ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಫೆ.11ರಂದು ಕೆಡ್ಡಸ ಆಚರಣೆ ಮಾಡಲಾಯಿತು.ಪ್ರೌಢಶಾಲಾ ವಿಭಾಗದ ಮುಖ್ಯಗುರು ಗಾಯತ್ರಿ ಯು.ಎನ್.ರವರು ಭೂಮಿತಾಯಿಗೆ ಎಣ್ಣೆ ಬಿಟ್ಟು ಭೂಮಿ ಪೂಜೆ ಮಾಡುವುದರ ಮೂಲಕ ಸಂಪ್ರದಾಯಿಕವಾಗಿ ಕೆಡ್ಡಸ ಆಚರಣೆ ಮಾಡಲಾಯಿತು. ಶಾಲಾ ವಿದ್ಯಾರ್ಥಿಗಳಿಂದಲೇ ಆರಂಭಗೊಂಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ವಹಿಸಿ ಮಾತನಾಡಿ, ಹಿರಿಯರು ಆಚರಿಸಿಕೊಂಡು ಬಂದಿರುವ ತುಳು ಆಚಾರ ವಿಚಾರ ಪದ್ಧತಿಗಳನ್ನು ಉಳಿಸಿ ಬೆಳೆಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದುದೆಂದು ತಿಳಿಸಿದರು. ತುಳು ಶಿಕ್ಷಕಿ ಸರಿತಾರವರು ಸಂದರ್ಭೋಚಿತವಾಗಿ ಮಾತನಾಡಿದರು. ತುಳು ವಿದ್ಯಾರ್ಥಿನಿ ಮನ್ವಿತಾರವರು ಕೆಡ್ಡಸ ಆಚರಣೆಯ ಮಹತ್ವದ ಬಗ್ಗೆ ತಿಳಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಆನಂದ ಯಸ್.ಟಿ, ನಿಲಯ ವ್ಯವಸ್ಥಾಪಕ ರಮೇಶ್ ರೈ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಅಕ್ಷತ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಕೆಡ್ಡಸ ಕುರಿತ ಗೀತೆಯನ್ನು ಹಾಡಿದರು. ತುಳು ವಿದ್ಯಾರ್ಥಿನಿಯರಾದ ಲೀಕ್ಷಿತಾ ಸ್ವಾಗತಿಸಿ, ಅನುಶ್ರೀ ವಂದಿಸಿದರು. ತಾನ್ಯ ಕಾರ್ಯಕ್ರಮ ನಿರೂಪಿಸಿದರು. ಕೆಡ್ಡಸದ ವಿಶೇಷ ತಿಂಡಿ ನನ್ನೇರಿಯನ್ನು ಹಂಚಲಾಯಿತು.