![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
- ಮಹಿಳೆಯರಿಂದ ಯಕ್ಷಗಾನ ತಾಳಮದ್ದಳೆ, ಸನ್ಮಾನ, ವಿವಿಧ ಸ್ಪರ್ಧೆ
- ಲಂಚ, ಭ್ರಷ್ಟಾಚಾರದ ವಿರುದ್ಧ ಘೋಷಣೆ ಕೂಗಿದ ಮಹಿಳೆಯರು
ಪುತ್ತೂರು: ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ ಮಂಗಳೂರು, ತಾಲೂಕು ಮಹಿಳಾ ಒಕ್ಕೂಟ, ನವ್ಯಶ್ರೀ ಮಹಿಳಾ ಮಂಡಲ, ವನಿತಾ ಸಮಾಜ ಹಾರಾಡಿ, ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ ಪುತ್ತೂರು, ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಮಾ.೧೪ರಂದು ನಡೆಯಿತು. ಈ ಸಂದರ್ಭದಲ್ಲಿ ಸುದ್ದಿ ಜನಾಂದೋಲನ ವೇದಿಕೆಯಿಂದ ಜಾಗೃತಿ ಆಂದೋಲನ ಲಂಚ, ಭ್ರಷ್ಟಾಚಾರದ ವಿರುದ್ಧ ಘೋಷಣೆಯನ್ನು ಮಹಿಳೆಯರು ಕೂಗಿ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಬಿ.ಐತ್ತಪ್ಪ ನಾಯ್ಕ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರತಿ ದಿನವೂ ಮಹಿಳಾ ದಿನಾಚರಣೆ ಅಗಿರುತ್ತದೆ. ಯಾಕೆಂದರೆ ಸಮಾಜ ನಡೆಯುವುದೇ ಮಹಿಳೆಯಿಂದ ಎಂದ ಅವರು ವಿಶ್ವದ ನಾನಾ ರಾಷ್ಟ್ರಗಳಲ್ಲಿ ಅತ್ಯುನ್ನತವಾದ ಹುದ್ದೆ ಅಲಂಕರಿಸಿದವರು ನಮ್ಮ ಭಾರತೀಯ ಸಂಜಾತ ಮಹಿಳೆಯರು. ಭಾರತದ ಆರ್ಥಿಕ ಸಚಿವೆ ವಿಶ್ವಕ್ಕೆ ಮಾದರಿ. ಗಗನ ಯಾತ್ರಿಗಳಲ್ಲಿ ಮೊನ್ನೆ ತಾನೆ ಉಕ್ರೇನ್ನಿಂದ ಭಾರತೀಯ ವಿದ್ಯಾರ್ಥಿಗಳನ್ನು ವಿಮಾನದಲ್ಲಿ ಸ್ವದೇಶಕ್ಕೆ ಯಶಸ್ವಿಯಾಗಿ ಕರೆತಂದವರು ನಮ್ಮ ಜಿಲ್ಲೆಯ ಮಹಿಳಾ ಫೈಲೆಟ್ ಎಂಬುದು ಸಂತೋಷ. ಈ ನಿಟ್ಟಿನಲ್ಲಿ ಮಹಿಳೆ ವಿಶ್ವಕ್ಕೆ ಮಾದರಿಯಾಗಿದ್ದು ತಾಯಿಯೇ ದೇವರು ಎಂಬ ಮಂತ್ರ ಮೊಳಗಬೇಕೆಂದರು.
ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಶಾಂತಿ ಹೆಗಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಸುಧಾ, ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಚಂಚಲ ತೋಜೋಮಯಅವರು ಅತಿಥಿಗಳಾಗಿ ಭಾಗವಹಿಸಿದ್ದರು.
ಸಾಧಕರಿಗೆ ಸನ್ಮಾನ:
ಬನ್ನೂರು ನಿವಾಸಿಯಾಗಿದ್ದು ದಕ್ಷ ಅಧಿಕಾರಿಯಾಗಿ ನಿವೃತ್ತಿ ಹೊಂದಿದ ಗ್ರೇಸಿ ಎನ್ ಗೋನ್ಸಾಲಿಸ್, ನೂರಾರು ಮಂದಿಗೆ ಹೊಲಿಗೆ ತರಬೇತಿ ನೀಡಿ ಸ್ವಾವಲಂಬಿಗೊಳಿಸಿದ ಪರ್ಲಡ್ಕದ ಲಕ್ಷ್ಮೀ ಭಟ್, ಸಿಂಚನ ಸ್ತ್ರೀಶಕ್ತಿ ಸಂಘ ಗುಂಪಿನ ಮೂಲಕ ಸ್ವಾವಲಂಭಿಯಾಗಿ ಸ್ವದ್ಯೋಗ ಮಾಡುತ್ತಿರುವ ವಿಶೇಷ ಚೇತನ ವಸಂತಿ ಪಿ ನಾಯಕ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಹಾರಾಡಿ ವನಿತಾ ಸಮಾಜದ ಉಪಾಧ್ಯಕ್ಷೆ ವತ್ಸಲಾ ರಾಜ್ಞಿ, ತಾಲೂಕು ಮಹಿಳಾ ಒಕ್ಕೂಟದ ಕಾರ್ಯದರ್ಶಿ ಪೂರ್ಣಿಮ ಶೆಟ್ಟಿ, ಜಯಲಕ್ಷ್ಮೀ ಭಟ್ ಸನ್ಮಾನಿತರನ್ನು ಪರಿಚಯಿಸಿದರು. ಅನ್ನಪೂರ್ಣ ಮತ್ತು ರೇಣುಕಾ ಪ್ರಾರ್ಥಿಸಿದರು. ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಗೌರಿ ಬನ್ನೂರು ಸ್ವಾಗತಿಸಿದರು. ನವ್ಯಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ಪ್ರೇಮಲತಾ ರಾವ್ ವಂದಿಸಿದರು. ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷೆ ಉಮಾ ಡಿ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆ ಆಂಜನೇಯ ಮಹಿಳಾ ಯಕ್ಷಗಾನ ಸಂಘದಿಂದ ’ ಜಾಂಬಾವತಿ ಕಲ್ಯಾಣ’ ಯಕ್ಷಗಾನ ತಾಳಮದ್ದಳೆ, ಮಹಿಳೆಯರಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮ ನಡೆಯಿತು. ಅಸಹಾಯಕರ ಸೇವಾಟ್ರಸ್ಟ್ ನ ಅಧ್ಯಕ್ಷೆ ನಯಾನ ರೈ, ಬೆಳ್ತಂಗಡಿಯ ಕಮಲ ಮಾವಿನಕಟ್ಟೆ, ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿಯ, ಮಾಜಿ ಅಧ್ಯಕ್ಷೆ ಜಯಲಕ್ಷ್ಮೀ ಸುರೇಶ್, ಒಕ್ಕೂಟದ ಕೋಶಾಧಿಕಾರಿ ಮೋಹಿನಿ ದಿವಾಕರ್, ಕಾರ್ಯದರ್ಶಿಗಳಾದ ಪೂರ್ಣಿಮಾ ಶೆಟ್ಟಿ ಹೆಗ್ಡೆಹಿತ್ತಲು, ಸುರೇಖಾ ಹೆಬ್ಬಾರ್ ಸೇರಿದಂತೆ ಸಭೆಯಲ್ಲಿ ಹಲವಾರು ಮಂದಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಗೀತ ಗಾಯನ, ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸುದ್ದಿ ಜನಾಂದೋಲನಕ್ಕೆ ಬೆಂಬಲ – ಲಂಚ, ಭ್ರಷ್ಟಾಚಾರದ ವಿರುದ್ಧ ಘೋಷಣೆ ಮೊಳಗಿಸಿದ ಮಹಿಳೆಯರು
ಸುದ್ದಿ ಜನಾಂದೋಲನ ವೇದಿಕೆಯಿಂದ ಸಾರ್ವಜನಿಕರನ್ನು ಜಾಗೃತಿ ಮೂಡಿಸುವ ಲಂಚ ಮತ್ತು ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ, ಲಂಚ, ಭ್ರಷ್ಟಾಚಾರ ಮುಕ್ತ ಊರು, ತಾಲೂಕು, ಜಿಲ್ಲೆ ನಮ್ಮದಾಗಲಿ ಎಂಬ ಘೊಷಣೆಯನ್ನು ಮಹಿಳಾ ಸಂಘಟನೆಗಳು ಕೂಗಿ ಸುದ್ದಿ ಜನಾಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿದರು. ಸುದ್ದಿ ಜನಾಂದೋಲನ ವೇದಿಕೆ ಮುಖ್ಯಸ್ಥ ಗಣೇಶ್ ಎನ್ ಕಲ್ಲರ್ಪೆ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿದ್ದ ಗಣ್ಯರು, ಸಭೆಯಲ್ಲಿದ್ದವರು ಘೋಷಣೆಗೆ ಧ್ವನಿಗೂಡಿಸಿದರು.