ಪುತ್ತೂರು : ನೆಲ್ಲಿಕಟ್ಟೆ ಈಶ ವಿದ್ಯಾಲಯ ಮತ್ತು ದ.ಕ. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಉದ್ಯೋಗ ನೋಂದಣಿ ಶಿಬಿರ ಈಶ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಯಿತು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಉದ್ಯೋಗಿ ಎಂ.ಚಂದ್ರಶೇಖರ್ ರಾವ್ರವರು ದೀಪ ಬೆಳಗಿಸುವ ಮೂಲಕ ಶಿಬಿರ ಉದ್ಘಾಟಿಸಿ ಉದ್ಯೋಗಾಕಾಂಕ್ಷಿಗಳು ಪರೀಕ್ಷೆಯಲ್ಲಿ ಗಳಿಸುವ ಅಂಕಗಳೇ ಅಂತಿಮವಲ್ಲ ಅದರ ಜೊತೆಗೆ ಬೇರೆ ಬೇರೆ ರೀತಿಯ ಕೌಶಲ್ಯಗಳನ್ನು ಹೊಂದಿ ಉತ್ತಮ ಉದ್ಯೋಗಗಳನ್ನು ಗಳಿಸಿಕೊಳ್ಳಬೇಕು ಎಂದು ಶಿಬಿರಕ್ಕೆ ಶುಭಕೋರಿದರು. ಈಶ ವಿದ್ಯಾಲಯದ ಪ್ರಾಂಶುಪಾಲ ಎಂ. ಗೋಪಾಲಕೃಷ್ಣರವರು ಪ್ರಾಸ್ತವಿಕ ಮಾತನಾಡಿ ಕಳೆದ 22 ವರ್ಷಗಳಿಂದ ಈಶ ವಿದ್ಯಾಲಯವು ಅನೇಕ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ನೋಂದಾಣಿ ಹಾಗೂ ಬೃಹತ್ ಉದ್ಯೋಗ ಮೇಳಗಳನ್ನು ನಡೆಸಿದ್ದು ಸಾವಿರಾರು ಅಭ್ಯರ್ಥಿಗಳು ಉದ್ಯೋಗವನ್ನು ಪಡೆದುಕೊಂಡಿದ್ದು ಅಂತೆಯೇ, ಮುಂದಿನ ದಿನಗಳಲ್ಲಿ ಕೂಡ ಉದ್ಯೋಗ ನೋಂದಣಿ ಅಲ್ಲದೇ ಬೃಹತ್ ಉದ್ಯೋಗ ಮೇಳವನ್ನು ನಡೆಸಲು ಉದ್ದೇಶಿಸಿದ್ದು ಉದ್ಯೋಗಾಕಾಂಕ್ಷಿಗಳು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
ದ.ಕ. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಮಂಜುಷಾರವರು ಉದ್ಯೋಗ ನೋಂದಣಿ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ವಿಧಾನಗಳ ಬಗ್ಗೆ ಹಾಗೂ ಸರಕಾರಿ ಉದ್ಯೋಗಗಳ ಬಗ್ಗೆ ಮಾಹಿತಿ ನೀಡಿದರು. ಸುಮಾರು 50ಕ್ಕೂಅಧಿಕ ಎಸ್ಎಸ್ಎಲ್ ಸಿ, ಪಿಯುಸಿ, ಪದವಿ ಅರ್ಹತೆಯ ಅಭ್ಯರ್ಥಿಗಳು ಶಿಬಿರದಲ್ಲಿ ಉದ್ಯೋಗ ನೋಂದಣಿ ಮಾಡಿಸಿಕೊಂಡಿರುತ್ತಾರೆ. ಆಥಿರಾರವರು ಪ್ರಾರ್ಥಿಸಿ ಉಷಾ ಸ್ವಾಗತಿಸಿದರು, ಉಪನ್ಯಾಸಕಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು, ನಿಧಿ. ಆರ್.ಕೆ ವಂದಿಸಿದರು ಸಂಸ್ಥೆಯ ಉಪನ್ಯಾಸಕಿ ವಿನಯ, ಉಷಾ ಸಹಕರಿಸಿದರು.