ಉಪ್ಪಿನಂಗಡಿ: ಇಲ್ಲಿನ ಠಾಣಾ ವ್ಯಾಪ್ತಿಯ ಬಂದಾರು ಗ್ರಾಮದ ಬಟ್ಲಡ್ಕ ಎಂಬಲ್ಲಿ ಮೀನು ಹಿಡಿಯಲೆಂದು ಹೊಳೆಗಿಳಿದ ಸುಂದರ ಗೌಡ (65) ಎಂಬವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಬಂದಾರು ಗ್ರಾಮದ ಪೇರಳ್ತಪಳಿಕೆ ನಿವಾಸಿಯಾಗಿದ್ದ ಇವರು ಬಲೆ ಹಾಕಿ ಮೀನು ಹಿಡಿಯುವ ಹವ್ಯಾಸವನ್ನು ಹೊಂದಿದ್ದರು. ಅಂತೆಯೇ ಬಟ್ಲಡ್ಕ ಎಂಬಲ್ಲಿ ಹೊಳೆಯಲ್ಲಿ ಬಲೆ ಹರಡಿ ಮೀನು ಹಿಡಿಯುವ ಪ್ರಯತ್ನದಲ್ಲಿದ್ದಾಗ ಬಂಡೆ ಕಲ್ಲಿನ ಬಳಿ ಹಿಡಿತ ತಪ್ಪಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರು.
ಸುಮಾರು 40 ಅಡಿ ಆಳದಲ್ಲಿ ನೆಲಕಚ್ಚಿದ್ದ ಶವವನ್ನು ಮೊಹಮ್ಮದ್ ಬಂದಾರು ಮತ್ತು ಅಬ್ಬಾಸ್ ಬಟ್ಲಡ್ಕ ರವರು ಪತ್ತೆ ಹಚ್ಚಿ ಮೇಲೆತ್ತುವಲ್ಲಿ ಸಹಕರಿಸಿದರು. ಮೃತರು ಪತ್ನಿ, ಮೂವರು ಪುತ್ರರನ್ನು ಅಗಲಿದ್ದಾರೆ.