ವಿವೇಕಾನಂದ ಕಾಲೇಜು: ಪ್ರೋ-ಕಬಡ್ಡಿ ಪಂದ್ಯಾಟಕ್ಕೆ ಚಾಲನೆ

0

ಪುತ್ತೂರು: ಕ್ರೀಡೆಯಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ ಇದ್ದ ಸ್ಥಿತಿಗೂ ಈಗಿನ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದೆ. ಕ್ರೀಡೆಯಲ್ಲಿನ ಆಮೂಲಾಗ್ರ ಬದಲಾವಣೆಯು ಹೆಚ್ಚಿನ ಶಕ್ತಿ ಪ್ರದರ್ಶನಕ್ಕೆ ಪೂರಕವಾಗಿದೆ ಎಂದು ಪುತ್ತೂರಿನ ಶಾಸಕ ಸಂಜೀವ ಮಠಂದೂರು ಹೇಳಿದರು. 

ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಯ್ದ ವಿದ್ಯಾರ್ಥಿ ತಂಡಗಳ ನಡುವೆ ಕಾಲೇಜಿನ ಆವರಣದಲ್ಲಿ ನಡೆಯುತ್ತಿರುವ ಪ್ರೋ-ಕಬಡ್ಡಿ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತಾಡಿದರು. ಕ್ರೀಡೆಗೆ ಸಾಕಷ್ಟು ಪ್ರೋತ್ಸಾಹ ದೊರಕುತ್ತಿದ್ದು, ಇದರಿಂದ ಹಳ್ಳಿಗಳಲ್ಲಿಯೂ ದೊಡ್ಡ ದೊಡ್ಡ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳುವುದಕ್ಕೆ ಸಾಧ್ಯವಾಗಿದೆ ಎಂದರು. ದೇಶೀಯ ಕ್ರೀಡೆಗೆ ಸೂಕ್ತ ತರಬೇತಿ ಮತ್ತು ಪ್ರೋತ್ಸಾಹವನ್ನು ನೀಡುವುದರಿಂದ ಅದು ಜಗದಗಲದಲ್ಲಿ ವ್ಯಾಪಿಸುತ್ತದೆ ಈ ಕೆಲಸವು ಎಲ್ಲಾ ಕಡೆಯಲ್ಲಿ ನಡೆಯಲಿ ಎಂದರು.

 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪುತ್ತೂರಿನ ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಮಾತನಾಡಿ ಕಬಡ್ಡಿಯಂತಹ ಕ್ರೀಡೆಗಳಿಂದ ತಮ್ಮ ಮಕ್ಕಳಿಗೆ ತೊಂದರೆಯಾಗುತ್ತದೋ ಎನ್ನುವ ಆತಂಕ ಪೋಷಕರಲ್ಲಿರುವುದು ಸಹಜ ಆದರೆ ಬದಲಾದ ಅಂಕಣ ಮತ್ತು ನೀತಿ ನಿಯಮಗಳಿಂದ ಇಂದು ಅದೊಂದು ಜನಪ್ರಿಯ ಕ್ರೀಡೆಯಾಗಿ ಬೆಳೆದು ಬಂದಿದೆ ಎಂದರು. ಪ್ರತಿಯೊಬ್ಬರಲ್ಲಿಯೂ ಒಂದೊಂದು ವಿಶೇಷ ಪ್ರತಿಭೆಗಳಿರುತ್ತವೆ. ಆ ಪ್ರತಿಭೆಯ ಕಿಚ್ಚನ್ನು ಎಬ್ಬಿಸುವ ಕೆಲಸವಾದಾಗ ಅವರು ಪ್ರವರ್ಧಮಾನಕ್ಕೆ ಬರುತ್ತಾರೆ ಎಂದರು.
ಇನ್ನೋರ್ವ ಅತಿಥಿ ಭಾರತೀಯ ಸೀಮಾ ಸುರಕ್ಷಾ ಬಲದ ವಿಶ್ರಾಂತ ಡೆಪ್ಯುಟಿ ಕಮಾಂಡೆಂಟ್ ಡಿ.ಚಂದಪ್ಪ ಮೂಲ್ಯ ಮಾತನಾಡಿ ತಂಡ ಸ್ಪರ್ಧೆಗಳಲ್ಲಿ ಸ್ವಾರ್ಥ ಇರಲಾರದು ತನ್ನ ತಂಡ, ತನ್ನ ಕಾಲೇಜು ತನ್ನ ಜಿಲ್ಲೆ ಹೀಗೆ ಬೆಳೆಯುತ್ತಾ ತನ್ನ ದೇಶ ಎನ್ನುವ ಭಾವನೆ ಉದ್ಭವವಾಗುತ್ತದೆ ಇದರಿಂದ ದೇಶ ಪ್ರೇಮ ಹೆಚ್ಚುತ್ತದೆ ಎಂದರು. ಸಿಗುವ ಸೌಲಭ್ಯಗಳನ್ನು ಬಳಸಿಕೊಳ್ಳುವುದು ಪ್ರತಿಯೊಬ್ಬನ ಕರ್ತವ್ಯ ಎಂದರು.

 

ಮತ್ತೋರ್ವ ಅತಿಥಿ ಸಚಿನ್ ಗ್ರೂಪ್ ಉಪ್ಪಿನಂಗಡಿಯ ಮಾಲಕ ಹಾಗೂ ಚಿತ್ರೋದ್ಯಮದಲ್ಲಿ ತೊಡಗಿಸಿಕೊಂಡಿರುವ ಸಚಿನ್.ಎ.ಎಸ್ ಮಾತನಾಡಿ ತನ್ನಲ್ಲಿರುವ ನಾಯಕತ್ವ ಗುಣವನ್ನು ಬೆಳೆಸುವಲ್ಲಿ ವಿವೇಕಾನಂದ ಸಂಸ್ಥೆಯ ಪಾತ್ರ ಮಹತ್ವದ್ದು ಎಂದರು. ಕ್ರೀಡೆಗೆ ಬೇಕಾದ ಎಲ್ಲಾ ಸಹಕಾರವನ್ನು ನೀಡುವುದಕ್ಕೆ ತಾನು ಉತ್ಸುಕನಾಗಿದ್ದೇನೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ಮಾತನಾಡಿ ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಾಕಷ್ಟು ಸಾಧನೆಯನ್ನು ಮಾಡಿ ವಿಜೇತರಾಗಿದ್ದಾರೆ. ಅವರಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಕಾಲೇಜು ನೀಡುತ್ತಿದೆ ಎಂದರು. ಎಲ್ಲಾ ಕ್ರೀಡಾಳುಗಳು ಸವಲತ್ತುಗಳನ್ನು ಬಳಸಿಕೊಂಡು ಓದಿನಲ್ಲಿ ಹಿಂದೆ ಬೀಳದೆ ಕ್ರೀಡೆಯಲ್ಲಿ ಮುಂದುವರಿಯಬೇಕು ಎಂದರು.






LEAVE A REPLY

Please enter your comment!
Please enter your name here