ಕಡಬ :ಟರ್ಪಾಲ್ ಹೊದಿಕೆಯ ಗುಡಿಸಲು ಸಮೀಪವೇ ತಾತ್ಕಾಲಿಕ ಮನೆ ನಿರ್ಮಾಣ ಮಾಡಲು ಮುಂದಾದ ಕಳಾರದ ಬಡ ಕುಟುಂಬಕ್ಕೆ ಕಂದಾಯ ಇಲಾಖೆ ಮನೆ ನಿರ್ಮಾಣ ಮಾಡದಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಪ್ರಗತಿಯಲ್ಲಿದ್ದ ಕಾಮಗಾರಿಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ.
ಕುಟ್ರುಪ್ಪಾಡಿ ಗ್ರಾ.ಪಂ ವ್ಯಾಪ್ತಿಯ ಅಡ್ಕಾಡಿ ಚಂದ್ರಶೇಖರ ಅವರು ಹಲವು ವರ್ಷಗಳಿಂದ ಸರ್ಕಾರಿ ಸ್ವಾಧೀನದಲ್ಲಿ ಇರುವ ಜಾಗದಲ್ಲಿ ವಾಸಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಪ್ರಕೃತಿ ವಿಕೋಪ ಉಂಟಾಗಿ ಮನೆ ಮುರಿದು ಬಿದ್ದಿತ್ತು. ಹೀಗಾಗಿ ಟರ್ಪಾಲ್ ಹೊದಿಕೆಯ ಗುಡಿಸಲಿನಲ್ಲಿ ವಾಸವಾಗಿದ್ದರು. ಇದೀಗ ಕಂದಾಯ ಇಲಾಖೆಯ ಪರಿಹಾರ ಧನದಲ್ಲಿ ಮನೆ ನಿರ್ಮಿಸಲು ಮುಂದಾಗಿದ್ದು ಸ್ಥಳೀಯ ವ್ಯಕ್ತಿಯೊಬ್ಬರು ಆಕ್ಷೇಪಿಸಿದ ಕಾರಣ ಸ್ಥಳಕ್ಕೆ ಆಗಮಿಸಿದ ಕಡಬ ತಹಶೀಲ್ದಾರ್ ಕಾಮಗಾರಿ ಸ್ಥಗಿತಗೊಳಿಸುವಂತೆ ಮೌಖಿಕ ಸೂಚನೆ ನೀಡಿದ್ದಾರೆ.
ಮುಸ್ಲಿಂ ದಫನ ಭೂಮಿಯನ್ನಾಗಿ ಕಾಯ್ದಿರಿಸುವಂತೆ ಸ್ಥಳೀಯ ಮಸೀದಿ ಆಡಳಿತ ಮಂಡಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು. ಈ ನಡುವೆ ತಮ್ಮ ಸ್ವಾಧೀನದ ಜಾಗಕ್ಕೆ ಹಕ್ಕು ಪತ್ರ ನೀಡವಂತೆ ವಾಸವಿದ್ದ ಕುಟುಂಬವೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಿತ್ತು. ಆದರೆ ತನಿಖೆ ವೇಳೆ ಮುಸ್ಲಿಂ ಧಪನ ಭೂಮಿ ಕಾಯ್ದಿರಿಸಿರುವುದು ಕಂಡು ಬರಲಿಲ್ಲ. ಪಹಣಿಯಲ್ಲಿ ಡಿ ವರ್ಗದ ದಫನದ ಬಗ್ಗೆ ಅಡಂಗಲ್ ನಲ್ಲಿ ದಾಖಲಾಗಿತ್ತು. ಜಾಗ ಸ್ವಾಧೀನ ಹೊಂದಿದ್ದ ಕುಟುಂಬದ ದೈವಸ್ಥಾನವೂ ಇರುವುದು ಪತ್ತೆಯಾಗಿತ್ತು.
“ಸ್ಥಳೀಯರೊಬ್ಬರು ಪೋನ್ ಮೂಲಕ ದೂರು ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಮನೆ ನಿರ್ಮಾಣ ಮಾಡುವುದನ್ನು ನಿಲ್ಲಿಸಲು ಮೌಖಿಕ ಸೂಚನೆ ನೀಡಿದ್ದೇನೆ. ಈ ಬಡ ಕುಟುಂಬದ ಪರಿಸ್ಥಿತಿ ನನಗೂ ಅರ್ಥವಾಗಿದೆ. ಜಾಗದ ಬಗ್ಗೆ ,ಅವರಿಗೆ ತಿಳುವಳಿಕೆ ನೀಡಿದ್ದೇನೆ” – ಅನಂತ ಶಂಕರ್ ,ತಹಶೀಲ್ದಾರ್ ಕಡಬ
“ನಮ್ಮದು ಪೂರ್ವಜರಿಂದಲೂ ಸ್ವಾಧೀನವಿದ್ದ ಜಾಗ ಇದಾಗಿದೆ. ನಮ್ಮ ಆರಾಧನ ದೈವಗಳ ಗುಡಿಗಳೂ ಇಲ್ಲಿವೆ. ಇರುವ ಮನೆಗೆ ಮನೆ ನಂಬರ್ ಇದ್ದು ತೆರಿಗೆ ಪಾವತಿ ಮಾಡುತ್ತಿದ್ದೇನೆ.ಇತ್ತೀಚೆಗೆ 94 ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದರೂ ಕಂದಾಯ ಇಲಾಖೆ ತಿರಸ್ಕರಿಸಿದೆ. ಟರ್ಪಾಲು ಹೊದಿಕೆಯ ಗುಡಿಸಲು ಸೋರುತ್ತಿದೆ ನನ್ನ ಪತ್ನಿ ಗರ್ಭಿಣಿಯಾಗ್ಗಿದ್ದು ಸೋರುವ ಮನೆಯಲ್ಲಿ ಆಕೆಯ ಆರೈಕೆ ಕಷ್ಟವಾಗಿದೆ. ಹೀಗಾಗಿ ಮನೆ ಬಿದ್ದ ಸಂದರ್ಭ ಕಂದಾಯ ಇಲಾಖೆ ನೀಡಿದ ಪರಿಹಾರ ಮೊತ್ತದಲ್ಲಿ ಮನೆ ನಿರ್ಮಿಸುತ್ತಿದ್ದೇವೆ” – ಚಂದ್ರಶೇಖರ ಅಡ್ಕಾಡಿ, ಮನೆ ಯಜಮಾನ
“ಬಡ ಕುಟುಂಬಕ್ಕೆ ವಾಸಿಸಲು ಸೂಕ್ತ ವ್ಯವಸ್ಥೆ ಕಲ್ಪಿಸುವುದು ಕಂದಾಯ ಇಲಾಖೆಯ ಜವಾಬ್ದಾರಿ .ಯಾವುದೇ ದಾಖಲೆಯಲ್ಲಿ ಮುಸ್ಲಿಂ ದಫನ ಭೂಮಿ ಇಲ್ಲ ಎಂದು ತಹಶೀಲ್ದಾರರು ಲೋಕಾಯುಕ್ತರಿಗೆ ನೀಡಿದ ವರದಿಯಲ್ಲಿ ತಿಳಿಸಿದ್ದಾರೆ. ಶ್ರಮದಾನದ ಮೂಲಕ ಮನೆ ನಿರ್ಮಾಣಕ್ಕೆ ಸಹಾಯ ಮಾಡಿದ್ದೇವೆ– ರಾಘವ ಕಳಾರ ಅಧ್ಯಕ್ಷ ಭೀಮ್ ಆರ್ಮಿ ಕಡಬ ಘಟಕ
ಪೊಲೀಸ್ ದೂರು ನೀಡಿದ ತಹಶೀಲ್ದಾರ್: ಈ ಘಟನೆಗೆ ಸಂಬಂಧಿಸಿ ಕಟ್ಟಣ ನಿರ್ಮಾಣದಲ್ಲಿ ತೊಡಗಿದ ಕಾರ್ಮಿಕರ ಸಹಿತ ಕೆಲವರ ವಿರುದ್ದ ತಹಶೀಲ್ದಾರ್ ಠಾಣೆಗೆ ದೂರು ನೀಡಿರುವುದು ತಿಳಿದುಬಂದಿದೆ.ಬಳಿಕ ಮಾತುಕತೆಯಲ್ಲಿ ಬಗೆಹರಿದಿದೆ ಎನ್ನಲಾಗಿದೆ.