ಬಪ್ಪಳಿಗೆಯಲ್ಲಿ ಅಂಬಿಕಾ ಪದವಿಪೂರ್ವ ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಸಭೆ

0

ಉದ್ಯೋಗಾವಕಾಶ ಕಲ್ಪಿಸುವ ಗುರಿಯೊಂದಿಗೆ ಶಿಕ್ಷಣ : ರಾಜಶ್ರೀ ಎಸ್. ನಟ್ಟೋಜ

ಪುತ್ತೂರು: ಉತ್ತಮ ಶೈಕ್ಷಣಿಕ ಸಾಧನೆ ಮಾಡಬೇಕೆನ್ನುವುದರ ಜೊತೆಗೆ ಉದ್ಯೋಗಾವಕಾಶವೂ ಪ್ರಾಪ್ತವಾಗಬೇಕೆನ್ನುವ ನೆಲೆಯಲ್ಲಿ ಶಿಕ್ಷಣವನ್ನು ನೀಡಿದಾಗ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನ ದೊರಕುವುದಕ್ಕೆ ಸಾಧ್ಯ. ಆ ಕಾರಣದಿಂದಲೇ ಅಂಬಿಕಾ ಪದವಿ ಹಾಗೂ ಪದವಿಪೂರ್ವ ಸಂಸ್ಥೆಗಳಲ್ಲಿ ಸಿ.ಎ., ಎಸ್.ಡಿ.ಎ, ಎಫ್.ಡಿ.ಎ, ಐಬಿಪಿಎಸ್ ಪರೀಕ್ಷೆ ಉತ್ತೀರ್ಣರಾಗಲು ಬೇಕಾಗಿರುವ ತರಬೇತಿಯನ್ನೂ ನೀಡಲಾಗುತ್ತಿದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ತೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಾಣಿಜ್ಯ ವಿದ್ಯಾರ್ಥಿಗಳ ಪೋಷಕರೊಂದಿಗೆ ನ.15ರಂದು ಹಮ್ಮಿಕೊಂಡಿದ್ದ ಶಿಕ್ಷಕ- ರಕ್ಷಕ ಸಂಘದ ಸಭೆಯಲ್ಲಿ ಮಾತನಾಡಿದರು.

ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪರಿಪೂರ್ಣ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ತರಬೇತುಗೊಳಿಸಬೇಕಿದೆ. ವಾಣಿಜ್ಯ ವಿಭಾಗದಲ್ಲಿ ವಿಫುಲ ಉದ್ಯೋಗವಾಕಾಶಗಳಿದ್ದು, ಕೌಶಲ ಹೊಂದಿದ ವಿದ್ಯಾರ್ಥಿಗಳ ಕೊರತೆಯಿದೆ. ಆದ್ದರಿಂದ ಕೌಶಲದೊಂದಿಗೆ ವಿದ್ಯೆ ನೀಡುವ ಕಾರ್ಯ ನಡೆದಾಗ ವಿದ್ಯಾರ್ಥಿಗಳು ಪರಿಪೂರ್ಣರೆನಿಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಬೇಕಾದ ಎಲ್ಲ ರೀತಿಯ ತರಬೇತಿಗಳನ್ನು ನೀಡಬೇಕಿರುವುದು ವಿದ್ಯಾಸಂಸ್ಥೆಯ ಆದ್ಯತೆ ಎಂದರು.

ಅಂಬಿಕಾ ಮಹಾವಿದ್ಯಾಲಯದ ಪ್ರಾಂಶುಪಾಲ ರಾಕೇಶ್ ಕುಮಾರ್ ಕಮ್ಮಜೆ ಮಾತನಾಡಿ, ಪ್ರತೀ ವರ್ಷ ಬ್ಯಾಂಕಿಂಗ್ ಕ್ಷೇತ್ರದಲ್ಲೇ ಸಾವಿರಾರು ಉದ್ಯೋಗಾವಕಾಶಗಳ ಸೃಷ್ಟಿಯಾಗುತ್ತಿದೆ. ಆದರೆ ವಿದ್ಯಾರ್ಥಿಗಳು ಪೂರ್ವ ತಯಾರಿ ಕೊರತೆಯಿಂದ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗುತ್ತಿಲ್ಲ. ಪದವಿ ಅಧ್ಯಯನ ನಡೆಸುವಾಗಲೇ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ದೊರಕಿದಾಗ ಹೆಚ್ಚಿನ ಸಾಧನೆ ವಿದ್ಯಾರ್ಥಿಗಳಿಂದ ಮೂಡಿಬರುವುದಕ್ಕೆ ಸಾಧ್ಯ ಎಂದು ನುಡಿದರು.‌

ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಎಂ. ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಶಿಕ್ಷಣಕ್ಕೆ ಪೂರಕವಾಗುವ ವಿಚಾರಗಳಿಗೆ ಬಳಸಿಕೊಂಡಲ್ಲಿ ಸಾಧನೆ ಮಾಡಲು ಸಾಧ್ಯ. ಆದರೆ ಅನೇಕ ಮಂದಿ ವಿದ್ಯಾರ್ಥಿಗಳು ಅತಿಯಾದ ಮೊಬೈಲ್ ಬಳಕೆಯ ಸುಳಿಗೆ ಸಿಲುಕಿ ಬಳಲುತ್ತಿದ್ದಾರೆ. ಹಾಗಾಗಿ ಉಪನ್ಯಾಸಕರ ಜೊತೆಗೆ ಪೋಷಕರೂ ಮಕ್ಕಳ ಚಟುವಟಿಕೆಗಳ ಬಗ್ಗೆ ಗಮನಹರಿಸುವುದು ಅತ್ಯಗತ್ಯ ಎಂದು ಹೇಳಿದರು.

ವಾಣಿಜ್ಯ ವಿಭಾಗ ಉಪನ್ಯಾಸಕಿ ಕಾವ್ಯ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗ ಮುಖ್ಯಸ್ಥೆ ಅಕ್ಷತಾ ಸ್ವಾಗತಿಸಿ, ನಿರೂಪಿಸಿದರು. ವಿದ್ಯಾ ಸರಸ್ವತಿ ವಂದಿಸಿದರು.

LEAVE A REPLY

Please enter your comment!
Please enter your name here