ಪುತ್ತೂರು: ಮನೆಯಿಂದ ಸಂಗ್ರಹವಾಗುವ ಕಸವನ್ನು ವಿಂಗಡಿಸಿ ಕೊಡದಿರುವುದನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೊಬ್ಬರು ಪೌರ ಕಾರ್ಮಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಸ ಸಂಗ್ರಹ ವಾಹನದ ಕೀ ಕಿತ್ತು ರಂಪಾಟ ಮಾಡಿದ ಮತ್ತು ಪೌರ ಕಾರ್ಮಿಕರು ತಮ್ಮೆಲ್ಲಾ ವಾಹನಗಳನ್ನು ವ್ಯಕ್ತಿಯ ಮನೆ ಮುಂದೆ ನಿಲ್ಲಿಸಿ ಪ್ರತಿಭಟನೆ ಮಾಡಿದ ಘಟನೆ ನೆಹರುನಗರ ಕಾರೆಕ್ಕಾಡು ಸಮೀಪ ನಡೆದಿದೆ.
ನೆಹರುನಗರ ಕಾರೆಕ್ಕಾಡು ಸಮೀಪ ಪೌರ ಕಾರ್ಮಿಕರು ವಾಹನದಲ್ಲಿ ಕಸ ಸಂಗ್ರಹ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಮನೆಯ ಕಸವನ್ನು ವಿಂಗಡಿಸದೆ ಕೊಟ್ಟಿದ್ದರು. ಕಸ ವಿಂಗಡಿಸಿ ಕೊಡುವಂತೆ ಪೌರ ಕಾರ್ಮಿಕರು ತಿಳಿಸಿದಾಗ ಮನೆಯ ವ್ಯಕ್ತಿ ಪೌರ ಕಾರ್ಮಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಸ ಸಂಗ್ರಹದ ವಾಹನದ ಕಿತ್ತು ಚರಂಡಿಗೆ ಬೀಸಾಡಿದ್ದರು. ಇದನ್ನು ಖಂಡಿಸಿ ಪೌರ ಕಾರ್ಮಿಕರು ತಮ್ಮೆಲ್ಲಾ ವಾಹನಗಳನ್ನು ಆ ವ್ಯಕ್ತಿಯ ಮನೆ ಮುಂದೆ ನಿಲ್ಲಿಸಿ ಪ್ರತಿಭಟಿಸಿದರು. ಸ್ಥಳಕ್ಕೆ ಆಗಮಿಸಿದ ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ಅವರು ಪೌರ ಕಾರ್ಮಿಕರ ದೂರನ್ನು ಆಲಿಸಿ ಮನೆ ಮಂದಿಯನ್ನು ವಿಚಾರಿಸಿ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಆಗಮಿಸಿ ವಿಚಾರದ ಕುರಿತು ಠಾಣೆಗೆ ದೂರು ನೀಡುವಂತೆ ತಿಳಿಸಿದರು. ಬಳಿಕ ಪ್ರತಿಭಟನೆ ಹಿಂಪಡೆದು ಪೌರ ಕಾರ್ಮಿಕರು ನಿಂಧಿಸಿದ ವ್ಯಕ್ತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.