ನೆಲ್ಯಾಡಿ: ಭಾರೀ ಮಳೆ, ಹೆದ್ದಾರಿ ಕಾಮಗಾರಿ ಅವಾಂತರದಿಂದ ಮನೆ, ರಸ್ತೆಗೆ ನುಗ್ಗಿದ ನೀರು

0

ನೆಲ್ಯಾಡಿ: ಧಾರಕಾರ ಮಳೆಯಿಂದಾಗಿ ನೆಲ್ಯಾಡಿ ಪೇಟೆಯಲ್ಲಿ ಹೆದ್ದಾರಿ ಕಾಮಗಾರಿ ಅವಾಂತರದಿಂದಾಗಿ ಕೆಲ ಅಂಗಡಿಗಳಿಗೆ, ಮನೆಗಳಿಗೆ ನೀರು ನುಗ್ಗಿರುವುದಾಗಿ ವರದಿಯಾಗಿದೆ. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಮಳೆನೀರು ರಸ್ತೆಯಲ್ಲಿಯೇ ನಿಂತ ಪರಿಣಾಮ ವಾಹನ ಸಂಚಾರಕ್ಕೂ ಅಡ್ಡಿ ಉಂಟಾಗಿದೆ.

ಜು.31ರಂದು ಸಂಜೆ ಈ ಭಾಗದಲ್ಲಿ ಭಾರೀ ಮಳೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿರುವುದರಿಂದ ಹೆದ್ದಾರಿಯುದ್ದಕ್ಕೂ ಕಾಮಗಾರಿ ನಡೆಯುತ್ತಿದೆ. ಅಲ್ಲಲ್ಲಿ ರಸ್ತೆ, ಗುಡ್ಡೆ ಅಗೆಯಲಾಗಿದೆ. ಇದರಿಂದಾಗಿ ಕೆಲವೆಡೆ ಚರಂಡಿ ಬ್ಲಾಕ್ ಆಗಿದೆ. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಮಳೆ ನೀರು ಹರಿದುಹೋಗುತ್ತಿಲ್ಲ. ಚರಂಡಿ ಬ್ಲಾಕ್ ಆಗಿರುವುದರಿಂದ ನೀರು ರಸ್ತೆ, ಮನೆಗಳಿಗೆ ನುಗುತ್ತಿದೆ. ನೆಲ್ಯಾಡಿಯಲ್ಲಿ ತೋಮಸ್ ಎಲೆಕ್ಟ್ರಿಕಲ್ ಹಾಗೂ ರಜಾಕ್ ಎಂಬವರ ಮನೆಗೆ ಮಳೆ ನೀರು ನುಗ್ಗಿದೆ. ಕೌಕ್ರಾಡಿ ಗ್ರಾಮದ ಮಣ್ಣಗುಂಡಿಯಲ್ಲಿ ರಾಜೀವಿ ಎಂಬವರ ಮನೆಗೆ ನೀರು ನುಗ್ಗಿದೆ. ಹೊಸಮಜಲುನಲ್ಲಿ ಹೋಟೆಲ್ ಬಿರ್ವ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ೨ ಅಡಿಯಷ್ಟು ನೀರು ನಿಂತಿದ್ದು ಸಾರ್ವಜನಿಕರು ತೊಂದರೆಗೊಳಗಾಗಿದ್ದರು ಎಂದು ವರದಿಯಾಗಿದೆ. ಚತುಷ್ಪಥ ಹೆದ್ದಾರಿ ಕಾಮಗಾರಿ ವಹಿಸಿಕೊಂಡವರು ಈ ಬಗ್ಗೆ ಗಮನಹರಿಸಿ ಮಳೆಗಾಲದಲ್ಲಿ ಆಗಬಹುದಾದ ಸಂಭಾವ್ಯ ಅನಾಹುತ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here