ಪುತ್ತೂರು:ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆ.7ರಂದು ಬಂಧನಕ್ಕೊಳಗಾಗಿದ್ದ ಇಬ್ಬರು ಆರೋಪಿಗಳನ್ನು ಪ್ರಕರಣದ ತನಿಖಾಧಿಕಾರಿಯಾಗಿರುವ ಪುತ್ತೂರು ಡಿವೈಎಸ್ಪಿ ಡಾ.ಪಿ.ಗಾನಾ ಕುಮಾರ್ ಅವರ ನೇತೃತ್ವದಲ್ಲಿ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಹತ್ಯೆ ಘಟನೆಗೆ ಸಂಬಂಧಿಸಿ ಆರೋಪಿಗಳಾದ ಬೆಳ್ಳಾರೆ ಗೌರಿಹೊಳೆ ನಿವಾಸಿ ನೌಫಾಲ್ ಮತ್ತು ಸುಳ್ಯ ನಾವೂರು ನಿವಾಸಿ ಆಬಿದ್ ಎಂಬವರನ್ನು ಆ.7ರಂದು ಪೊಲೀಸರು ಬಂಧಿಸಿದ್ದರು.
ಬಂಧಿತರನ್ನು ಆ.8ರಂದು ಬೆಳಿಗ್ಗೆ ಸುಳ್ಯ ಮತ್ತು ಬೆಳ್ಳಾರೆಯ ಎಸ್ಡಿಪಿಐ ಕಚೇರಿಗೆ ಹಾಗೂ ಸುಳ್ಯ, ಬೆಳ್ಳಾರೆಯ ಇತರ ಕೆಲವು ಕಡೆಗಳಿಗೆ ಕರೆದೊಯ್ದು ಮಹಜರು ನಡೆಸಿ ಸಂಜೆ ವೇಳೆಗೆ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.ಕಿರಿಯ ಸಿವಿಲ್ ನ್ಯಾಯಾಧೀಶೆ ಕು.ಅರ್ಪಿತಾರವರು ಆರೋಪಿಗಳಿಗೆ ಆ.12ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದ್ದಾರೆ.
ಎಸ್ಡಿಪಿಐ ಕಚೇರಿಯಲ್ಲಿ ಸ್ಕೆಚ್?
ಬಂಧಿತ ಆರೋಪಿಗಳಿಗೆ ಎಸ್ಡಿಪಿಐ ಜೊತೆ ನಿಕಟ ಸಂಪರ್ಕವಿದೆ ಮತ್ತು ಪ್ರವೀಣ್ ಅವರ ಹತ್ಯೆಗೆ ಸಂಬಂಧಿಸಿ ಸುಳ್ಯದ ಎಸ್ಡಿಪಿಐ ಕಚೇರಿಯಲ್ಲಿಯೇ ಕುಳಿತು ಸ್ಕೆಚ್ ಹಾಕಲಾಗಿದೆ ಎನ್ನುವ ಸಂಶಯವಿದ್ದ ಹಿನ್ನೆಲೆಯಲ್ಲಿಯೇ ಬಂಧಿತ ಆರೋಪಿಗಳಿಬ್ಬರನ್ನು ಎಸ್ಡಿಪಿಐ ಕಚೇರಿಗೆ ಕರೆತಂದು ಮಹಜರು ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭಿಸಿದೆ.