ಉಪ್ಪಿನಂಗಡಿ: ಪಶು ಸಂಗೋಪನಾ ಇಲಾಖೆಯಲ್ಲಿ 35 ವರ್ಷ ಏಳು ತಿಂಗಳುಗಳ ಕಾಲ ಸೇವೆಯನ್ನು ಸಲ್ಲಿಸಿದ ಡಾ. ರಾಮಪ್ರಕಾಶ ಡಿ. ಅವರು ಎ.30ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ಮೂಲತಃ ಬಂಟ್ವಾಳ ತಾಲೂಕಿನ ವಿಟ್ಲದವರಾದ ಡಾ. ರಾಮಪ್ರಕಾಶ್ ಡಿ. ಅವರು ಆಂಧ್ರದ ತಿರುಪತಿಯಲ್ಲಿರುವ ವೆಟರಿನರಿ ಕಾಲೇಜಿನಲ್ಲಿ ತನ್ನ ಪದವಿ ಶಿಕ್ಷಣವನ್ನು ಪಡೆದು, 1986ರಲ್ಲಿ ಪಶು ವೈದ್ಯಾಧಿಕಾರಿಯಾಗಿ ಪಶುಸಂಗೋಪನಾ ಇಲಾಖೆಗೆ ಸೇರ್ಪಡೆಗೊಂಡು ಬಂಟ್ವಾಳ ಸಂಚಾರಿ ಪಶು ಚಿಕಿತ್ಸಾಲಯದಲ್ಲಿ ಕರ್ತವ್ಯ ಆರಂಭಿಸಿದರು. ಬಳಿಕ ಬೆಳ್ತಂಗಡಿ, ಸುಬ್ರಹ್ಮಣ್ಯ, ಪುತ್ತೂರಿನಲ್ಲಿ ಪಶು ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ಇವರು ಪದೋನ್ನತಿಗೊಂಡು ಉಪ್ಪಿನಂಗಡಿ ಪಶು ಆಸ್ಪತ್ರೆಯಲ್ಲಿ ಸಹಾಯಕ ನಿರ್ದೇಶಕರಾಗಿ ನಿಯೋಜನೆಗೊಂಡರು. 2020ರಲ್ಲಿ ಉಪನಿರ್ದೇಶಕರಾಗಿ ಪದೋನ್ನತಿ ಹೊಂದಿದ ಇವರು ಮಂಗಳೂರು ಜಿಲ್ಲಾ ಪಾಲಿಕ್ಲಿನಿಕ್ನಲ್ಲಿ ಕರ್ತವ್ಯ ನಿರ್ವಹಿಸಿ ಇಂದು ಸೇವಾ ನಿವೃತ್ತಿಯನ್ನು ಪಡೆಯಲಿದ್ದಾರೆ. ಉಪನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಡಾ. ರಾಮಪ್ರಕಾಶ್ ಅವರು ಪಶುವೈದ್ಯರಿಗೆ ಕಾಲಮಿತಿ ವೇತನ, ಭಡ್ತಿಗಳು ದೊರೆಯುವಲ್ಲಿ ಮೂಲ ಕಾರಣೀಕರ್ತರಾಗಿದ್ದು, ಇದಕ್ಕಾಗಿ ಕರ್ನಾಟಕ ಪಶುವೈದ್ಯಕೀಯ ಸಂಘವು ಇವರಿಗೆ 2008ರಲ್ಲಿ `ಶ್ರೇಷ್ಟ ಪಶು ವೈದ್ಯ ಪ್ರಶಸ್ತಿ’ಯನ್ನು ನೀಡಿ ಸನ್ಮಾನಿಸಿದೆ.
ಇವರ ಪುತ್ರ ಮನೀಷ್ ಡಿ. ಎಂ.ಎಸ್. ಪದವಿ ಪಡೆದು ಯುಎಸ್ಎಯಲ್ಲಿ ಉದ್ಯೋಗದಲ್ಲಿದ್ದರೆ, ಪುತ್ರಿ ಮೇಘನಾ ಮಂಗಳೂರಿನ ಆಯುರ್ವೇದ ಕಾಲೇಜಿನಲ್ಲಿ ಬಿ.ಎ.ಎಂ.ಎಸ್. ಪದವಿ ಪಡೆಯುತ್ತಿದ್ದಾರೆ. ನಿವೃತ್ತಿಯ ನಂತರ ಪತ್ನಿ ಶೈಲಜಾ ಪಿ. ಅವರೊಂದಿಗೆ ಇವರು ಪುತ್ತೂರಿನಲ್ಲಿ ನೆಲೆಸಲಿದ್ದಾರೆ.