ಕಲಾಂ ಸರ್ -ನಿಮ್ಮ ಸ್ಮರಣಿಯೊಂದೇ ಸಾಲದೆ?

0

2015ರ ಜುಲಾಯಿ ೨೭ರಂದು ಶಿಲ್ಲಾಂಗ್‌ನಲ್ಲಿ ವಿದ್ಯಾರ್ಥಿ ಸಮುದಾಯವನ್ನು ಉದ್ದೇಶಿಸಿ ಮಾತಾನಾಡುತ್ತಾ ನಮ್ಮ ದೇಶ ಕಂಡ ಸರಳ, ಆದರ್ಶ ಹಾಗೂ ರಾಷ್ಟ್ರ ಪ್ರೇಮಗಳ ಪ್ರತೀಕವಾಗಿದ್ದ ಜನ ಸಾಮಾನ್ಯರ ನೆಚ್ಚಿನ ರಾಷ್ಟ್ರಪತಿ ಆಗಿದ್ದ ಭಾರತರತ್ನ ಡಾ. ಏ.ಪಿ.ಜೆ ಅಬ್ದುಲ್ ಕಲಾಂ ನಿಧನರಾಗಿ ಇಂದಿಗೆ 6 ವರ್ಷಗಳು ಸಂದುಹೋಗಿದೆ. ಡಾ. ರಾಜೇಂದ್ರ ಪ್ರಸಾದ್, ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಬಳಿಕ ಮತ್ತೊಮ್ಮೆ ಒರ್ವ ಸಂತನನ್ನು ರಾಷ್ಟ್ರಪತಿ ಭವನದಲ್ಲಿ ಮಹಾಜನತೆ ಕಂಡದ್ದು ಸರ್ವವಿಧಿತವಾದ ವಿಚಾರ. ಮೂಲತ: ರಾಮೇಶ್ವರದ ತೀರಾ ಸಾಮಾನ್ಯ ಬಾಲಕನಾಗಿ ಬೆಳೆದು ಪೈಲಟ್ ಆಗಬೇಕೆಂಬ ಕನಸುಕಂಡು ಗುರಿ ಸಾಧನೆಯ ಛಲದ ಅಗ್ನಿಯನ್ನು ಹೃದಯದಲ್ಲಿ ಬೆಳೆಗಿಸಿ ವೈಮಾನಿಕ ಇಂಜಿನಿಯರಿಂಗ್ ಶಿಕ್ಷಣ ಮುಗಿಸಿ, ತದನಂತರ ಕಾರಣಾಂತರಗಳಿಂದ ಬಾಹ್ಯಾಂತರಿಕ್ಷ ಹಾಗೂ ರಕ್ಷಣಾ ಸಂಶೋಧನೆಯಲ್ಲಿ ತೊಡಗಿಸುತ್ತಾ ಗಣನಿಯವಾದ ಕೊಡುಗೆಯನ್ನು ನೀಡಿ ಕೊನೆಗೆ ಅಲಂಕರಿಸಿದ ರಾಷ್ಟ್ರಪತಿ ಹುದ್ದೆಯನ್ನು ಎಲ್ಲಾ ಭಾರತೀಯರು ಗೌರವಿಸುವಂಥಹ ಮಟ್ಟವನ್ನು ತಂದುಕೊಟ್ಟ ಡಾ.ಕಲಾಂ ಅಪ್ಪಟ ದೇಶಪ್ರೇಮ ಹಾಗೂ ಸರಳತೆಗೆ ಎಂಬ ವಿಚಾರಗಳಿಗೆ ಆದರ್ಶ ಪ್ರಾಯವಾಗಿ ಮೂಡಿಬಂದರು. ಸಾಮಾಜಿಕ ರಾಜಕೀಯ ಹಾಗೂ ನಾಗರಿಕ ಆಡಳಿತ ವ್ಯವಸ್ಥೆ ಮುಂತಾದ ಕ್ಷೇತ್ರಗಳಲ್ಲಿ ಭಾರತ ಸ್ವಾವಲಂಬನೆಯನ್ನು ಪಡೆದರೂ ವೈಜ್ಞಾನಿಕ ಹಾಗೂ ತಾಂತ್ರಿಕ ಬೆಳವಣಿಗೆಯನ್ನು ಸ್ವದೇಶೀಯವಾಗಿ ಸಾಧಿಸಲು ಅಗತ್ಯ ಇದೆ ಎಂಬುದಾಗಿ ಸಾರಿ ಈ ನಿಟ್ಟಿನಲ್ಲಿ ಮೂಲಭೂತ ವ್ಯವಸ್ಥೆಗಳನ್ನು ಬೆಳೆಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದರು. ಜೊತೆಯಲ್ಲಿ ಸ್ವಂತ ಪರಿಶ್ರಮ ಹಾಗೂ ಪ್ರತಿಭೆಗಳಲ್ಲಿ ಎಲ್ಲಾ ಭಾರತೀಯರಿಗೆ ಅಚಲ ವಿಶ್ವಾಸ ಹಾಗೂ ನಂಬಿಕೆ ಮೂಡಿಸುತ್ತಾ ಮುಂದೊಂದು ದಿನ ಭಾರತ ದೇಶ ಖಂಡಿತಾವಾಗಿಯೂ ಅಭಿವೃದ್ದಿ ಪಡೆದ ಶಕ್ತಿಶಾಲಿರಾಷ್ಟ್ರವಾಗಿ ಮಾರ್ಪಾಡಾಗುತ್ತದೆ ಎಂಬ ಘೋಷಣೆಯನ್ನು ಮಾಡಿದರು. ನಾವು ಭಾರತೀಯರು ಈ ಜಗತ್ತಿನಲ್ಲಿ ಯಾರಿಗೂ ಕಡಿಮೆ ಇಲ್ಲ ಎಂಬ ಆತ್ಮವಿಶ್ವಾಸ ಎಲ್ಲರ ಹೃದಯದಲ್ಲಿ ಬೆಳೆಗಿಸುವಲ್ಲಿ ಡಾ.ಕಲಾಂ ಸಫಲರಾದರು. ತನ್ನ ಜೀವನದಲ್ಲಿ ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸುತ್ತಾ ತೀರಾ ಸರಳತೆ, ನಿರಾಡಂಬರ ಜೀವನವನ್ನು ವ್ರತದಂತೆ ಪಾಲಿಸುತ್ತಾ ಅದಮ್ಯ ಮಾನವೀಯತೆಯನ್ನು ಆಚರಿಸಿ ಒರ್ವ ಸಂತನಂತೆ ಬಾಳಿ ಎಲ್ಲರ ಹೃದಯ ಸಾಮ್ರಾಟರಾಗಿ ಉಳಿದಿದ್ದಾರೆ.


ಇಸ್ರೋ ಹಾಗೂ ಡಿ.ಆರ್.ಡಿ.ಓ ಮುಂತಾದ ವೈಜ್ಞಾನಿಕ ಸಂಶೋಧನಾ ಕ್ಷೇತ್ರಗಳಲ್ಲಿ ದುಡಿಯುವ ವೇಳೆ ನಾಯಕತ್ವ, ಸಾಂಘಿಕ ಪರಿಶ್ರಮ ಹಾಗೂ ತಂಡಕ್ಕೆ ಅಪಮಿರಿತವಾದ ಪ್ರೋತ್ಸಾಹ ಮುಂತಾದ ಜ್ಞಾನವನ್ನು ಪಡೆದು ಅದ್ವಿತೀಯವಾದ ಸಾಧನೆ ಮಾಡಿದ ಕಲಾಂ ಸರ್ ತನ್ನ ಸರಳತೆ, ಸ್ನೇಹ ಹಾಗೂ ಸಕರಾತ್ಮ ನಿಲುವುಗಳಿಂದ ದೇಶದ ರಕ್ಷಣಾ ಕ್ಷೇತ್ರದ ಸ್ವಾವಲಂಬನೆಯ ಪರಿಶ್ರಮಗಳಿಗೆ ಹೊಸ ಆಯಾಮವನ್ನು ತಂದುಕೊಟ್ಟರು. ನಿಜ ಜೀವನದಲ್ಲಿ ಒರ್ವ ಬ್ಯಾಚುರಲ್ ಆಗಿ ಬಾಳಿದ ಅವರು ಎಂದಿಗೂ ಸಹೋದ್ಯೋಗಿಗಳ ಕುಟುಂಬ ಜೀವನದಲ್ಲಿ ನೆಮ್ಮದಿ ಹಾಗೂ ಶಾಂತಿ ವಿಚಾರಗಳಿಗೆ ಬಹು ಪ್ರಾಮುಖ್ಯತೆ ಕೊಟ್ಟಿದ್ದಾರೆ ಎಂಬುದು ಹಲವಾರು ವಿಜ್ಞಾನ ಸಹೋದ್ಯೋಗಿಗಳ ಒಮ್ಮತದ ಅಭಿಪ್ರಾಯ ತನ್ನ ನೆಚ್ಚಿನ ಒಡನಾಡಿಗಳಲ್ಲಿ ಪ್ರೀತಿ ಹಾಗೂ ಸ್ನೇಹ ಪರತೆಗಳನ್ನು ರಾಷ್ಟ್ರಪತಿ ಆಗಿರುವಾಗಲೂ ತೋರಿಸುತ್ತಾ ಬಂದು ಎಲ್ಲರಿಗೂ ತಾನು ಲಭ್ಯ ಎಂಬ ಸರಳತೆ ಮತ್ತು ಮಾನವೀಯ ಗುಣಗಳನ್ನು ತೋರಿಸಿಕೊಟ್ಟಿದ್ದಾರೆ. ಅವರ ಹೈದರಾಬಾದ್ ದಿನಗಳಲ್ಲಿ ವಿಜ್ಞಾನಿ ಸಹೋದ್ಯೋಗಿಗಳಿಗೆ ಎರಡು ವಾಕ್ಯಗಳನ್ನು ಉದ್ದರಿಸುತ್ತಾ ಇದ್ದದ್ದನ್ನು ಈಗಲೂ ಆ ಹಿರಿಯರು ನೆನಪಿಸಿಕೊಳ್ಳುತ್ತಾರೆ. ‘ಫನ್ನಿಗಯ್ಸ್’ ಹಾಗೂ ‘ಫೆಂಟಾಸ್ಟಿಕ್ ಫೇಲೊ’ ಕಲಾಂ ಅವರ ಫೇಲೋ ಎಂಬ ಎರಡು ಅದ್ಬುತ ವಾಕ್ಯಗಳು ಅವಿಸ್ಮರಣಿಯಾವಾಗಿ ಅವರ ಒಡನಾಡಿಗಳ ಬದುಕಿನಲ್ಲಿ ಉಳಿದು ಹೋಗಿದೆ. ಪ್ರಥಮ ಉಡಗ್ರಹ ಉಡ್ಡಯನದ ಬಳಿಕ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರೆಲ್ಲಾ ವೇದಿಕೆಯ ಹಿಂಬಂದಿಯಲ್ಲಿ ದೊಡ್ಡದಾಗಿ ಬರೆಸಿದ FUNNY GUYS !!! They have done it !!! we will repeat againಎಂಬ ಬ್ಯಾನರ್ ಬಗ್ಗೆ ಇದೀಗ ಬೆಂಗಳೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿರುವ ರಕ್ಷಣ ಸಂಶೋಧನಾ ಪ್ರಯೋಗಾಲಯ ನಿರ್ದೇಶಕರಾಗಿದ್ದ ಲೆಫ್ಟಿನೆಂಟ್ ಜನರಲ್ ನಿವೃತ್ತ ಸುಂದರಮ್ ನೆನಪಿಸಿಕೊಳ್ಳುತ್ತಾರೆ. ಯಾರದಾದರೂ ಕಾರ್ಯನಿರ್ವಹಣೆ ಹಾಗೂ ಶ್ರದ್ದೆ ಕಡಿಮೆ ಕಂಡುಬಂದಲ್ಲಿ

ಕಲಾಂ ಹೇಳುತ್ತಿದ್ದದು ‘ಫೆಂಟಾಸ್ಟಿಕ್ ಫೇಲೊ’. ಕೆಲವೊಮ್ಮೆ ಕೇಳಿಸಿಕೊಂಡವರು ಈ ಮಾತುಗಳನ್ನು ಪ್ರಶಂಸೆ ಎಂದು ತಿಳಿದು ಕೊನೆಗೆ ಬೇಸ್ತು ಬಿದ್ದದ್ದು ಇದೆ.
ಡಾ. ಕಲಾಂ ಅವರು ಹೈದರಾಬಾದ್ ಕ್ಷಿಪಣಿ ಕೇಂದ್ರದ ಮುಖ್ಯಸ್ಥರಾಗಿದ್ದಾಗ, ಡಿ.ಆರ್.ಡಿ.ಓ ಸಂಸ್ಥೆಯ ಮಹಾನಿರ್ದೇಶಕರಾಗಿದ್ದ ‘ಬಾಸ್’ ಡಾ.ಅರುಣಾಚಲಂ ಕಲಾಂ ಅವರ ಸಂಗೀತ ಪ್ರಿಯತೆ ಮತ್ತು ದಕ್ಷಿಣ ಭಾರತದ ಅಡುಗೆಯ ಸ್ವಾದಿಷ್ಟತನಗಳ ಬಗ್ಗೆ ಮೆಚ್ಚುಗೆ ತೋರುತ್ತಾಬಂದಿದ್ದ ದಿನಗಳನ್ನು ಪುಸ್ತಕ ಒಂದರಲ್ಲಿ ನೆನೆಪಿಸಿಕೊಳ್ಳುತ್ತಾರೆ. ಡಾ. ಅರುಣಾಚಲಂ 10ವರ್ಷಗಳ ಕಾಲ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ ಈ ಹಿರಿಯ ವಿಜ್ಞಾನಿ ಇದೀಗ ಬೆಂಗಳೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.

ತಾವು ಸೇವೆ ಸಲ್ಲಿಸುತ್ತದ್ದ ಸಂಸ್ಥೆಗಳಲ್ಲಿ ನಾಯಕನಾಗಿ ಕಾರ್ಯನಿರ್ವಹಿಸುವ ವೇಳೆ ಹಳವು ಮಹಾಯೋಜನೆಗಳನ್ನು ಸರಕಾರದ ಕೆಂಪುಪಟ್ಟಿಯ ಕಕ್ಷೆಯಲ್ಲಿ ಯಶಸ್ವಿನತ್ತ ಕೊಂಡೊಯ್ಯೊವ ವೇಳೆ ಸ್ವತ: ಅಪಾರ ಅನುಭವ ಪಡೆದು ಸಂಸ್ಥೆಗಳ ನಿರ್ವಹಣೆಯ ವೇಳೆ ಮಾನವೀಯ ಗುಣಧರ್ಮಗಳು ಯಾವತ್ತೂ ಹಿರಿದು ಎಂಬುದನ್ನು ತಿಳಿದುಕೊಂಡರು. ಸೋಲುಗಳನ್ನು ಸ್ವೀಕರಿಸಿ ತಂಡದ ಸದಸ್ಯರುಗಳ ಕಾರ್ಯಶಕ್ತಿಯನ್ನು ಪರಿಗಣಿಸಿ ಕಾರ್ಯನಿರ್ವಹಣಾ ಜವಾಬ್ದಾರಿಗಳನ್ನು ಮುಕ್ತವಾಗಿ ನೀಡಿ ಹುರಿದುಂಬಿಸುತ್ತಾ, ಪ್ರತಿಯೊಂದು ಕಾರ್ಯಕರ್ತರನ್ನು ಪ್ರಾಮುಖ್ಯತೆಭಾವದಿಂದ ಕಂಡು ಮುಂದೆ ಅವರ ಸ್ವಯತ್ನಗಳೆಲ್ಲಾ ಯಶಸ್ಸುಕಂಡಾಗ, ಇಡೀ ತಂಡಕ್ಕೇ ಅಭಿನಂದನೆ ಹಾಗೂ ಕೀರ್ತಿಯ ಸಾಧನೆಯನ್ನು ನೀಡಿದ ಡಾ.ಕಲಾಂ ದೇಶದ ವಿಜ್ಞಾನಿಗಳನ್ನು ಬೆಳೆಸಿದರು. ಅವರ ಸರಳತೆ, ಆತ್ಮೀಯತೆಯ ಹಾಗೂ ಸ್ನೇಹಪರತೆಯ ವ್ಯವಹಾರಗಳಿಂದ ಎಲ್ಲರೂ ಬಯಸುವ ‘ಬಾಸ್’ ಆಗಿಬಿಟ್ಟರು. ಇನ್ನು ಸಂಕಷ್ಟ/ಸಮಸ್ಯೆಗಳ ವಿಚಾರ ಬಂದರೆ ಅವರು ತನ್ನ ತಂಡದ ಸದಸ್ಯರ ವೈಯುಕ್ತಿ ಬೇಗುದಿಗಳಿಗೆ ಕಿವಿಯಾಗಿಸಿ ಸದಾ ನೆರವಿನ ಹಸ್ತವನ್ನು ನೀಡುತ್ತಿದ್ದುದ್ದನ್ನು ಹಲವಾರು ವಿಜ್ಞಾನಿಗಳು ಇಂದಿಗೂ ಸ್ಮರಿಸುತ್ತಾರೆ. ಅಷ್ಟೋಂದು ದೊಡ್ಡ ಸ್ಥಾನದಲ್ಲಿದ್ದರೂ ೨ ಕೋಣೆಯ ಡಿ.ಆರ್.ಡಿ.ಓ ಹಾಸ್ಟೆಲ್‌ಲ್ಲಿ ಸರಳ ಜೀವನ, ತೀರಾ ಅವಶ್ಯಕ ಸೌಲಭ್ಯಗಳನ್ನು ಮಾತ್ರ ಬಳಸಿ ಆದರ್ಶಪ್ರಾಯರಾದ ಇಂತಹ ವ್ಯಕ್ತಿಗಳು ಬಹಳ ಕಡಿಮೆ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ.

ಮೂಲಭೂತ ಸೌಲಭ್ಯಗಳನ್ನು ಜೊತೆ ಜೊತೆಯಲ್ಲಿ ಸಂಶೋಧನೆ ಹಾಗೂ ಅಭಿವೃದ್ದಿ ಯೋಜನೆಗಳನ್ನು ಅನುಷ್ಟಾನಕ್ಕೆ ತರುವಾಗ ಬೆಳೆಸುತ್ತಾ ಮುಂದೆ ಈ ವೈಜ್ಞಾನಿಕ ಸಲಕರಣೆ/ಅಸ್ತ್ರಗಳು ನಮ್ಮ ಸಶಸ್ತ್ರ ಪಡೆಯ ಪರೀಕ್ಷೆಗಳೊಂದಿಗೆ ಸಮನ್ವಯತೆಯಿಂದ ಸಾಗಿ ನಮ್ಮದೆ ಸಾರ್ವಜನಿಕ ಉದ್ದಿಮೆ ಕೇಂದ್ರಗಳಲ್ಲಿ ಬಹು ಸಂಖ್ಯೆಯಲ್ಲಿ ಉತ್ಪಾದಿಸಿ ದೇಶಕ್ಕೆ ಹಲವು ಕೋಟಿ ಡಾಲರ್‌ಗಳನ್ನು ಉಳಿಸಿ ಸ್ವದೇಶಿ ಪರಿಕಲ್ಪನೆಗಳನ್ನು ಸಾಕಾರಗೊಳಸಿದ ಖ್ಯಾತಿ ಇವರದು.
ತನ್ನ ವೈಜ್ಞಾನಿಕ ಹಾಗೂ ತಂತ್ರಜ್ಞಾನದ ಈ ಮಹಾಯಾತ್ರೆಯಲ್ಲಿ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಅಲ್ಲಿನ ವಿದ್ಯಾರ್ಥಿಗಳನ್ನು ತೊಡಗಿಸುತ್ತಾ ಅಪಾರ ಸಂಖ್ಯೆಯಯುವಜನರನ್ನು ದೇಶಕ್ಕಾಗಿ ಕಾರ್ಯ ಮಾಡುವ ಪ್ರವೃತ್ತಿಗೆ ಆಕರ್ಷಿಸುವ ದೊಡ್ಡ ಸಾಧನೆ ಮಾಡಿದರು.

ಮುಂದೊಂದುದಿನ ಡಾ.ಕಲಾಂ ರಾಷ್ಟ್ರಪತಿಯಾಗಿ ಕಳೆದ ಅವರ ೫ ವರ್ಷದ ಅವಧಿ ಕೂಡಾ ಅವರ ಸರಳತೆಗೆ ಹಾಗೂ ಮಾನವೀಯ ಗುಣ ಮೌಲ್ಯಗಳಿಗೆ ಉಲ್ಲೇಖಾರ್ಹವಾಗಿದೆ ಎಂಬುದು ಸತ್ಯ. ೩೫೦ ಕೋಣೆಯ ಭವ್ಯ ಬಂಗಲೆಯಲ್ಲಿ ಕೇವಲ ೨ ಕೋಣೆಗಳಲ್ಲಿ ತೀರಾ ಸರಳವಾಗಿ ಮನುಷ್ಯನಾಗಿ ಬಾಳಿದ ಈ ‘ಸಂತ’ ಬ್ರಿಟಿಷ್ ಪರಂಪರೆಯ ಚೌಕಟ್ಟಿನಿಂದ ಹೊರಬಂದು, ದೊಡ್ಡ ಬದಲಾವಣೆಯ ಪ್ರಾರಂಭಕ್ಕೆ ನಾಂದಿ ಹಾಡಿದರು. ಮೊದಲ ದಿನವೇ ತನ್ನ ಪಾದರಕ್ಷೆಗಳನ್ನು ಸ್ವಚ್ಚಗೊಳಿಸುವ ನಿರ್ವಹಣೆ ಮಾಡುವ ವ್ಯಕ್ತಿಗೆ ಈ ಕೆಲಸವನ್ನು ಬಿಟ್ಟು ಬೇರೆ ಕಾರ್ಯ ಮಾಡುವಂತೆ ನವಿರಾಗಿ ಹೇಳಿ ತನ್ನ ಸರಳತೆಯನ್ನು ಮೆರೆದರು. ಮೊಗಲ್ ಗಾರ್ಡ್‌ನ್ ಹಾಗೂ ಭವನದ ಕೆಲವೊಂದು ಪ್ರದೇಶಗಳನ್ನು ವಾರದ ನಿರ್ದಿಷ್ಟ ದಿನಗಳಿಗೆ ಜನತಾ ಪ್ರಭುಗಳಿಗೆ ತೆರೆದಿಟ್ಟರು. ಪಂಚಾಯತ್ ಸದಸ್ಯರು, ಅಂಚೆಯ ಅಣ್ಣ, ಪ್ರಾರ್ಥಮಿಕ ಶಾಲೆಯ ಶಿಕ್ಷಕರು ಹೀಗೆ ಜನ ಮಾನ್ಯರುಗಳನ್ನು ಆಮಂತ್ರಿಸಿ ಆದರಿಸಿ ಸತ್ಕಾರ ನೀಡಿದ ಈ ಮಹಾನುಭವ ದೇಶದ ಕಲಾವಿದರು, ಪ್ರತಿಭಾವಂತರು, ಆಟಗಾರರು ಹೀಗೆ ಎಲ್ಲರನ್ನೂ ಭೇಟಿಯಾದರು. ಯುವ ಜನರು ಹಾಗೂ ಮಕ್ಕಳ ಸಮೂದಾಯವನ್ನು ಬಹುದಾಗಿ ಆಕರ್ಷಿಸುತ್ತಾ ಅಪಾರ ಜನಪ್ರಿಯತೆ ಪಡೆದರೂ ತಾವು ಸೇವೆಸಲ್ಲಿಸಿದ ವೈಜ್ಞಾನಿಕ ಮತ್ತು ತಾಂತ್ರಿಕ ಕೇಂದ್ರಗಳ ಸಾಧನೆಗಳನ್ನು ಕಾಲಕಾಲಕ್ಕೆ ಸಂಪರ್ಕಿಸುತ್ತ ತಮ್ಮ ಆಸಕ್ತಿಯನ್ನು ಉಳಿಸಿದರು. ರಾಷ್ಟ್ರಪತಿ ಭವನದ ನವೀಕರಣ ಮಾಡಿ ವಿದೇಶಿ ಗಣ್ಯರುಗಳಿಗೆ ಅಲ್ಲಿಯೆ ವಾಸ್ತವ ಮಾಡುವ ವ್ಯವಸ್ತೆಗಳ ನಿರ್ಮಾಣ, ಸರ್ವಧರ್ಮಗಳ ಶಾಂತಿಯ ತೋಟ ಒಂದೇ ಎರಡೇ ಎಂದು ಹೀಗೆ ಸಾಗುತ್ತದೆ. ಅವರು ಮಾಡಿದ ಬದಲಾವಣೆಗಳ ಪಟ್ಟಿ. ದೇಶವಿದೇಶಗಳ ಸಂದರ್ಶನ ಮಾಡಿದಾಗ ಸಾದಿಸಿದ ನಡೆಸಿದ ಭಾಂಧವ್ಯಾ ವರ್ಧನೆಯಿಂದಾಗಿ ಜಗತ್ತಿನಲ್ಲಿ ಭಾರತದ ಬಗ್ಗೆ ಹೊಸ ಭರವಸೆಯ ಅಭಿಪ್ರಾಯದ ಅಧ್ಯಾಯ ಪ್ರಾರಂಭವಾಗಿ ಎನ್.ಆರ್.ಐ (ವಿದೇಶದಲ್ಲಿ ನೆಲೆಸಿರುವ ಸ್ವದೇಶಿ ನಾಗರಿಕರು)ಗಳಿಗಂತೂ ಸಂತಸಕ್ಕೆ ಎಣೆಯೇ ಇಲ್ಲ.

ಕಲಾಂಸರ್ ಡಿ.ಆರ್.ಡಿ.ಓದಲ್ಲಿ ಉನ್ನತ ಸ್ಥಾನ ಹೊಂದಿದಾಗಲೂ ಕಳೆದ ಜೀವನ ಧರ್ಮ ಬಹು ಅಪ್ಯಾಯಮಾನಗಿದೆ. ‘ಭಾರತರತ್ನ’ ಪ್ರಶಸ್ತಿ ಪಡೆದಾಗ ಯಾವುದೇ ಅಭಿನಂದನೆ/ಸಮಾರಂಭ/ಸತ್ಕಾರಗಳನ್ನು ನಡೆಸದಿರಿ ಎಂದು ಎಚ್ಚರಿಸಿ ತಮ್ಮನ್ನು ವೃಥಾ ಕಾಣಲು ರೈಲ್ವೆ ಹಾಗೂ ವಿಮಾನ ನಿಲ್ದಾಣಗಳಿಗೆ ಬರದಿರಿ ಎಂಬ ಕಟ್ಟಪ್ಪಣೆ ಮಾಡಿದ್ದು ನಿಜವಾಗಿಯೂ ಅವರ ಸರಳತೆಗೆ ಕನ್ನಡಿ ಹಿಡಿಯುತ್ತದೆ ಹಾಗೂ ಇದೇ ನಿಲುವನ್ನು ರಾಷ್ಟ್ರಪತಿಯಾಗಿದ್ದಾಗಲೂ ಪರಿಪಾಲಿಸಿದರು. ಅವರು ಕಳುಹಿಸಿದ ವೈಯಕ್ತಿಕ ನೆಲೆಯ ಪತ್ರಗಳಲ್ಲಿ ತೀರಾ ಸರಳತೆಯು ಕಾಣುತ್ತಿತ್ತು. ಅವರ ಲೆಟರ್ ಹೆಡ್‌ಗಳಲ್ಲಿ ಎಲ್ಲಿಯೂ ರಾಷ್ಟ್ರಪತಿಯಾಗಿರುವ ಸಂಕೇತ ಕಂಡುಬಾರದೆ ತೀರಾ ಸಾಮಾನ್ಯ ಅಂಚೆ ಕವರ್‌ಗಳಲ್ಲಿ ಅಧಿಕಾರದ ಸುಳಿವು ನೀಡದಂಥಹಾ ಸರಳತೆ ಎಲ್ಲರ ಗಮನ ಸೆಳೆಯುತ್ತಿತ್ತು. ಅವರ ‘ವಿಷನ್ ಇಂಡಿಯಾ ೨೦೨೦’ ಹಾಗೂ ಅಪಾರ ವಿಶ್ವಾಸನೀಯ PURA (ಪುರ) ಎಂಬ ವಿಚಾರಧಾರೆಗಳು ಬಹು ಜನರ ಪ್ರಶಂಸೆ ಪಡೆದದ್ದು ಏನೂ ಸಣ್ಣ ಸಾಧನೆ ಅಲ್ಲವೇ ಅಲ್ಲ. ಪುರ (PURA) ಅಂದರೆ ನಗರದ ಸೌಲಭ್ಯಗಳ ಲಭ್ಯತೆಯನ್ನು ಗ್ರಾಮಿಣ ಪ್ರದೇಶಗಳಲ್ಲೂ ನಡೆಸಲು ಇರುವ ಅವರ ಚಿಂತನೆಯ ಅನುಷ್ಠಾನಕ್ಕಾಗಿ ತಮ್ಮ ವೈಯಕ್ತಿಕ ಪಾಲಿನ ಧನವನ್ನು ತೊಡಗಿಸಿ ರಾಜ್ಯ ಸರ್ಕಾರಗಳಿಗೆ ಮಾದರಿ ಹೆಜ್ಜೆಗಳನ್ನು ಹಾಕಿ ಕೊಟ್ಟರು.

ಅವರು ಕಂಡುಕೊಂಡ ಇಂಥಹಾ ದೇಶಪ್ರೇಮ ಹಾಗೂ ರಾಷ್ಠ್ರೀಯ ಚಿಂತನೆಯ ಯೋಜನೆಗಳು ಮುಂದುವರೆಸಲು ಕೈಜೊಡಿಸಲು ಯಾವುದೇ ರಾಜಾಕೀಯ ನಾಯಕರುಗಳು ಮುಂದೆ ಬರಲಿಲ್ಲ ಎಂಬುದು ವಿಷಾದನಿಂii ವಿಚಾರವೇ ಸರಿ ತಮ್ಮ ವಿಮಾನಯಾನದ ಧೀರ್ಘಾ ಅವಧಿಗಳಲ್ಲಿ ಕೂಡ ದೇಶದ ಕಾರ್ಯಗಳ ಬಗ್ಗೆ ಗಮನನೀಡುತ್ತಿದ್ದದದು ಅವರ ಸಮಯ ಹಾಗೂ ಕರ್ತವ್ಯಪ್ರಜ್ಞೆಗಳಿಗೆ ಸಾಕ್ಷಿಯಾಗಿದೆ. ಇಸ್ರೊ ಹಾಗೂ ಡಿ.ಆರ್.ಡಿ.ಓ. ಸಂಸ್ಥೆಗಳಲ್ಲಿ ಗಣನಿಯವಾದ ಸೇವೆ ಸಲ್ಲಿಸಿದ ವೇಳೆ ಹಲವಾರು ಸ್ವದೇಶಿಯ ಪ್ರಯತ್ನಗಳು ಫಲಪ್ರದವಾಗಿ ‘ಮೇಕ್ ಇನ್ ಇಂಡಿಯಾ’ ಆಂದೋಲನಕ್ಕೆ ನಾಂದಿ ಹಾಡಿದವು. ಅವರ ಅವಧಿಯ ಬಳಿಕವೂ ಈ ಪರಿಕಲ್ಪನೆಗಳು ಒಂದೊಂದಾಗಿ ನಿಜರೂಪ ತಾಳಿ ದೇಶಕ್ಕೆ ಹಲವಾರು ಕೋಟಿ ರೂಪಾಯಿಗಳಷ್ಟು ವಿದೇಶಿ ವಿನಿಮಯವನ್ನು ಉಳಿಸಿದ್ದಲ್ಲದೆ ಜೊತೆಯಲ್ಲಿಯೆ ಈ ದೆಸೆಯಲ್ಲಿ ಮುಂದೆ ಹೋಗಲು ಸಾಕಷ್ಟು ಮೂಲಭೂತ ಸೌಲಭ್ಯಗಳ ಸ್ತಾಪನೆಗಳಿಗೂ ಅವಕಾಶ ನೀಡಿದವು. ತಮ್ಮ ಸಾರ್ವಜನಿಕ ಬೇಟಿ ಹಾಗೂ ಪ್ರವಾಸಗಳ ವೇಳೆ ಯಾವತ್ತೂ ಮಕ್ಕಳಿಗೆ, ಯುವಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆಧ್ಯತೆ ನೀಡಿ ಅದಮ್ಯ ಪ್ರೀತಿ ವಿಶ್ವಾಸ ತೋರಿಸುತ್ತಾ ಉತ್ತೇಜನವನ್ನು ನೀಡುತ್ತಿದ್ದದ್ದು ಪ್ರಶಂಸನೀಯ ಕಾರ್ಯವಾಗಿದೆ. ಒರ್ವ ವಿಜ್ಞಾನಿಕ ಜಗತ್ತಿನ ಸಾಧಕ, ಯಾವುದೇ ರಾಜಾಕೀಯ ಪಕ್ಷಗಳಿಗೆ ವಾಲಿಕೊಳ್ಳದೆ ಕೊನೆಯವರೆಗೆ ಅಪ್ಪಟ್ಟ ದೇಶ ಪ್ರೇಮ ಹಾಗೂ ಅಖಂಡವಾದ ಜಾತ್ಯಾತೀಯ ಮೌಲ್ಯ ಮತ್ತು ವಿಶ್ವ ಶಾಂತಿ ಮುಂತಾದ ಸರ್ವ ಶ್ರೇಷ್ಠ ಮಾನವ ಗುಣಗಳನ್ನು ಪ್ರತಿಪಾದಿಸುತ್ತ ಬಾಳಿ ಕೋಟಿಗಟ್ಟಲೆ ಜನರ ಪ್ರೀತಿ ಹಾಗೂ ಸಂಪಾದನೆ ಮಾಡಿದ ಡಾ.ಕಲಾಂ ಅವರು ಒರ್ವ ಯುಗಪುರಷರಾಗಿ ಎಲ್ಲರ ಮನಸ್ಸಿನಲ್ಲಿ ಅಮರರಗಿದ್ದಾರೆ.

ಲೇಖಕರು: ಜಯಪ್ರಕಾಶ್ ಪುತ್ತೂರು
ಕನ್ನಡ ಲೇಖಕರು ಹಾಗೂ ದಕ್ಷಿಣ ಭಾರತ, ಪ್ರಾಂತೀಯ ಅಧ್ಯಕ್ಷರು, ಅಖಿಲಭಾರತ, ಸಾರ್ವಜನಿಕ ಸಂಪರ್ಕ ಮಂಡಳಿ
# 422/5, 22ನೇ ಮುಖ್ಯ ರಸ್ತೆ ಜೆ.ಪಿ.ನಗರ,, ಮೈಸೂರು-೮ (9845042090)

LEAVE A REPLY

Please enter your comment!
Please enter your name here