್ನು ವೇಗವಾಗಿ ಪೂರೈಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.


ಈ ಸಂಧರ್ಭದಲ್ಲಿ ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ಟ, ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಡಾ. ರಾಜಾರಾಮ ಕೆ.ಬಿ., ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು, ಪಂಚಾಯತ್ ಸದಸ್ಯ ಅಬ್ದುಲ್ ರಶೀದ್, ವರ್ತಕರಾದ ಮಸೂದ್ , ಕೈಲಾರ್ ರಾಜಗೋಪಾಲ ಭಟ್, ಅನೂಷ್ ಕುಲಾಲ್, ಅರವಿಂದ ಭಂಡಾರಿ, ಪ್ರಕಾಶ್ ಬಿ, ರೂಪೇಶ್ ರೈ ಅಲಿಮಾರ, ಕರಾಯ ಸತೀಶ್ ನಾಯಕ್ , ವಸಂತ ಗೌಡ, ಚೇತನ್ ಶೆಣೈ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here