- ರೂ.85.03 ಲಕ್ಷ ನಿವ್ವಳ ಲಾಭ
- ಸದಸ್ಯರಿಗೆ ಶೇ.15 ಡಿವಿಡೆಂಡ್
- ಸಾಲ ವಸೂಲಾತಿ ಶೇ.100 ಸಾಧನೆ
ಕಾವು : ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2021-22ನೇ ಆರ್ಥಿಕ ಸಾಲಿನಲ್ಲಿ ರೂ.234.40 ಕೋಟಿ ವ್ಯವಹಾರ ನಡೆಸಿ ರೂ.85.03 ಲಕ್ಷ ನಿವ್ವಳ ಲಾಭಗಳಿಸಿದ್ದು ಸದಸ್ಯರಿಗೆ ಶೇ.15 ಲಾಭಾಂಶ ನೀಡಲಾಗುವುದು, ವರ್ಷಾಂತ್ಯಕ್ಕೆ ಸಾಲ ವಸೂಲಾತಿಯಲ್ಲಿ ಶೇ.100 ಸಾಧನೆ ಮಾಡಿದ್ದು, ಸತತ 18 ವರ್ಷದಿಂದ ಆಡಿಟ್ನಲ್ಲಿ ಎ ಶ್ರೇಣಿಯನ್ನು ಪಡೆದುಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಹೇಳಿದರು. ಅವರು ಆ.13ರಂದು ಸಂಘದ ಪ್ರಧಾನ ಕಛೇರಿ ಕಾವು ಇದರ ಶಿವಸದನ ಸಭಾಭವನದಲ್ಲಿ ನಡೆದ ಸಂಘದ 2021-22ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಮಹಾಸಭೆಯಲ್ಲಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.
ರೂ.85.03 ಲಕ್ಷ ನಿವ್ವಳ ಲಾಭ:
ಸಂಘವು 2021-22ನೇ ಸಾಲಿನಲ್ಲಿ ಒಟ್ಟು ರೂ.234.40 ಕೋಟಿಗಳಷ್ಟು ವಾರ್ಷಿಕ ವ್ಯವಹಾರವನ್ನು ಮಾಡಿ 85,03,408 ರೂಪಾಯಿ ನಿವ್ವಳ ಲಾಭ ಹೊಂದಿದ್ದು, ಲಾಭಾಂಶವನ್ನು ನಿಯಮಾವಳಿಯ ಪ್ರಕಾರ ಹಂಚಿಕೆ ಮಾಡಿ ಸದಸ್ಯರಿಗೆ ಶೇ.15 ಡಿವಿಡೆಂಡ್ ಮತ್ತು ಸಂಘದ ಸಿಬ್ಬಂದಿಗಳಿಗೆ ಎರಡು ತಿಂಗಳ ಸಂಬಳದ ಬೋನಸ್ ನೀಡಲಾಗುವುದು. ವರ್ಷಾಂತ್ಯಕ್ಕೆ ಸಂಘದಲ್ಲಿ 2128 ಜನ ಸದಸ್ಯರಿದ್ದು, ರೂ.2,11,49,875 ಪಾಲು ಬಂಡವಾಳವಿದೆ. ವರ್ಷಾಂತ್ಯಕ್ಕೆ ವಿವಿಧ ಠೇವಣಿಗಳಾಗಿ ರೂ. 31,10,21,502 ಹೊಂದಿರುತ್ತದೆ. ಲಾಭಾಂಶವನ್ನು ಮಹಾಸಭೆಯ ಬಳಿಕ ಸದಸ್ಯರ ಉಳಿತಾಯ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗುವುದು ಎಂದು ನನ್ಯ ಅಚ್ಚುತ ಮೂಡೆತ್ತಾಯರು ಹೇಳಿದರು.
ಸಾಲ ವಸೂಲಾತಿಯಲ್ಲಿ ಶೇ.100 ಸಾಧನೆ:
ಸಂಘದಲ್ಲಿ ವರ್ಷಾರಂಭಕ್ಕೆ ರೂ.24,91,32,576 ಸದಸ್ಯರ ಸಾಲ ಹೊರಬಾಕಿಯಿದ್ದು, ವರದಿ ವರ್ಷದಲ್ಲಿ ರೂ. 33,91,02,385 ಸಾಲ ವಿತರಿಸಿದ್ದು, ರೂ. 32,53,52,631 ವಸೂಲಾತಿಯಾಗಿ ವರ್ಷಾಂತ್ಯಕ್ಕೆ ರೂ.26,28,82,330 ಸಾಲ ಹೊರ ಬಾಕಿ ಇದ್ದು, ಸಾಲ ವಸೂಲಾತಿಯಲ್ಲಿ ಶೇ.100 ಸಾಧನೆ ಮಾಡಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ಸನ್ಮಾನ:
2021-22ನೇ ಸಾಲಿನಲ್ಲಿ ಸಂಘದಿಂದ ವಯೋನಿವೃತ್ತಿ ಹೊಂದಿದ ಈಶ್ವರಮಂಗಲ ಶಾಖಾ ವ್ಯವಸ್ಥಾಪಕ ಲಿಂಗಪ್ಪ ನಾಯ್ಕ್ರವರಿಗೆ ಮಹಾಸಭೆಯಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಶಾಲು ಹೊದಿಸಿ, ಹಾರ ಹಾಕಿ, ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿತರನ್ನು ಗೌರವಿಸಿದರು.
ವೇದಿಕೆಯಲ್ಲಿ ಎಸ್ಸಿಡಿಸಿಸಿ ಬ್ಯಾಂಕ್ನ ವಲಯ ಮೇಲ್ವಿಚಾರಕ ಶರತ್ ಡಿ, ಸಂಘದ ಉಪಾಧ್ಯಕ್ಷ ರಮೇಶ್ ಪೂಜಾರಿ ಮುಂಡ್ಯ, ನಿರ್ದೇಶಕರುಗಳಾದ ಎ.ಮಂಜುನಾಥ ರೈ, ಶಿವಪ್ರಸಾದ್ ಕೊಚ್ಚಿ, ಲೋಕೇಶ್ ಚಾಕೋಟೆ, ರಾಮಣ್ಣ ನಾಯ್ಕ ಕುದ್ರೋಳಿ, ಮೋಹನಾಂಗಿ ಬೀಜಂತಡ್ಕ, ಹೇಮಾವತಿ ಚಾಕೋಟೆ, ಚಂದ್ರಶೇಖರ ಗೌಡ ನೂಜಿಬೈಲು, ಲೋಹಿತ್ ಅಮ್ಚಿನಡ್ಕರವರು ಉಪಸ್ಥಿತರಿದ್ದರು.
ಸಂಘದ ಸಿಬ್ಬಂದಿ ಶೋಭಾ ಪ್ರಾರ್ಥಿಸಿದರು. ನಿರ್ದೇಶಕರಾದ ಪ್ರವೀಣ್ ರೈ ಮೇನಾಲ ಸ್ವಾಗತಿಸಿ, ಶ್ರೀಧರ್ ರಾವ್ ನಿಧಿಮುಂಡ ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ಪಿ.ಜಿ ಮಹಾಸಭೆಯ ತಿಳುವಳಿಕೆ ಪತ್ರವನ್ನು ಓದಿ ದೃಢೀಕರಿಸಿ, ಹಿಂದಿನ ಮಹಾಸಭೆಯ ನಡವಳಿಕೆಗಳನ್ನು ಓದಿದರು. ಸಂಘದ ಸಿಬ್ಬಂದಿಗಳಾದ ಅಭಿಷೇಕ್ ಪಿ.ಎಸ್, ರಾಜೇಶ್ ಡಿ, ಸುನೀಲ್ ಎನ್, ನಿತೇಶ್ ಎಸ್ರವರು ವಿವಿಧ ಜವಾಬ್ದಾರಿ ನಿರ್ವಹಿಸಿದರು. ಸಂಘದ ಸಿಬ್ಬಂದಿಗಳಾದ ಸೌಮ್ಯಮಣಿ, ವಿಶ್ವನಾಥ ಕೆ, ಜಗದೀಶ್ ರಾವ್, ಆನಂದ ಎಸ್ ರವರು ಸಹಕರಿಸಿದರು. ರಾಷ್ಟ್ರಗೀತೆಯೊಂದಿಗೆ ಮಹಾಸಭೆ ಮುಕ್ತಾಯವಾಯಿತು.