ಉಪ್ಪಿನಂಗಡಿ: ಹಿಜಾಬ್ ಧಾರಣೆಯ ಬಗ್ಗೆ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದ್ದು, ಫೆ.16ರಂದು ಪ್ರಾರಂಭಗೊಂಡ ಕಾಲೇಜುಗಳ ಪೈಕಿ ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಆದೇಶ ಪಾಲನೆಯೊಂದಿಗೆ ತರಗತಿಯಲ್ಲಿ ಹಾಜರಾಗಿದ್ದರೆ, ಪ್ರಥಮ ದರ್ಜೆ ಕಾಲೇಜಿನ ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಹಾಜರಾಗಿದ್ದು, ಪ್ರಾಂಶುಪಾಲರು ಸರಕಾರದ ಆದೇಶವನ್ನು ತಿಳಿಸಿದ ಬಳಿಕ ನ್ಯಾಯಾಲಯದ ತೀರ್ಪಿನ ಬಳಿಕವೇ ಕಾಲೇಜಿಗೆ ಬರುತ್ತೇವೆ ಎಂದು ವಿದ್ಯಾರ್ಥಿನಿಯರು ಮನೆಗೆ ಹಿಂದುರುಗಿದ ಘಟನೆ ನಡೆದಿದೆ.
ಉಪ್ಪಿನಂಗಡಿ ಸರಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ತರಗತಿ ಕೋಣೆ ಪ್ರವೇಶಿಸಿದರಾದರೂ, ಕಾಲೇಜು ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಸರಕಾರದ ಮತ್ತು ನ್ಯಾಯಾಲಯದ ಆದೇಶವನ್ನು ಮನವರಿಕೆ ಮಾಡಿ ಕಾಲೇಜು ಕೊಠಡಿಯೊಳಗೆ ಸಮವಸ್ತ್ರ ಬಳಸಲು ಮಾತ್ರ ಅವಕಾಶವೆಂದು ಸ್ಪಷ್ಟ ಪಡಿಸಿದರು. ಈ ವೇಳೆ ನಿಯಮಪಾಲಿಸಲು ಒಪ್ಪದ ಹಿಜಾಬ್ ಧರಿಸಿದ್ದ ವಿದ್ಯಾರ್ಥಿಗಳು ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ ನಾವು ಕಾಲೇಜಿಗೆ ಬರುವುದಿಲ್ಲವೆಂದು ತಿಳಿಸಿ ಸ್ವಯಂ ಪ್ರೇರಿತರಾಗಿ ಕಾಲೇಜಿನಿಂದ ನಿರ್ಗಮಿಸಿದರು.
ಪರಿಸರದ ಉಳಿದೆಲ್ಲೆಡೆಯ ಶಾಲಾ- ಕಾಲೇಜುಗಳಲ್ಲಿ ಕೇಸರಿ ಶಾಲು ಹಾಗೂ ಹಿಜಾಬ್ನ ಬಗ್ಗೆ ಯಾವುದೇ ಗೊಂದಲಗಳು ಮೂಡದೇ ಪರಿಸ್ಥಿತಿ ಶಾಂತವಾಗಿತ್ತು.