ಈಶ್ವರಮಂಗಲದಲ್ಲಿ ಪಾನಮತ್ತ ಪ್ರಯಾಣಿಕನಿಗೆ ಹಲ್ಲೆಗೈದು ಒದ್ದು ರಸ್ತೆಗೆ ತಳ್ಳಿದ ವಿಚಾರ

0

 

ಕೆ.ಎಸ್.ಆರ್.ಟಿ.ಸಿ. ಬಸ್ ನಿರ್ವಾಹಕ ಕೇನ್ಯದ ತುಕಾರಾಜ್ ರೈ ಅಮಾನತು

ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ವ್ಯಾಪ್ತಿಯ ಈಶ್ವರಮಂಗಲ ಜಂಕ್ಷನ್ ಬಳಿ ಸರಕಾರಿ ಬಸ್ ಕಂಡಕ್ಟರ್ ಒಬ್ಬರು ಪಾನಮತ್ತ ಪ್ರಯಾಣಿಕನಿಗೆ ಹಲ್ಲೆ ನಡೆಸಿ ಕಾಲಿನಿಂದ ಒದ್ದು ಬಸ್ ನಿಂದ ರಸ್ತೆಗೆ ದೂಡಿ ಹಾಕಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ಕೆ.ಎಸ್.ಆರ್.ಟಿ.ಸಿ ಪುತ್ತೂರು ಘಟಕದ ಬಸ್ ನಿರ್ವಾಹಕ ತುಕಾರಾಜ್ ರೈ ಎಂಬವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಕೆ.ಎ. ೨೧ ಎ-೦೦೦೨ ನಂಬರ್‌ನ ಕೆ.ಎಸ್.ಆರ್.ಟಿ.ಸಿ. ಬಸ್ ನಿರ್ವಾಹಕ ಪ್ರಯಾಣಿಕನಿಗೆ ಹಲ್ಲೆ ನಡೆಸಿ ಒದ್ದು ಹೊರ ಹಾಕಿರುವ ದೃಶ್ಯವಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸೆ.೭ರಂದು ವೈರಲ್ ಆಗಿತ್ತು.

ಪ್ರಯಾಣಿಕ ಪಾನಮತ್ತನಂತೆ ಕಂಡು ಬರುತ್ತಿದ್ದು ಬಸ್ ಹತ್ತುವಾಗಲೇ ನಿರ್ವಾಹಕ ಪ್ರಯಾಣಿಕನನ್ನು ತಡೆದು ಆತನ ಕೊಡೆಯನ್ನು ರಸ್ತೆಗೆ ಎಸೆದಿದ್ದರು. ಬಸ್ಸಿನಿಂದ ಕೆಳಗಿಳಿಸಲು ನಿರ್ವಾಹಕ ಪ್ರಯಾಣಿಕನಿಗೆ ಕೈಯಿಂದ ಹಲ್ಲೆ ನಡೆಸುವುದಲ್ಲದೆ ಕೊನೆಗೆ ಪ್ರಯಾಣಿಕನ ಎದೆಗೆ ತುಳಿದು ರಸ್ತೆಗೆ ದೂಡಿ ಹಾಕಿದ್ದರು. ರಸ್ತೆಗೆ ಬಿದ್ದ ಪ್ರಯಾಣಿಕನನ್ನು ಅಲ್ಲಿಯೇ ಬಿಟ್ಟು ನೇರವಾಗಿ ಬಸ್ ಚಲಾಯಿಸಿಕೊಂಡು ಹೋಗುವ ವಿಡಿಯೋ ವೈರಲ್ ಆಗಿತ್ತು.
ಪ್ರಯಾಣಿಕ ಪಾನಮತ್ತನಾಗಿದ್ದು ಈಶ್ವರಮಂಗಲದಲ್ಲಿ ಈತನ ಉಪಟಳ ನಿರಂತರವಾಗಿದ್ದರೂ ಹಲ್ಲೆ ನಡೆಸಿ ಒದ್ದು ಬಸ್ಸಿನಿಂದ ಹೊರಹಾಕಿರುವ ಬಸ್ ನಿರ್ವಾಹಕನ ವರ್ತನೆ ಅಮಾನವೀಯವಾಗಿದ್ದು ತಪ್ಪಿತಸ್ಥ ನಿರ್ವಾಹಕನ ವಿರುದ್ಧ ಕಾನೂನು ಕ್ರಮಕೈಗೊಳ್ಳಲೇಬೇಕು ಎಂದು ವ್ಯಾಪಕ ಆಗ್ರಹ ವ್ಯಕ್ತವಾಗಿತ್ತು. ಬಳಿಕ ಇಲಾಖಾಧಿಕಾರಿಗಳು ಆಂತರಿಕ ತನಿಖೆ ನಡೆಸಿದ್ದರು. ಮೇಲ್ನೋಟಕ್ಕೆ ನಿರ್ವಾಹಕನದ್ದು ತಪ್ಪು ಎಂದು ಕಂಡು ಬಂದಿರುವುದರಿಂದ ಬಸ್ ನಿರ್ವಾಹಕರಾಗಿದ್ದ ಸುಳ್ಯ ತಾಲೂಕಿನ ಬೀದಿ ಕೇನ್ಯ ನಿವಾಸಿ, ಕೆ.ಎಸ್.ಆರ್.ಟಿ.ಸಿ. ಪುತ್ತೂರು ಘಟಕದ ನಿರ್ವಾಹಕ ತುಕಾರಾಜ್ ರೈ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ತಿಳಿಸಿದ್ದಾರೆ. ಹಲ್ಲೆಗೀಡಾದ ಪ್ರಯಾಣಿಕ ಸುಳ್ಯಪದವು ನಿವಾಸಿ ಕೃಷ್ಣಪ್ಪ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here