ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಗೆ ಸ್ವಯಂ ಸೇವಕರಾಗಿ ಶ್ರಮಿಸಲು ಮೊಗೇರ ಸಮುದಾಯದ ಸದಸ್ಯರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಶ್ನಾ ಚಿಂತನೆಯಲ್ಲಿ ಮೊಗೇರ ಸಮುದಾಯದ ಸದಸ್ಯರು ಅನಾದಿ ಕಾಲದಿಂದಲೂ ದೇವರ ಚಾಕರಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದನ್ನು ಉಲ್ಲೇಖಿಸಲಾಗಿ ಮೊಗೇರ ಸಮಾಜವೂ ಎಂದೆಂದಿಗೂ ದೇವರ ಸೇವೆಯಲ್ಲಿ ತೊಡಗಿಸಿಕೊಳ್ಳ ತಕ್ಕದ್ದೆಂದು ಕಂಡು ಬಂದಿದೆ. ಇದರಿಂದ ಮೊಗೇರ ಸಮುದಾಯಕ್ಕೆ ಶ್ರೀ ದೇವರ ಅನುಗ್ರಹ ಪ್ರಾಪ್ತಿಯಾಗಲಿದೆ ಎಂದು ತಿಳಿದು ಬಂದಿದೆ. ಒಡಲಿನಲ್ಲೇ ದೇವರ ಅನುಗ್ರಹ ಇರುವಾಗ ನಾವು ನಾಲ್ಕೂರು ದೈವಗಳ ಮೊರೆಹೋಗುವುದೇಕೆ. ಅನಾದಿ ಕಾಲದಿಂದ ಬಪ್ಪಳಿಗೆ ನಟ್ಟೋಜ ತೋಟದ ಮನೆ ಮಣ್ಣಿನಲ್ಲಿ ನೆಲೆ ನಿಂತು ಆರಾಧಿಸಿಕೊಂಡು ಬಂದ ಬ್ರಹ್ಮ ಮೊಗೆರ ಮತ್ತು ಪರಿವಾರ ದೈವಗಳ ಸಾಕ್ಷಾತ್ಕಾರದೊಂದಿಗೆ ಮಹಾಲಿಂಗೇಶ್ವರ ದೇವರು, ಬಲ್ನಾಡು ಉಳ್ಳಾಲ್ತಿ, ಪೊಳಲಿ ರಾಜ ರಾಜೇಶ್ವರೀ ಅಮ್ಮನವರ ದಯೆ ನಮ್ಮ ಮೇಲಿರುವಾಗ ಮೊಗೇರ ಕುಟುಂಬದ ಅನೇಕ ಮಂದಿ ಸದಸ್ಯರು ಪ್ರತ್ಯೇಕ ಪ್ರತ್ಯೇಕವಾಗಿ ಇಟ್ಟ ರಾಶಿ ಪ್ರಶ್ನೆ ಪ್ರಕಾರ ನಾವು ನಂಬಿಕೊಂಡು ಬಂದಿರುವ ಧರ್ಮ ದೈವ, ಕುಲದೈವ, ಪರಿವಾರ ದೈವಗಳಿಗೆ ಸಂದಾಯವಾಗಬೇಕಿರುವ ‘ಮಂಜ’ ಸಂಪ್ರದಾಯ ಪ್ರಕಾರವಾಗಿ ನಡೆಸಿದ್ದೇವೆ. ಮುಂಬರುವ ಜಾತ್ರೋತ್ಸವದಲ್ಲಿ ನಮ್ಮ ಸಮುದಾಯದ ಸದಸ್ಯರು ಶ್ರೀ ದೇವರ ಜಾತ್ರೆಯಲ್ಲಿ ಸ್ವಯಂ ಸೇವಕರಾಗಿ ತೊಡಗಿಸಿಕೊಳ್ಳುವುದು ಮತ್ತು ದೇವಳದ ವತಿಯಿಂದ ಒಂದು ದಿನದ ವಿಶೇಷ ನೈವೇದ್ಯ ಪ್ರಸಾದ ಸ್ವೀಕಾರಕ್ಕೆ ಪ್ರತೀವರ್ಷ ಕುಟುಂಬ ಸಮೇತ ರಾಗಿ ಪಾಲ್ಗೊಳ್ಳಲು ಅಷ್ಟಮಂಗಳ ಪ್ರಶ್ನೆಯಲ್ಲಿ ನಿರ್ಣಯಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಇದಕ್ಕಾಗಿ ಅನಾದಿಕಾಲದಿಂದಲೂ ದೇವರ ಚಾಕರಿಯಲ್ಲಿ ತೊಡಗಿಸಿಕೊಂಡು ಬಂದಿದ್ದ ನಮ್ಮ ಪೂರ್ವಜರ ನೆನಪಿಗಾಗಿ ನಮ್ಮ ಸಮಾಜದ ಸದಸ್ಯರು ಸ್ವಯಂಸೇವಕರಾಗಿ ಭಾಗವಹಿಸಲು ಮನವಿಯಲ್ಲಿ ವಿನಂತಿಸಲಾಗಿದೆ. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರಿಗೆ ಮನವಿ ನೀಡಲಾಗಿದೆ. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಐತ್ತಪ್ಪ ನಾಯ್ಕ್, ರವಿಂದ್ರನಾಥ ರೈ ಬಳ್ಳಮಜಲು ಜೊತೆಗಿದ್ದರು. ಈ ಸಂದರ್ಭದಲ್ಲಿ ಮೊಗೇರ ಸಮುದಾಯ ಸುಂದರ ಬಪ್ಪಳಿಗೆ, ದಿನೇಶ್ ಬಪ್ಪಳಿಗೆ, ದಾಮೋದರ್ ಮರಿಲ್ಪಳಿಕೆ ಉಪಸ್ಥಿತರಿದ್ದರು. ಸುದರ್ಶನ್ ಸಹಕರಿಸಿದರು.