ಆಚರಣೆಯಾಗುತ್ತಿರುವ ತುಳುನಾಡ ತಿಂಗಳು ಆಟಿ- ಡಾ.ರಾಜೇಶ್ ಬೆಜ್ಜಂಗಳ

0

ಪುತ್ತೂರು: ತುಳುನಾಡ ವಿಶೇಷ ಆಚರಣೆಗಳ ಪೈಕಿ ಆಟಿ ವಿಶಿಷ್ಟ ಸ್ಥಾನದಲ್ಲಿ ನಿಲ್ಲುತ್ತದೆ. ಜಾನಪದ ಕಲೆ, ಜಾನಪದ ತಿಂಡಿ-ತಿನಿಸು, ಪ್ರಾದೇಶಿಕ ಆರಾಧನೆ ಎಲ್ಲವನ್ನೂ ಒಂದೇ ತಿಂಗಳಲ್ಲಿ ಅನುಭವಿಸುವ ಸುಖ ತುಳುನಾಡ ಸಜ್ಜನರ ಆಟಿ ಆಚರಣೆಯಾಗಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುತ್ತಿದ್ದೇವೆ. ಮಳೆಯ ಬಿರುಸಿನ ನಡುವೆಯೂ ಪ್ರಸಕ್ತ ವರ್ಷಗಳಲ್ಲಿಯೂ ಇಂತಹ ಸಾಂಪ್ರಾದಾಯಿಕ ಆಚರಣೆಗಳು ಪ್ರಚಲಿತದಲ್ಲಿರುವುದು ಹೆಮ್ಮೆಯ ವಿಷಯ ಎಂದು ಸ್ವಚ್ಚ ಪುತ್ತೂರು ಪ್ರಾಜೆಕ್ಟ್ ಡೈರೆಕ್ಟರ್ ಡಾ ರಾಜೇಶ್ ಬೆಜ್ಜಂಗಳ ಹೇಳಿದರು.

 

ಇವರು ರೇಡಿಯೋ ಪಾಂಚಜನ್ಯ ೯೦.೮ ಎಫ್.ಎಂ ನೇತೃತ್ವದಲ್ಲಿ ಇನ್ನರ್‍ವೀಲ್ ಮತ್ತು ಮುಳಿಯ ಜ್ಯುವೆಲ್ಸ್ ಸಹಯೋಗದಲ್ಲಿ ನಡೆದ ಆಟಿ ತಿಂಗಳ ಆಚರಣೆಯ ವಿಶೇಷತೆ ಮತ್ತು ಮಹತ್ವದ ಕುರಿತು ಸೋಮವಾರ ನಡೆಸಿದ ತುಳು ಭಾಷಣ ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಭಾಗವಹಿಸಿ ಮಾತನಾಡಿದರು. ತುಳುನಾಡು ಗಂಡುಮೆಟ್ಟಿದ ಕಲೆಯ ಬೀಡು. ಜೊತೆಗೆ ತನ್ನದೇ ಆದ ಪಾರಂಪರಿಕ ಆರಾಧನೆ, ಆಚರಣೆಗಳನ್ನು ಉಳಿಸಿ ಬೆಳೆಸಿಕೊಂಡು ಪೋಷಿಸುತ್ತಿದೆ. ಅಂತೆಯೇ ಆಟಿ ಮುಂಬರುವ ಪೀಳಿಗೆಗೆ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಆಚರಣೆಯಾಗಿ ಮಾರ್ಪಟ್ಟಿದೆ. ಏಕೆಂದರೆ ಹಿಂದಿನ ಪೀಳಿಗೆಯ ಜೀವನದ ಸೊಬಗನ್ನು ಮುಂಬರುವ ತಲೆಮಾರಿಗೆ ರವಾನಿಸುವ ಜವಾಬ್ದಾರಿ ನಮ್ಮದು ಎಂದರು.

ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ಟೈನಿ ದೀಪಕ್, ತುಳು ನಮ್ಮ ಸ್ಥಳೀಯ ಭಾಷೆ ಯಾದರೂ, ಅದು ತನ್ನ ವ್ಯಾಪ್ತಿಯನ್ನು ಎಲ್ಲೆಡೆ ಪಸರಿಸುತ್ತ ಬಂದಿದೆ. ಅದೇ ರೀತಿ ಸ್ಥಳೀಯ ಭಾಷೆಗಳು ಅಳಿವಿನಂಚಿನಲ್ಲಿರುವುದಂತೂ ನಿಜ ಸ್ಥಳೀಯ ಭಾಷೆಗಳ ಉಳಿವು ಅಗತ್ಯವಿರುವುದರಿಂದ ಇಂತಹ ಕಾರ್ಯಕ್ರಮಗಳು ಸ್ಪೂರ್ತಿದಾಯಕ, ಇಂತಹ ಇನ್ನಷ್ಟು ಆಯೋಜನೆಗಳು ಮುಂದೆ ಬರಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಪುತ್ತೂರು ನಗರಸಭೆ ಸದಸ್ಯೆ ಗೌರಿ ಬನ್ನೂರು ಉಪಸ್ಥಿತರಿದ್ದರು. ಪುತ್ತೂರು, ಸುಳ್ಯ ತಾಲೂಕಿನ ಕಾಲೇಜು ಸೇರಿದಂತೆ ೨೮ ಸ್ಪರ್ಧಾಳುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪದವಿ ವಿದ್ಯಾರ್ಥಿನಿ ನಿಶ್ಮಿತ ಪ್ರಾರ್ಥಿಸಿ, ರೇಡಿಯೋ ಪಾಂಚಜನ್ಯದ ಅಧ್ಯಕ್ಷೆ ಕೃಷ್ಣವೇಣಿ ಪ್ರಸಾದ್ ಮುಳಿಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಕಾರ್ಯದರ್ಶಿ ಪದ್ಮಾ ಕೆ.ಆರ್ ಆಚಾರ್ಯ ವಂದಿಸಿದರು. ರೇಡಿಯೋ ಪಾಂಚಜನ್ಯ ಸಂಯೋಜಕಿ ತೇಜಸ್ವಿ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ತಾಂತ್ರಿಕ ವಿಭಾಗದ ಪ್ರಶಾಂತ್ ಸಹಕರಿಸಿದರು.

LEAVE A REPLY

Please enter your comment!
Please enter your name here