ಉಪ್ಪಿನಂಗಡಿ: ಬೈಕ್ ಸವಾರರೋರ್ವರಿಗೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಪರಾರಿಯಾದ ಘಟನೆ 34-ನೆಕ್ಕಿಲಾಡಿ ಗ್ರಾಮದ ಬೊಳ್ಳಾರು ಎಂಬಲ್ಲಿ ಫೆ.3ರಂದು ನಡೆದಿದೆ.
ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಅರ್ಚಕ ಶ್ರೀಕಾಂತ್ ಭಟ್ ಗಾಯಗೊಂಡವರು. ಇವರು ಉಪ್ಪಿನಂಗಡಿ ಕಡೆಯಿಂದ ಪೆರ್ನೆ ಕಡೆಗೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಎದುರಿನಿಂದ ಗೂಡ್ಸ್ ಟೆಂಪೋವೊಂದು ಅತೀ ವೇಗದಿಂದ ಹಾಗೂ ನಿರ್ಲಕ್ಷ್ಯ ಚಾಲನೆಯಿಂದ ರಸ್ತೆಯ ವಿರುದ್ಧ ಪಥದಲ್ಲಿ ಬಂದು ಬೈಕ್ ಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ಬೈಕ್ ಸವಾರ ಶ್ರೀಕಾಂತ್ ಭಟ್ ಹಾಗೂ ಬೈಕ್ ರಸ್ತೆ ಬದಿಯ ಚರಂಡಿಗೆ ಎಸೆಯಲ್ಪಟ್ಟಿದ್ದು ಬೈಕ್ ಸವಾರನ ಕಾಲು ಮುರಿತಕ್ಕೊಳಗಾಗಿದೆ.
ಅಪಘಾತವೆಸಗಿದ ಬಳಿಕ ಗೂಡ್ಸ್ ಟೆಂಪೊ ಪರಾರಿಯಾಗಿದೆ. ಗಾಯಾಳುವನ್ನು ನೋಡಿ ಯುವ ಕಾಂಗ್ರೆಸ್ ಮುಖಂಡ ಪ್ರಹ್ಲಾದ್ ಬೆಳ್ಳಿಪ್ಪಾಡಿ, ನವಾಝ್ ಕರುವೇಲು ಹಾಗೂ ಸುದ್ದಿಯ ತಂಡ ತಕ್ಷಣ ಮೇಲೆಕ್ಕೆತ್ತಿದ್ದು ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿದ್ದಾರೆ.