ದೋಳ್ಪಾಡಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ100 ಫಲಿತಾಂಶ ಸಾಧಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ಗುರುವಂದನಾ ಕಾರ್ಯಕ್ರಮ

0

  • ಭವಿಷ್ಯವನ್ನು ಉತ್ತಮವಾಗಿ ರೂಪಿಸುವುದು ವಿದ್ಯಾರ್ಥಿಗಳ ಗುರಿಯಾಗಬೇಕು – ಎಸ್. ಅಂಗಾರ

ಚಿತ್ರ: ಸುಧಾಕರ್ ಕಾಣಿಯೂರು

 

ಕಾಣಿಯೂರು: ಭವಿಷ್ಯವನ್ನು ಉತ್ತಮವಾಗಿ ರೂಪಿಸುವುದು ವಿದ್ಯಾರ್ಥಿಗಳ ಮುಖ್ಯ ಗುರಿಯಾಗಬೇಕು. ಒಳ್ಳೆಯ ಪರಂಪರೆ, ಸಂಸ್ಕೃತಿ, ಆಚಾರ ವಿಚಾರಗಳನ್ನು ಬೋಧಿಸುತ್ತಿರುವ ಸಂಸ್ಥೆಗಳು ಪ್ರಸ್ತುತ ದಿನಗಳಲ್ಲಿ ಅಗತ್ಯ. ಬದುಕಿನ ಕಲೆಯನ್ನು ಕಲಿಸುವ ಶಿಕ್ಷಣ ಪ್ರತಿಯೊಬ್ಬನಿಗೂ ತಲುಪಿದಾಗ ಸಂಪೂರ್ಣ ಶಿಕ್ಷಣ ಸಾಧ್ಯ. ಸರಕಾರಿ ಶಾಲೆ ಉಳಿಯಬೇಕಾದರೆ ವಿದ್ಯಾರ್ಥಿಗಳ ಸಂಖ್ಯೆಯು ಅತ್ಯಂತ ಪ್ರಮುಖವಾಗಿರುತ್ತದೆ. ನಮ್ಮ ಶಾಲೆ ನನ್ನ ಶಾಲೆ ಎನ್ನುವ ಅಭಿಮಾನದಿಂದ ಜನರು ಪಾಲ್ಗೊಂಡಾಗ ಶಾಲೆ ಅಭಿವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ ಎಂದು ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ ಹೇಳಿದರು. ಅವರು ದೋಳ್ಪಾಡಿ ಸರಕಾರಿ ಪ್ರೌಢ ಶಾಲೆಯ 2021-22ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ 100 ಫಲಿತಾಂಶದೊಂದಿಗೆ ವಿಶೇಷ ಸಾಧಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಮತ್ತು ಗುರುವಂದನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಸಂಸ್ಕಾರಯುತ, ಮೌಲ್ಯಾಧಾರಿತ ಶಿಕ್ಷಣ ನೀಡಿ ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿಸಬೇಕು. ಸಮಾಜಕ್ಕೆ ಸೇವಾ ಮನೋಭಾವ ನೀಡುವ ಗುಣ, ಬೆಳೆಸುವ ಪ್ರಕ್ರಿಯೆ ಶಿಕ್ಷಣದಿಂದ ಆಗಬೇಕು. ಆ ಕೆಲಸ ಸರಕಾರಿ ಶಾಲೆಗಳಿಂದ ಆಗುತ್ತಿದೆ. ಪೋಷಕರು ಶಿಕ್ಷಕರು ಸಹಭಾಗಿತ್ವದಿಂದ ಕಾರ್ಯ ನಿರ್ವಹಿಸಿದಾಗ ಮಕ್ಕಳ ಪ್ರಗತಿ ಸಾಧ್ಯ ಎಂದರು. ಕಾಣಿಯೂರು ಗ್ರಾ.ಪಂ.ಅಧ್ಯಕ್ಷೆ ಲಲಿತಾ ದರ್ಖಾಸು ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಸವಣೂರು ಸ.ಪ.ಪೂ.ಕಾಲೇಜಿನ ಕಾರ್ಯಾಧ್ಯಕ್ಷ ಗಿರಿಶಂಕರ ಸುಲಾಯ, ಕಾಣಿಯೂರು ಗ್ರಾ.ಪಂ.ಉಪಾಧ್ಯಕ್ಷ ಗಣೇಶ್ ಉದನಡ್ಕ, ಗ್ರಾ.ಪಂ.ಸದಸ್ಯರಾದ ಲೋಕಯ್ಯ ಪರವ ದೋಳ್ಪಾಡಿ. ದೇವಿಪ್ರಸಾದ್ ದೋಳ್ಪಾಡಿ. ತಾರಾನಾಥ ಇಡ್ಯಡ್ಕ, ಅಂಬಾಕ್ಷಿ ಕೂರೇಲು, ಶಿಕ್ಷಣ ಸಂಯೋಜಕ ಹರಿಪ್ರಸಾದ್, ಕಡಬ ಪೋಲಿಸ್ ಠಾಣೆಯ ಉಪನಿರೀಕ್ಷಕ ಅಂಜನೇಯ ರೆಡ್ಡಿ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ದೋಳ್ಪಾಡಿ ಪ್ರೌಢ ಶಾಲಾ ಕಾರ್ಯಾಧ್ಯಕ್ಷ ಶಿವರಾಮ ಗೌಡ, ದೋಳ್ಪಾಡಿ ಪ್ರೌಢ ಶಾಲೆಯ ನಿವೃತ್ತ ಮುಖ್ಯಶಿಕ್ಷಕ ಸುಬ್ರಹ್ಮಣ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯಶಿಕ್ಷಕ ಶಶಿಧರ ಪಿ ವರದಿ ವಾಚಿಸಿದರು. ಪಿಡಬ್ಲ್ಯೂಡಿ ಗುತ್ತಿಗೆದಾರರಾದ ಮೋಹನ್‌ದಾಸ್ ರೈ ಬಲ್ಕಾಡಿ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು, ಶಿಕ್ಷಕ ರವಿರಾಜ್ ಮೊಳೆಯಾರ್ ವಂದಿಸಿದರು. ಉಮೇಶ್ ರೈ ಪಿಜಕ್ಕಳ, ಪುರುಷೋತ್ತಮ ಕೆ.ಆರ್ ದೋಳ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ದೋಳ್ಪಾಡಿ ಸರಕಾರಿ ಪ್ರೌಢ ಶಾಲೆ, ದೋಳ್ಪಾಡಿ ಪ್ರಾಥಮಿಕ ಶಾಲೆ, ಅಂಗನವಾಡಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ವೈಭವ ನಡೆಯಿತು.

ವಿದ್ಯಾರ್ಥಿಗಳಿಗೆ ಅಭಿನಂದನೆ: ದೋಳ್ಪಾಡಿ ಸರಕಾರಿ ಪ್ರೌಢ ಶಾಲೆಯ2021-22ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ 100 ಫಲಿತಾಂಶ ಸಾಧಿಸಿದ ವಿದ್ಯಾರ್ಥಿಗಳಾದ ದಿವ್ಯ, ಜ್ಞಾನೇಶ್, ಕೌಶಿಕ್ ಕಉಮಾರ್, ಲಿಖಿನ್ ಕುಮಾರ್, ಮನೋಹರ ಗೌಡ, ಮಾನ್ಯ ಕೆ.ಎನ್, ರಕ್ಷಿತ್, ರವಿನಂದನ್, ತನುಷ್ ಕುಮಾರ್, ವಿನಯ ಕುಮಾರ್ ಹಾಗೂ ಇಬ್ಬರು ವಿದ್ಯಾರ್ಥಿಗಳಿಗೆ ಬರಹಗಾರರಾಗಿ ಸಹಕರಿಸಿದ ವೈಭವಿ ಡಿ.ಎಸ್, ವೈಷ್ಣವಿ ಡಿ.ಎಸ್ ಅವರನ್ನು ಅಭಿನಂದಿಸಲಾಯಿತು.

ಗುರುವಂದನಾ ಕಾರ್ಯಕ್ರಮ: ಶಾಲೆಯಿಂದ ವರ್ಗಾವಣೆಗೊಂಡಿರುವ ಶಿಕ್ಷಕರಾದ ನಾರಾಯಣ ನಾಯಕ್, ಯುಜಿನಾ ಪಿ, ಶಾಲಾ ಮುಖ್ಯಶಿಕ್ಷಕರಾದ ಶಶಿಧರ್, ಶಿಕ್ಷಕರಾದ ರವಿರಾಜ್ ಮೊಳೆಯಾರ್, ಉಷಾದೇವಿ, ಜಯರಾಮ ಗೌಡ, ಪ್ರಕಾಶ್, ಅತಿಥಿ ಶಿಕ್ಷಕರಾದ ಅಶ್ವಿತಾ ರೈ, ಸವಿತಾ ಹಾಗೂ ಕಳೆದ ವರ್ಷದ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಶ್ವಾವ್ಯ, ರಶ್ಮೀ, ಅಕ್ಷರ ದಾಸೋಹ ಸಿಬ್ಬಂದಿಗಳಾದ ವಸಂತಿ ಲೋಕಯ್ಯ, ಯಮುನಾರವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here