- ಮಹಿಳೆಯರು ಧಾರ್ಮಿಕವಾಗಿ, ಲೌಕಿಕವಾಗಿ ಶಕ್ತರಾದರೆ ಕುಟುಂಬ ಸಂತುಷ್ಟ-ಹಾದಿ ತಂಙಳ್
- ಮಹಿಳೆಯರು ಧಾರ್ಮಿಕವಾಗಿ ಸಬಲೀಕರಣಗೊಳ್ಳಬೇಕು-ಉಮರ್ ದಾರಿಮಿ
- ಕಲಿತ ವಿದ್ಯೆ ಸಾರ್ಥಕವಾಗಬೇಕಾದರೆ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಿ-ಜಲಾಲಿ
ಪುತ್ತೂರು: ಸಂಪ್ಯ ಕಮ್ಮಾಡಿ ಇಸ್ಲಾಮಿಕ್ ಸೆಂಟರ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಝಹ್ರ ಬತೂಲ್ ಶರೀಅತ್ ಕಾಲೇಜು ಇದರ ಅಝ್ಝಕಿಯ್ಯ ಸನದುದಾನ ಸಮ್ಮೇಳನ ಕಾಲೇಜು ವಠಾರದಲ್ಲಿ ನಡೆಯಿತು. ಸಂಸ್ಥೆಯ ಅಧ್ಯಕ್ಷರಾದ ಡಾ.ಅಶ್ರಫ್ ಹಾಜಿ ಕಮ್ಮಾಡಿ ಅಧ್ಯಕ್ಷತೆ ವಹಿಸಿದ್ದರು. ಇಪ್ಪತ್ತು ವಿದ್ಯಾರ್ಥಿನಿಯರಿಗೆ ಅಝ್ಝಕಿಯ್ಯ ಸನದು ನೀಡಲಾಯಿತು.
ಸಯ್ಯಿದ್ ಹಾದಿ ತಂಙಳ್ ಅಲ್ ಮಶ್ಹೂರ್ ಮೊಗ್ರಾಲ್ ಅವರು ದುವಾ ಹಾಗೂ ಸನದುದಾನಗೈದು ಮಾತನಾಡಿ ಮಹಿಳೆಯರು ಧಾರ್ಮಿಕವಾಗಿ ಹಾಗೂ ಲೌಕಿಕವಾಗಿ ಶಕ್ತರಾದರೆ ಕುಟುಂಬ ಜೀವನ ಸಂತುಷ್ಟವಾಗಲಿದೆ. ಸಣ್ಣ ಪುಟ್ಟ ಸಮಸ್ಯೆಗಳಿಂದ ಇಂದು ಕುಟುಂಬ ಜೀವನ ಜಂಜಾಟದಲ್ಲಿ ತೊಡಗಿಕೊಳ್ಳುತ್ತಿದ್ದು ಇದಕ್ಕೆ ಧಾರ್ಮಿಕ ವಿದ್ಯೆಯ ಕೊರತೆ ಕಾರಣವಾಗಿದೆ. ಇಂತಹ ವಿಚಾರಗಳಿಗೆ ಝಹ್ರ ಬತೂಲ್ ಶರೀಅತ್ ಕಾಲೇಜು ಪರಿಹಾರ ಕೇಂದ್ರವಾಗಿದ್ದು ಪೋಷಕರು ತಮ್ಮ ಮಕ್ಕಳ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣದ ಬಗ್ಗೆ ಕಾಳಜಿ ವಹಿಸಬೇಕೆಂದು ಹೇಳಿದರು.
ಉದ್ಘಾಟಿಸಿದ ಸಾಲ್ಮರ ಖತೀಬ್ ಉಮರ್ ದಾರಿಮಿ ಮಾತನಾಡಿ ಪ್ರಸ್ತುತ ಸನ್ನಿವೇಶದಲ್ಲಿ ಮಹಿಳೆಯರು ಧಾರ್ಮಿಕವಾಗಿ ಸಬಲೀಕರಣಗೊಳ್ಳಬೇಕಾದ ಅನಿವಾರ್ಯತೆಯಿದ್ದು ಈ ನಿಟ್ಟಿನಲ್ಲಿ ಝಹ್ರ ಬತೂಲ್ ಸಂಸ್ಥೆಯ ಕಾರ್ಯವೈಖರಿ ಶ್ಲಾಘನೀಯ ಎಂದು ಹೇಳಿದರು. ಝಹ್ರ ಬತೂಲ್ ಶರೀಅತ್ ಕಾಲೇಜು ಪ್ರಾಂಶುಪಾಲರಾದ ಅಬೂಬಕ್ಕರ್ ಸಿದ್ದೀಕ್ ಅಹ್ಮದ್ ಅಲ್ ಜಲಾಲಿ ಸನದುದಾನ ಭಾಷಣ ಗೈದು ಕಲಿತ ಕಲಿಕೆ ಸಾರ್ಥಕವಾಗಬೇಕಾದರೆ ನಿತ್ಯ ಜೀವನದಲ್ಲಿ ಧಾರ್ಮಿಕತೆಯನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಪರ್ಲಡ್ಕ ಖತೀಬ್ ಅಬ್ದುಲ್ ರಶೀದ್ ರಹ್ಮಾನಿ, ಅಡ್ವೊಕೇಟ್ ಮೂಸಾ ಪೈಂಬಚ್ಚಾಲ್, ಅಬ್ದುಲ್ ಕರೀಂ ದಾರಿಮಿ ಕುಂಬ್ರ, ನ್ಯಾಯವಾದಿ ಎಂ.ಪಿ ಅಬೂಬಕ್ಕರ್, ಅಬ್ಬಾಸ್ ಮದನಿ ಪಣೆಮಜಲು ಶುಭ ಹಾರೈಸಿದರು. ಅತಿಥಿಗಳಾಗಿ ಪರ್ಲಡ್ಕ ಶಂಸುಲ್ ಉಲಮಾ ಶರೀಅತ್ ಕಾಲೇಜು ಕಾರ್ಯದರ್ಶಿ ಹಂಝ ಹಾಜಿ ಪರ್ಲಡ್ಕ, ಕಲ್ಲೇಗ ಜಮಾಅತ್ ಅಧ್ಯಕ್ಷ ಮೊಹಮ್ಮದ್ ಹಾಜಿ, ಅನ್ವರ್ ಮುಸ್ಲಿಯಾರ್ ಮೊಟ್ಟೆತ್ತಡ್ಕ, ಮುಹಮ್ಮದ್ ಮದನಿ, ಯಾಕೂಬ್ ದಾರಿಮಿ ಸವಣೂರು, ಕರೀಂ ಎಸ್.ಆರ್ ಸವಣೂರು ಭಾಗವಹಿಸಿದ್ದರು. ಶಾಫಿ ಮೌಲವಿ ಸಾಲ್ಮರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ನವಾಝ್ ಅಝ್ಹರಿ ವಂದಿಸಿದರು.
ಡಾ.ಅಶ್ರಫ್ ಕಮ್ಮಾಡಿಯವರಿಗೆ ಸನ್ಮಾನ:
ಝಹ್ರ ಬತೂಲ್ ವಿದ್ಯಾ ಸಂಸ್ಥೆಯನ್ನು ಸುಸೂತ್ರವಾಗಿ ಮುನ್ನಡೆಸುತ್ತಿರುವ ಸಂಸ್ಥೆಯ ಅಧ್ಯಕ್ಷರಾದ ಡಾ. ಅಶ್ರಫ್ ಹಾಜಿ ಕಮ್ಮಾಡಿಯವರನ್ನು ಸನ್ಮಾನಿಸಲಾಯಿತು. ಅತಿಥಿಗಳು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.