ಪುತ್ತೂರು: ಸುಮಾರು 800 ವರ್ಷಗಳ ಇತಿಹಾಸವಿರುವ, 5 ವಿಭಾಗಗಳಲ್ಲಿ ಸುಮಾರು 100 ಮನೆಗಳನ್ನೊಳಗೊಂಡ ಕೊಟ್ಟಿಬೆಟ್ಟು ಏಳ್ನಾಡುಗುತ್ತು ಮನೆಯಲ್ಲಿ ಕೊಟ್ಟಿಬೆಟ್ಟು ಏಳ್ನಾಡುಗುತ್ತು ಫ್ಯಾಮಿಲಿ ಟ್ರಸ್ಟ್ ವತಿಯಿಂದ ಫೆ. 18ರಿಂದ 20ರವರೆಗೆ ಭೂಮಿದೈವ ರಕ್ತೇಶ್ವರಿ, ಶ್ರೀ ಪಿಲಿಚಾಮುಂಡಿ (ಏಳ್ನಾಡು ದೈವ), ಧರ್ಮದೈವ ಶ್ರೀ ಜೂಮಾದಿ-ಬಂಟ, ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಗುಳಿಗ, ಬೈರವ, ಇತ್ಯಾದಿ ದೈವಗಳಿಗೆ ‘ಧರ್ಮ ನೇಮೋತ್ಸವ’ ನಡೆಯಲಿದೆ.
ವೇ.ಮೂ.ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ವಿವಿಧ ವೈದಿಕ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ. ಫೆ.೧೮ರಂದು ಬೆಳಿಗ್ಗೆ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳು ಹಾಗೂ ಆಚಾರ್ಯವರ್ಯರವರಿಗೆ ಪೂರ್ಣ ಕುಂಭ ಸ್ವಾಗತ ಕಾರ್ಯಕ್ರಮ, ಗಣಪತಿ ಹೋಮ, ಶುದ್ಧಿಕಲಶ, ಪಾನಕ ಪೂಜೆ ಮತ್ತು ಪ್ರಸಾದ ವಿತರಣೆ ಬಳಿಕ ಉಪಾಹಾರ ನಡೆಯಲಿದೆ. ಬಳಿಕ ಶ್ರೀ ಸತ್ಯನಾರಾಯಣ ಪೂಜೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಕೊಟ್ಟಿಬೆಟ್ಟು ಏಳ್ನಾಡುಗುತ್ತು ಮನೆಯಿಂದ ಭಂಡಾರ ತೆಗೆಯುವುದು ಬಳಿಕ ಅನ್ನಸಂತರ್ಪಣೆ ನಡೆದು ರಾತ್ರಿ ಕಲ್ಲುರ್ಟಿ, ಕುಪ್ಪೆ ಪಂಜುರ್ಲಿ ಮತ್ತು ಗುಳಿಗ ದೈವದ ನೇಮನಡಾವಳಿ ನಡೆಯಲಿದೆ. ಫೆ.೧೯ರಂದು ರಾತ್ರಿ ಕೊಟ್ಟಿಬೆಟ್ಟು ಏಳ್ನಾಡುಗುತ್ತು ಮನೆಯಿಂದ ಭಂಡಾರ ತೆಗೆಯುವುದು, ಅನ್ನಸಂತರ್ಪಣೆ ಬಳಿಕ ಪಿಲಿಚಾಮುಂಡಿ ಮತ್ತು ವರ್ಣರ ಪಂಜುರ್ಲಿ ದೈವದ ನೇಮ ನಡೆದು ಪ್ರಸಾದ ವಿತರಣೆ ನಡೆಯಲಿದೆ. ಫೆ.೨೦ರಂದು ರಾತ್ರಿ ಕೊಟ್ಟಿಬೆಟ್ಟು ಏಳ್ನಾಡುಗುತ್ತು ಮನೆಯಿಂದ ಧರ್ಮ ದೈವದ ಭಂಡಾರ ತೆಗೆಯುವುದು ಬಳಿಕ ಅನ್ನಸಂತರ್ಪಣೆ ಧರ್ಮದೈವ ಜೂಮಾದಿ-ಬಂಟ ದೈವದ ನೇಮ ನಡೆದು ಪ್ರಸಾದ ವಿತರಣೆ ನಡೆಯಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಧರ್ಮ ನೇಮೋತ್ಸವದಲ್ಲಿ ಪಾಲ್ಗೊಂಡು ದೈವದ ಕೃಪೆಗೆ ಪಾತ್ರರಾಗುವಂತೆ ಕೊಟ್ಟಿಬೆಟ್ಟು ಏಳ್ನಾಡುಗುತ್ತು ಕುಟುಂಬದ ಯಜಮಾನ ರಾಧಾಕೃಷ್ಣ ನಾಕ್ ಮತ್ತು ಕುಟುಂಬಸ್ಥರು ಹಾಗೂ ಕೊಟ್ಟಿಬೆಟ್ಟು ಏಳ್ನಾಡುಗುತ್ತು ಫ್ಯಾಮಿಲಿ ಟ್ರಸ್ಟ್ನ ಪ್ರಕಟಣೆ ತಿಳಿಸಿದೆ.
ಕೊಟ್ಟಿಬೆಟ್ಟು ಏಳ್ನಾಡುಗುತ್ತು ಮನೆಯು ಪುತ್ತೂರು ತೆಂಕಿಲ ಬೈಪಾಸ್ ರಸ್ತೆಯಲ್ಲಿ ತೆಂಕಿಲ ಸ್ವಾಮಿ ಕಲಾ ಮಂದಿರದ ಪಕ್ಕದ ನೂಜಿ ತೆಂಕಿಲ ರಸ್ತೆಯಲ್ಲಿ ಸಿಗುತ್ತದೆ.