ಪೌರ ಕಾರ್ಮಿಕರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ – ಅಣ್ಣಪ್ಪ ಕಾರೆಕ್ಕಾಡು
ಪುತ್ತೂರು: ಕರ್ನಾಟಕ ರಾಜ್ಯ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಹೊರಗುತ್ತಿಗೆ ಆಧಾರದಲ್ಲಿ ತ್ಯಾಜ್ಯ ಸಾಗಿಸುವ ವಾಹನ ಚಾಲಕರು, ವಾಟರ್ಮೆನ್, ಡಾಟಾ ಎಂಟ್ರಿ/ಕಂಪ್ಯೂಟರ್ ಆಪರೇಟರ್ಗಳು, ಒಳಚರಂಡಿ ಕಾರ್ಮಿಕರು, ಲ್ಯಾಂಡ್ ಫಿಲ್ಲಿಂಗ್ ಕಾರ್ಮಿಕರು, ಸಹಾಯಕರು, ಸ್ಮಶಾನ ಕಾವಲುಗಾರರಿಗೆ ನೇರ ನೇಮಕಾತಿ ಇಲ್ಲವೇ ನೇರ ವೇತನ ಪಾವತಿಸುವಂತೆ ರಾಜ್ಯಾದ್ಯಂತ ನಡೆಯುತ್ತಿದ್ದ ಮುಷ್ಕರಕ್ಕೆ ಪುತ್ತೂರು ನಗರಸಭೆ ಪೌರ ಕಾರ್ಮಿಕರು ಬೆಂಬಲ ನೀಡಿದ್ದು, ಇದೀಗ ಬೇಡಿಕೆ ಈಡೇರಿಕೆ ಭರವಸೆ ಹಿನ್ನೆಲೆಯಲ್ಲಿ ಜು.5ರಂದು ಎಲ್ಲಾ ಪೌರ ಕಾರ್ಮಿಕರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಪೌರ ಕಾರ್ಮಿಕರ ಸಂಘ ಮತ್ತು ಹೊರಗುತ್ತಿಗೆ ನೌಕರರ ಸಂಘದ ಕರಾವಳಿ ಭಾಗದ ಸಂಚಾಲಕ ಬಿ.ಕೆ.ಅಣ್ಣಪ್ಪ ಕಾರೆಕ್ಕಾಡು ಅವರು ತಿಳಿಸಿದ್ದಾರೆ.
ಜು.4ರಂದು ಬೆಳಿಗ್ಗೆ ಪುತ್ತೂರು ನಗರಸಭೆ ಪೌರ ಕಾರ್ಮಿಕರು ಸಾಂಕೇತಿಕವಾಗಿ ನಗರಸಭೆ ಆವರಣದಲ್ಲಿ ಪ್ರತಿಭಟನೆ ನಡೆಸಿ ಬಳಿಕ ಮಂಗಳೂರಿಗೆ ಜಿಲ್ಲಾ ಮಟ್ಟದ ಮುಷ್ಕರದಲ್ಲಿ ಭಾಗವಹಿಸಿದ್ದೇವೆ. ಜು.1ರಿಂದ 4 ರ ತನಕ ಮುಷ್ಕರದಲ್ಲಿ ಭಾಗವಹಿಸಿದ ನಮಗೆ ಸಂಜೆ ವೇಳೆ ಮುಖ್ಯಮಂತ್ರಿಯವರು ನಮ್ಮ ಬೇಡಿಕೆ ಈಡೇರಿಸಿದ್ದಾರೆ. ನೇರ ಪಾವತಿಯಲ್ಲಿರುವವರಿಗೆ ನೇರ ನೇಮಕಾತಿ, ಹೊರಗುತ್ತಿಗೆಯಲ್ಲಿರುವವರಿಗೆ ನೇರ ಪಾವತಿ ಮಾಡುವ ಕುರಿತು ಮೂರು ತಿಂಗಳ ಸಮಯ ಕೇಳಿದ್ದಾರೆ. ಹಾಗಾಗಿ ಮುಷ್ಕರ ಹಿಂಪಡೆದಿದ್ದೇವೆ ಎಂದು ಅಣ್ಣಪ್ಪ ಕಾರೆಕ್ಕಾಡು ತಿಳಿಸಿದ್ದಾರೆ.