![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಅಪಾರ ಪ್ರಮಾಣದಲ್ಲಿ ಅಡಿಕೆ ಬೆಳೆ ವಿಸ್ತರಣೆ ಆಗುತ್ತಿದ್ದು ಇದು ಭವಿಷ್ಯದಲ್ಲಿ ಮಾರಕವಾಗಲಿದೆ. ಹೆಚ್ಚಾಗಿ ಅಡಿಕೆ ಬೆಳೆದರೆ ಅಡಿಕೆಗೆ ಹೆಚ್ಚು ದಿನಗಳ ಭವಿಷ್ಯವಿಲ್ಲ. ಅಡಿಕೆ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ಕೊಡಬಾರದು ಎಂದು ಗೃಹಸಚಿವ ಮತ್ತು ಅಡಿಕೆ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರಾಗಿರುವ ಅರಗ ಜ್ಞಾನೇಂದ್ರ ಸದನದಲ್ಲಿ ಹೇಳಿದ್ದಾರೆ. ಅನಿರ್ಬಂಧಿತವಾಗಿ ಅಡಿಕೆ ಬೆಳೆಯುವ ವ್ಯಾಪ್ತಿ ವಿಸ್ತಾರವಾಗುತ್ತಿದ್ದು ಮುಂದಿನ ದಿನಗಳಲ್ಲಿ ಸಾಂಪ್ರದಾಯಿಕವಾಗಿ ಅಡಿಕೆ ಕೃಷಿ ಮಾಡುವ ರೈತರು ಸಂಕಷ್ಟದ ದಿನಗಳನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ ಸಚಿವರು ಈಗಾಗಲೇ ಕೇಂದ್ರ ಸರಕಾರ ಡ್ರಿಪ್ ಗೆ ನೀಡುವ ಸಹಾಯವನ್ನು ನಿಲ್ಲಿಸಿದೆ ಎಂದು ಹೇಳಿದ್ದರು. ಸದನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಾತನಾಡಿದ ಸಚಿವರ ಮಾತಿಗೆ ಧ್ವನಿ ಗೂಡಿಸಿ ಅಭಿಪ್ರಾಯ ವ್ಯಕ್ತಪಡಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಡಿಕೆಯಿಂದ ಆರೋಗ್ಯಕ್ಕೆ ಹಾನಿ ಇಲ್ಲ ಆದರೆ ಅನಗತ್ಯ ವಿಸ್ತರಣೆಯಿಂದ ಅಪಾಯ ಖಚಿತ ಎಂದು ಹೇಳಿದರು. ಅಡಿಕೆ ಆಮದು ನಿಲ್ಲಿಸಿ ಎಂಬ ಕೂಗು ಕೇಳಿಬಂದಾಗ ಸಚಿವರು ಮೌನಿಯಾದರು.