- ಕುಂಬ್ರ ಜಂಕ್ಷನ್ನಲ್ಲಿ ಲಂಚ,ಭ್ರಷ್ಟಾಚಾರ ಪ್ರತಿಕೃತಿ ದಹನ
ಪುತ್ತೂರು: ಸುದ್ದಿ ಜನಾಂದೋಲನ ವೇದಿಕೆ ಹಮ್ಮಿಕೊಂಡಿರುವ ಲಂಚ,ಭ್ರಷ್ಟಾಚಾರ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಆಂದೋಲನಕ್ಕೆ ಕುಂಬ್ರ ವರ್ತಕರ ಸಂಘವು ಸಂಪೂರ್ಣ ಬೆಂಬಲವನ್ನು ಸೂಚಿಸಿದೆ. ಜ.೨೬ ರಂದು ಕುಂಬ್ರ ಜಂಕ್ಷನ್ನಲ್ಲಿ ಲಂಚ,ಭ್ರಷ್ಟಾಚಾರ ಪ್ರತಿಕೃತಿಯನ್ನು ದಹಿಸುವ ಮೂಲಕ ಬೆಂಬಲ ಸೂಚಿಸಿತು. ಪ್ರತಿಕೃತಿಗೆ ಬೆಂಕಿ ಹಚ್ಚಿದ ವರ್ತಕರ ಸಂಘದ ಅಧ್ಯಕ್ಷ ಎಸ್.ಮಾಧವ ರೈಯವರು ಮಾತನಾಡಿ, ಲಂಚ, ಭ್ರಷ್ಟಾಚಾರ ದೇಶದಿಂದಲೇ ಹೋಗಬೇಕು, ಜನಸಾಮಾನ್ಯರು ಸರಕಾರದ ಸೌಲಭ್ಯಗಳನ್ನು ನೇರವಾಗಿ ಪಡೆದುಕೊಳ್ಳುವಂತೆ ಆಗಬೇಕು, ಲಂಚ ಕೊಡುವುದು ಮತ್ತು ಕೇಳುವುದು ಎರಡೂ ನಿಲ್ಲಬೇಕು ಹೇಳಿದರು. ಸುದ್ದಿ ಹಮ್ಮಿಕೊಂಡಿರುವ ಒಂದು ಉತ್ತಮ ಕೆಲಸ ಇದಾಗಿದ್ದು ಇದಕ್ಕೆ ವರ್ತಕರ ಸಂಘವು ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಹೇಳಿದರು. ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್ಸುಂದರ್ ರೈ ಕೊಪ್ಪಳ ಮಾತನಾಡಿ, ಲಂಚ,ಭ್ರಷ್ಟಾಚಾರ ಎಂಬುದು ಎಲ್ಲಿಯ ತನಕ ಮುಟ್ಟಿದೆ ಎಂದರೆ ಸರಕಾರಿ ಕಛೇರಿಯ ಕಿಟಕಿ,ಬಾಗಿಲು ಕೂಡ ಲಂಚ ಕೇಳುತ್ತಿವೆ ಎಂದು ಅನ್ನಿಸುತ್ತಿದೆ. ಈ ಲಂಚ,ಭ್ರಷ್ಟಾಚಾರವನ್ನು ಅಳಿಸಲು ಹೊರಟ ಸುದ್ದಿಗೆ ವರ್ತಕರ ಸಂಘದ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವರ್ತಕರ ಸಂಘದ ಪದಾಧಿಕಾರಿಗಳಾದ ಸಂಶುದ್ದೀನ್ ಎ.ಆರ್, ಉದಯ ಆಚಾರ್ ಕೃಷ್ಣನಗರ, ಜಯರಾಮ ಆಚಾರ್ಯ, ಪದ್ಮನಾಭ ಆಚಾರ್ಯ, ಭವ್ಯ ರೈ, ಸದಾಶಿವ, ಹನೀಪ್ ಶೇಖಮಲೆ, ದಿವಾಕರ ಶೆಟ್ಟಿ ಮೂಕಾಂಬಿಕ, ಗುರುವಪ್ಪ ಶೇಖಮಲೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.