ವಂಚನೆಯಿಂದ ಭೂ ಕಬಳಿಕೆ ಆರೋಪ ಪ್ರಕರಣ; ವಕೀಲ ಸುಬ್ರಹ್ಮಣ್ಯ ಕುಮಾರ್ ಅಗರ್ತರಿಗೆ ಜಾಮೀನು ಮಂಜೂರು

0

ಉಪ್ಪಿನಂಗಡಿ: ವಂಚನೆ ಮಾಡಿ ಭೂಕಬಳಿಕೆ ಮಾಡಿದ ಆರೋಪದ ಪ್ರಕರಣಕ್ಕೆ ಸಂಬಧಿಸಿ ಬೆಳ್ತಂಗಡಿ ತಹಸೀಲ್ದಾರ್, ನೋಂದಾಣಾಧಿಕಾರಿ, ವಕೀಲರೋರ್ವರು ಸಹಿತ ಒಟ್ಟು ಏಳು ಮಂದಿಯ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರಾಗಿರುವ ವಕೀಲ ಸುಬ್ರಹ್ಮಣ್ಯ ಕುಮಾರ್ ಅಗರ್ತ ಇವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಆಗಿದೆ.

ಕರಾಯ ಗ್ರಾಮದ ಕೆರೆಕೋಡಿ ನಿವಾಸಿ ನಾರಾಯಣ ನಾಯ್ಕ ಎಂಬವರ ಪತ್ನಿ ವಾರಿಜಾ ಎಂಬವರು ನೀಡಿರುವ ದೂರಿನ ಮೇರೆಗೆ ವಕೀಲರಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಬೆಳ್ತಂಗಡಿ ತಹಸೀಲ್ದಾರರು, ಕರಾಯ ಧನಲಕ್ಷ್ಮೀ ನಿಲಯದ ಗಿರೀಶ, ಸುರೇಶ, ಶೇಖರ ಹಾಗೂ ತಣ್ಣೀರುಪಂಥ ಗ್ರಾಮದ ಅಳಕೆಯ ನಝೀರ್ ಮತ್ತು ಬೆಳ್ತಂಗಡಿಯ
ನೋಂದಣಾಧಿಕಾರಿ ನಾಗರಾಜ್ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಾರಿಜಾ ಎಂಬವರು ನೀಡಿರುವ ದೂರಿನಲ್ಲಿ “ತನಗೆ ಎಲ್‌ಆರ್‌ವೈ 9/74-75ರಂತೆ ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಸರ್ವೆ ನಂ.: 13/4ರಲ್ಲಿ 1.01 ಎಕ್ರೆ, ಸ.ನಂ.: 13/3ರಲ್ಲಿ 1.56 ಎಕ್ರೆ, ಸ.ನಂ. 11/4ರಲ್ಲಿ 0.37 ಎಕ್ರೆ, ಸ.ನಂ.: 11/2ರಲ್ಲಿ 0.34 ಎಕ್ರೆ, ಸ.ನಂ.: 13/5ರಲ್ಲಿ 0.20 ಎಕರೆ ಜಮೀನು ಮಂಜೂರಾಗಿದ್ದು, ತನ್ನ ತಂದೆ ಹಾಗೂ ತಾಯಿ ಮೃತಪಟ್ಟ ಬಳಿಕ ತಂದೆಗೆ ಮಂಜೂರಾದ ಜಮೀನನ್ನು ವಿಭಜನೆ ಮಾಡಿಕೊಡಬೇಕೆಂದು ತಾನು ಬೆಳ್ತಂಗಡಿ ಸಿವಿಲ್ ನ್ಯಾಯಾಲಯದಲ್ಲಿ ಮೂಲದಾವೆ ನಂ: 156/2016ರಂತೆ ದಾವೆ ಹೂಡಿ ಮಧ್ಯಂತರ ನಿರ್ಭಂಧಾಜ್ಞೆಯನ್ನು ನ್ಯಾಯಾಲಯದ ಮೂಲಕ ಪಡೆದಿರುತ್ತೇನೆ. ಇಲ್ಲಿ ಒಂದನೇ ಆರೋಪಿಯಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ ಅವರು ಮೂರನೇ ಆರೋಪಿಯಾಗಿರುವ ಸುರೇಶ್ ಅವರ ಪಹಣಿಯು ವ್ಯತ್ಯಾಸವಾಗಿದೆ ಎಂಬುದಾಗಿ ನಂಬಿಸಿ, ಬೆಳ್ತಂಗಡಿ ನೋಂದಣಿ ಕಚೇರಿಯಲ್ಲಿ ಆರನೇ ಆರೋಪಿಯಾದ ನಝೀರ್ ಅವರ ಹೆಸರಿಗೆ ನೋಂದಣಿ ಮಾಡಿಸಿದ್ದಾರೆ. ಆರೋಪಿಗಳಾದ ಸುರೇಶ್, ಗಿರೀಶ್ ಹಾಗೂ ಶೇಖರ ಎಂಬವರು ಜಮೀನು ಖರೀದಿಸುವ ನಾಟಕ ಮಾಡಿದ್ದು, ಇದಕ್ಕೆ ಒಂದನೇ ಆರೋಪಿಯು ಪ್ರಮುಖ ಪಾತ್ರಧಾರಿಯಾಗಿರುತ್ತಾರೆ. ಎರಡನೇ ಆರೋಪಿಯಾದ ತಹಶೀಲ್ದಾರ್ ಅವರು ಎಲ್‌ಆರ್‌ವೈ 9/74-75ಯನ್ನು ಪಹಣಿಯಲ್ಲಿ ತಿರುಚಿ ಎಲ್‌ಆರ್‌ವೈ 12/74-75ರಂತೆ ಸುಳ್ಳು ದಾಖಲೆ ಮಾಡಿಕೊಟ್ಟು ಸಹಕರಿಸಿದ್ದಾರೆ. ಈ ಎಲ್ಲಾ ದಾಖಲೆಗಳನ್ನು ಪರಿಶೀಲಿಸದೇ ನೋಂದಣಾಧಿಕಾರಿಯಾಗಿರುವ ನಾಗರಾಜ್ ಅವರು ಇವರಿಗೆ ಜಾಗವನ್ನು ನೋಂದಣಿ ಮಾಡಿ ಸಹಕರಿಸಿದ್ದಾರೆ” ಎಂದು ವಾರಿಜಾ ಆಪಾದಿಸಿದ್ದರು. ಈ ಬಗ್ಗೆ ಜುಲೈ 2ರಂದು ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಾಗಿತ್ತು.

ಇದರ ವಿರುದ್ಧ ಸುಬ್ರಹ್ಮಣ್ಯ ಕುಮಾರ್ ಅಗರ್ತ ಅವರು ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಪ್ರೀತಿ ಕೆ.ಪಿ. ಅವರು 2 ಸಾಕ್ಷಿದಾರರು ಮತ್ತು 1 ಲಕ್ಷ ರೂಪಾಯಿ ಬಾಂಡ್ ಮೇಲೆ ಆರೋಪಿತ ವಕೀಲ
ಸುಬ್ರಹ್ಮಣ್ಯ ಕುಮಾರ್ ಅಗರ್ತರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ. ಮತ್ತು 10 ದಿನಗಳ ಒಳಗಾಗಿ ಠಾಣೆಗೆ ಹಾಜರಾಗತಕ್ಕದ್ದು ಹಾಗೂ ತನಿಖೆಗೆ ಸಹಕಾರ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here