ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರಿಂದ ಅಂತರ್‌ರಾಜ್ಯ ಸರ ಕಳ್ಳತನದ ಇಬ್ಬರು ಆರೋಪಿಗಳ ಬಂಧನ

0

  • ಎರಡು ಮೋಟಾರು ಸೈಕಲ್, ಚಿನ್ನಾಭರಣ ವಶ

ಪುತ್ತೂರು: ಸಂಪ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂ.7ರಂದು ನಿಡ್ಪಳ್ಳಿ ಗ್ರಾಮದ ಚೂರಿಪದವು ನಿವಾಸಿ ರತ್ನಾ ಎಂಬವರ ಕುತ್ತಿಗೆಯಿಂದ ಕೋನಡ್ಕ ಎಂಬಲ್ಲಿ ಚಿನ್ನದ ಕರಿಮಣಿ ಸರ ಎಳೆದು ಬೈಕ್‌ನಲ್ಲಿ ಪರಾರಿಯಾಗಿದ್ದ ಕಳ್ಳರಿಬ್ಬರನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡು ಕುಂಬ್ಳೆ ಬಂಬ್ರಾಣ ಲಕ್ಷಂವೀಡು ಕಾಲೋನಿ ದಿ.ಬಡುವ ಕುಂಞಿ ಅವರ ಪುತ್ರ ಫಝಲ್ ಎ ಯಾನೆ ಫೈಜಲ್ ಯಾನೆ ಪಗ್ಗು (37ವ) ಮತ್ತು ಕಾಸರಗೋಡು ಸೀತಾಂಗೋಳಿ ರಾಜೀವ ಗಾಂಧಿ ಕಾಲೋನಿ ದಿ.ಸೈಯದ್ ಜಮಾಲ್ ಅವರ ಪುತ್ರ ಅಬ್ದುಲ್ ನಿಝಾರ್(19ವ)ರವರು ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ ಮಹಿಳೆಯ ಕತ್ತಿನಿಂದ ಎಗ್ಗರಿಸಿದ ರೂ. 50ಸಾವಿರ ಮೌಲ್ಯದ ಚಿನ್ನದ ತುಂಡಾದ ಸರ ಮತ್ತು ಬದಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ ಎಫ್ ಝಡ್ ಬೈಕ್ ಹಾಗೂ ಕೃತ್ಯಕ್ಕೆ ಎಸಗಿದ ರಾಯಲ್ ಎನ್‌ಫೀಲ್ಡ್ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ.

ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳು:
ಆರೋಪಿಗಳನ್ನು ಹೆಚ್ಚಿನ ವಿಚಾರಣೆ ಮಾಡಿದಾಗ ಆರೋಪಿಗಳು ವಿವಿಧ ಠಾಣಾ ವ್ಯಾಪ್ತಿಯ ಕಳವು ಪ್ರಕರಣದಲ್ಲಿ ಬಾಗಿಯಾಗಿರುವುದು ಬೆಳಕಿಗೆ ಬಂದಿದೆ. ವಿಟ್ಲ ಠಾಣಾ ವ್ಯಾಪ್ತಿಯ ಕುದ್ದುಪದವು ಜಗನ್ನಾಥ ಶೆಟ್ಟಿಯವರ ಮಾಲಕತ್ವದ ಪೆಟ್ರೋಲ್ ಪಂಪ್‌ನಿಂದ ಕಳ್ಳತನ, ವಿಟ್ಲ ಠಾಣಾ ಕಾಶಿಮಠದಲ್ಲಿ ಗೂಡ್ಸ್ ಟೆಂಪೊ ಕಳ್ಳತನ, ಪುತ್ತೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬೈಪಾಸ್ ರಸ್ತೆಯಲ್ಲಿ ಮಹಿಳೆಯ ಸರ ಕಳ್ಳತನ ನಡೆಸಿರುವುದನ್ನು ಒಪ್ಪಿಕೊಂಡಿದ್ಧಾರೆ. ಆರೋಪಿಗಳಿಬ್ಬರ ಪೈಕಿ ಫೈಜಲ್ ಎಂಬವರ ವಿರುದ್ಧ ಮಂಗಳೂರು ನಗರ ಉಳ್ಳಾಲ ಮಂಜೇಶ್ವರ, ಕುಂಬ್ಳೆ, ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ಕಳ್ಳತನ ಪ್ರಕರಣ ದಾಖಲಾಗಿದೆ. ಎಸ್ಪಿ ಋಷಿಕೇಶ್ ಸೋನಾವಣೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಡಾ. ಗಾನಾ ಪಿ ಕುಮಾರ್ ಅವರ ಮತ್ತು ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಅವರ ನೇತೃತ್ವದಲ್ಲಿ ಸಂಪ್ಯ ಎಸ್.ಐ ಉದಯರವಿ ಎಂ, ವೈ ಹಾಗು ರಾಮಕೃಷ್ಣ ಜಿ.ಎಇ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯ ವಿಶೇಷ ತಂಡದ ಸಿಬ್ಬಂದಿಗಳಾದ ದೇವರಾಜ್, ಧರ್ಣಪ್ಪ ಗೌಡ, ಅದ್ರಾಮ್, ಸತೀಶ್, ಪ್ರವೀಣ್ ರೈ, ವರ್ಗಿಸ್, ಜಗದೀಶ್, ಹರ್ಷಿತ್, ಚಾಲಕ ಸದ್ದಾಂ ಮುಲ್ಲಾ ರವರು ಮತ್ತು ಜಿಲ್ಲಾ ಗಣಕಯಂತ್ರದ ಸಿಬ್ಬಂದಿಗಳಾದ ಸಂಪತ್, ದಿವಾಕರ್‌ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here