ಪರ್ಪುಂಜ ರಾಮಜಾಲು ಗರಡಿಯ ಅದ್ದೂರಿ ಜಾತ್ರೋತ್ಸವ, ಧಾರ್ಮಿಕ ಸಭೆ, ಪ್ರಶಸ್ತಿ ಪ್ರಧಾನ, ಸನ್ಮಾನ: ಭಕ್ತಿಯಿಂದ ಮಾಡುವ ಆರಾಧನೆಗೆ ದೈವ ದೇವರ ಅನುಗ್ರಹ ಸದಾ ಇರುತ್ತದೆ : ಬಲರಾಮ ಆಚಾರ್ಯ

0

 

ಸಭಾ ಕಾರ್ಯಕ್ರಮ ಉದ್ಘಾಟನೆ,

ಪುತ್ತೂರು: ತಾಲೂಕಿನ ರಾಮಜಾಲು ಗರಡಿಯು ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ ಇದಕ್ಕೆ ಕಾರಣ ಇಲ್ಲಿ ನೆಲೆನಿಂತಿರುವ ಶ್ರೀ ಬ್ರಹ್ಮಬೈದೆರುಗಳಾದ ಶ್ರೀ ಕೋಟ ಚೆನ್ನಯರು ಹಾಗೂ ಅವರ ಕಾರಣಿಕತೆ ಆಗಿದೆ. ಇಲ್ಲಿ ನಡೆಯುವ ಶ್ರೀ ಬ್ರಹ್ಮಬೈದೆರ್ಕಳ ಜಾತ್ರೋತ್ಸವಕ್ಕೆ ತನ್ನದೇ ಆದ ಇತಿಹಾಸ ಇದೆ ಎಂಬುದನ್ನು ನಾನು ತಿಳಿದುಕೊಂಡಿದ್ದೇನೆ. ಕೋಟಿ ಚೆನ್ನಯರು ತುಳುನಾಡಿನ ವೀರ ಪುರುಷರು, ಅಪಾರ ಕಾರಣಿಕತೆಯನ್ನು ತೋರಿಸಿದ ದೈವಿಸಂಭೂತರು ಆಗಿದ್ದಾರೆ. ಭಕ್ತಿಯಿಂದ ದೈವ ದೇವರನ್ನು ಯಾರು ಆರಾಧನೆ ಮಾಡುತ್ತಾರೋ ಅವರಿಗೆ ದೇವರ ಅನುಗ್ರಹ ಸದಾ ಇದ್ದೇ ಇರುತ್ತದೆ ಎಂದು ಪುತ್ತೂರಿನ ಸ್ವರ್ಣೋದ್ಯಮಿ ಬಲರಾಮ ಆಚಾರ್ಯರವರು ಹೇಳಿದರು.

 


ಅವರು ಒಳಮೊಗ್ರು ಗ್ರಾಮದ ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಯ ಜಾತ್ರೋತ್ಸವದ ಅಂಗವಾಗಿ ಜ.೭ ರಂದು ಕೂರೇಲುಗುತ್ತು ಶ್ರೀ ಸುಬ್ಬಪ್ಪ ಪೂಜಾರಿ ಧರ್ಮಚಾವಡಿ ದೇಯಿ ಬೈದೆತಿ ಸಿರಿದೊಂಪದಲ್ಲಿ ನಡೆದ ಶ್ರೀ ಬ್ರಹ್ಮಬೈದೆರ್ಕಳ ಜಾತ್ರೋತ್ಸವದ ಧಾರ್ಮಿಕ ಸಭೆ, ಪ್ರಶಸ್ತಿ ಪ್ರಧಾನ, ಸನ್ಮಾನ ಪಂಚದಶ ಸಂಭ್ರಮವನ್ನು ದೀಪ ಪ್ರಜ್ವಲಿಸಿ, ಹಿಂಗಾರ ಅರಳಿಸಿ ಮಾತನಾಡಿದರು. ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆದಿರುವುದು ಅತ್ಯಂತ ತುಂಬಾ ಒಳ್ಳೆಯ ಕಾರ್ಯ ಆಗಿದೆ ಎಂದ ಬಲರಾಮ ಆಚಾರ್ಯರವರು, ಸಮಾಜದಲ್ಲಿ ಒಳ್ಳೆಯ ಕಾರ್ಯ ಮಾಡುತ್ತಿರುವವರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನ ಮಾಡುತ್ತಿರುವುದು ಸಂಜೀವ ಪೂಜಾರಿ ಕೂರೇಲುರವರ ದೊಡ್ಡ ಗುಣವಾಗಿದೆ. ಹಳ್ಳಿಯ ಜೀವನದಿಂದ ಬಂದು ಎಂ.ಎಸ್ಸಿಯಲ್ಲಿ ಪ್ರಥಮ ರ‍್ಯಾಂಕ್ ಗಳಿಸಿಕೊಂಡಿರುವ ಸಂಜೀವ ಪೂಜಾರಿಯವರ ಪುತ್ರ ಹರ್ಷಿತ್ ಕುಮಾರ್‌ರವರಿಗೆ ಪ್ರತಿಭಾ ಪುರಸ್ಕಾರ ನಡೆದಿರುವುದು ಒಂದು ಉತ್ತಮ ಕೆಲಸವಾಗಿದೆ. ನೇಮೋತ್ಸವದ ಜೊತೆಯಲ್ಲಿ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ಕೆಲಸ ಹಾಗೂ ಸಮಾಜದಲ್ಲಿ ಉತ್ತಮ ಕೆಲಸ ಮಾಡಿದವರಿಗೆ ಸನ್ಮಾನ ಮಾಡುವ ಕಾರ್ಯ ಇದು ರಾಮಜಾಲು ಗರಡಿಯ ನೇಮೋತ್ಸವದ ವಿಶೇಷತೆಯಾಗಿದ್ದು ಇಲ್ಲಿ ನೆಲೆಸಿರುವ ಶ್ರೀ ಬ್ರಹ್ಮಬೈದೆರುಗಳು ಎಲ್ಲರಿಗೂ ಒಳ್ಳೆಯದನ್ನು ಕರುಣಿಸಲಿ ಎಂದು ಹೇಳಿದ ಬಲರಾಮ ಆಚಾರ್ಯರವರು ಶುಭ ಹಾರೈಸಿದರು.

ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ, ಡೆಕ್ಕಳ ಮಹಾಬಲ ರೈಯವರು ಗರಡಿಯ ಕೆಲಸ ಕಾರ್ಯಗಳನ್ನು ಮುಂದುವರಿಸಲು ಅಸಾಧ್ಯವಾಗುತ್ತದೆ ಎಂದು ಚಿಂತಿಸಿ ಈ ದೈವಗಳ ಕಾರ್ಯವನ್ನು ಶ್ರದ್ಧಾ,ಭಕ್ತಿ, ಪ್ರಾಮಾಣಿಕತೆಯಿಂದ ಯಾರು ನಡೆಸಿಕೊಂಡು ಹೋಗಬಹುದು ಎಂದು ನೋಡಿದಾಗ ದೈವ ಪ್ರೇರಣೆಯಂತೆ ಸಂಜೀವ ಪೂಜಾರಿಯವರನ್ನು ತೋರಿಸಿ ಅವರ ಧಾರ್ಮಿಕ ಭಕ್ತಿಗೆ ದೊಡ್ಡಮಟ್ಟದ ಶಕ್ತಿಯನ್ನು ಕೊಡಲಾಗಿದೆ. ಆ ನಂತರದ ಬೆಳವಣಿಗೆಯನ್ನು ನೋಡಿದರೆ ಇಲ್ಲಿನ ದೈವ ಶಕ್ತಿಯನ್ನು ಕಾಣಬಹುದಾಗಿದೆ. ಕೂರೇಲು ಮಣ್ಣಿನ ದೈವಗಳಿಂದ ಹಿಡಿದು ರಾಮಜಾಲು ಗರಡಿಯ ತನಕದ ದೈವಗಳ ಕಾರ್ಯಗಳನ್ನು ನಿಷ್ಠೆ,ಭಕ್ತಿ, ಪ್ರಾಮಾಣಿಕತೆಯಿಂದ ನಡೆಸಿಕೊಂಡು ಬರುತ್ತಿರುವ ಸಂಜೀವಣ್ಣರವರಿಗೆ ನಿಜವಾಗಿಯೂ ದೈವಗಳ ಅಭಯ, ಅನುಗ್ರಹ ಸದಾ ಇದ್ದೇ ಇದೆ ಎಂಬುದು ಸತ್ಯ. ದೈವ ದೇವರು ಕೊಟ್ಟದ್ದನ್ನು ಒಂದಂಶವನ್ನು ದೈವ ದೇವರ ಸೇವೆಗೆ ಸದಾ ಮೀಸಲು ಇಟ್ಟವರು ಸಂಜೀವ ಪೂಜಾರಿಯವರು ಆಗಿದ್ದಾರೆ. ಇಂದು ಅವರ ಪುತ್ರ ಹರ್ಷಿತ್ ಕುಮಾರ್‌ರವರು ಕೂಡ ಓರ್ವ ಸಾಧಕರಾಗಿದ್ದಾರೆ. ಎಂ.ಎಸ್ಸಿಯಲ್ಲಿ ಪ್ರಥಮ ರ‍್ಯಾಂಕ್ ಗಳಿಸಿಕೊಂಡ ಅವರಿಗೆ ಈ ರಾಮಜಾಲು ಮಣ್ಣಿನಲ್ಲಿ ಸನ್ಮಾನ ಮಾಡುವ ಕೆಲಸ ನಡೆದಿರುವುದು ತುಂಬಾ ಖುಷಿ ಕೊಟ್ಟಿದೆ. ಯಾರು ದೈವ ದೇವರನ್ನು ಶ್ರದ್ಧೆ,ಭಕ್ತಿ,ಪ್ರಾಮಾಣಿಕತೆಯಿಂದ ಆರಾಧನೆ ಮಾಡುತ್ತಾರೋ ಅವರಿಗೆ ಖಂಡಿತವಾಗಿಯೂ ಒಳ್ಳೆಯದೇ ಆಗುತ್ತದೆ ಎಂಬುದು ಮಾತ್ರ ಸತ್ಯ ಎಂದು ಹೇಳಿ ಶುಭ ಹಾರೈಸಿದರು.


ಕೂರೇಲುಗುತ್ತು ಸುಬ್ಬಪ್ಪ ಪೂಜಾರಿ ಪ್ರಶಸ್ತಿ ಸ್ವೀಕರಿಸಿದ ಉದ್ಯಮಿ, ಸಮಾಜ ಸೇವಕ ರವಿ ಕಕ್ಕೆಪದವುರವರು ಮಾತನಾಡಿ, ನಾನು ಪ್ರಶಸ್ತಿ ಬರಬೇಕು, ಸನ್ಮಾನ,ಹೆಸರು ಮಾಡಬೇಕು ಎಂದು ಕೆಲಸ ಮಾಡಿದ ವ್ಯಕ್ತಿಯಲ್ಲ, ನಾನು ಸುಬ್ರಹ್ಮಣ್ಯ ದೇವರ ಸೇವೆ ಮಾಡಿಕೊಂಡೇ ಮೇಲೆ ಬಂದವ ಇದೆಲ್ಲವೂ ಅವರ ಕೃಪೆಯಾಗಿದೆ. ಧರ್ಮಸ್ಥಳದಲ್ಲಿ ಪೇಪರ್ ಮಾರಾಟ ಮಾಡಿಕೊಂಡಿದ್ದು ಆ ಬಳಿಕ ಸುಬ್ರಹ್ಮಣ್ಯದಲ್ಲಿ ಪೈಟಿಂಗ್ ಕೆಲಸ ಮಾಡಿಕೊಂಡು ಬಂದವ ಆ ಬಳಿಕ ಮನೆಯ ಕೆಲಸವನ್ನು ಕಂಟ್ರಾಕ್ಟ್ ನೆಲೆಯಲ್ಲಿ ಮಾಡಲು ಆರಂಭಿಸಿದೆ. ನಾನು ಇಂದು ಈ ಹಂತಕ್ಕೆ ಬಂದಿದ್ದೇನೆ ಎಂದರೆ ಅದೆಲ್ಲವೂ ಸುಬ್ರಹ್ಮಣ್ಯ ದೇವರ ಅನುಗ್ರಹ, ಎಲ್ಲವೂ ಅವರಿಂದಲೇ ಆಗಿದೆ. ಇಂದು ನನ್ನನ್ನು ಗುರುತಿಸಿ ಗೌರವಿಸಿ ಪ್ರತಿಷ್ಠಿತ ಕೂರೇಲುಗುತ್ತು ಸುಬ್ಬಪ್ಪ ಪೂಜಾರಿ ಪ್ರಶಸ್ತಿ ನೀಡಿ ಸನ್ಮಾನಿಸಿದ ಸಂಜೀವ ಪೂಜಾರಿ ಕೂರೇಲುರವರಿಗೆ ಹಾಗೂ ಎಲ್ಲರಿಗೂ ಅತ್ಯಂತ ಪ್ರೀತಿಯಿಂದ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿ ಶುಭ ಹಾರೈಸಿದರು.


ಮುಖ್ಯ ಅತಿಥಿಯಾಗಿದ್ದ ಉದ್ಯಮಿ, ಅಕ್ಷಯ ಗ್ರೂಪ್ ಮಾಲಕ ಜಯಂತ ನಡುಬೈಲುರವರು ಮಾತನಾಡಿ, ನಾವು ಮಾಡುವ ಒಳ್ಳೆಯ ಕೆಲಸಕ್ಕೆ ದೈವ ದೇವರ ಅನುಗ್ರಹ ಇದಾ ಇದ್ದೇ ಇರುತ್ತದೆ. ರಾಮಜಾಲು ಗರಡಿಯ ನೇಮೋತ್ಸವ, ಇಲ್ಲಿನ ಕಾರಣಿಕತೆಯೇ ವಿಶೇಷವಾಗಿದೆ. ಯುವ ಜನತೆಯನ್ನು ಒಟ್ಟು ಸೇರಿಸಿಕೊಂಡು ಅದ್ಧೂರಿ ಜಾತ್ರೋತ್ಸವ ಇಲ್ಲಿ ನಡೆಯುತ್ತಿದೆ. ಕಂಕನಾಡಿ ಗರಡಿಯ ನೇಮೋತ್ಸವವನ್ನು ಬಿಟ್ಟರೆ ಎರಡನೇ ಸ್ಥಾನದಲ್ಲಿ ರಾಮಜಾಲು ಗರಡಿ ನೇಮೋತ್ಸವ ಇದೆ. ನೇಮೋತ್ಸವದೊಂದಿಗೆ ತನ್ನ ಕುಟುಂಬದ ಹಿರಿಯರಾದ ಸುಬ್ಬಪ್ಪ ಪೂಜಾರಿಯವರ ಹೆಸರಲ್ಲಿ ಪ್ರಶಸ್ತಿ ಕೊಡುವ ಕೆಲಸವನ್ನು ಕೂಡ ಸಂಜೀವ ಪೂಜಾರಿ ಮಾಡುತ್ತಿದ್ದಾರೆ ಇದು ಸಮಾಜಕ್ಕೆ ಮಾದರಿ ಕೆಲಸವಾಗಿದೆ. ಒಟ್ಟಿನಲ್ಲಿ ಭಕ್ತಿಯಿಂದ ದೈವ ದೇವರ ಸೇವೆ ಮಾಡಿದರೆ ನಮ್ಮ ಜೀವನ ಪಾವನವಾಗುತ್ತದೆ ಎಂದು ಹೇಳಿ ಶುಭ ಹಾರೈಸಿದರು.


ಸುಬ್ರಹ್ಮಣ್ಯ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಪ್ರಸನ್ನ ದರ್ಬೆರವರು ಮಾತನಾಡಿ, ನಂಬಿಕೆ ಎನ್ನುವುದು ಮನುಷ್ಯನ ಅತ್ಯಂತ ದೊಡ್ಡ ಗುಣವಾಗಿದೆ. ದೈವ ದೇವರ ಮೇಲೆ ನಾವು ಇಡುವ ನಂಬಿಕೆ, ಭಕ್ತಿಯೇ ನಮ್ಮ ಜೀವನವನ್ನು ಪಾವನ ಮಾಡಲು ಸಾಧ್ಯವಿದೆ ಎಂದು ಹೇಳಿ ಶುಭ ಹಾರೈಸಿದರು.
ಸಭಾಧ್ಯಕ್ಷತೆ ವಹಿಸಿದ್ದ ರಾಮಜಾಲು ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರು ಮಾತನಾಡಿ, ರಾಮಜಾಲು ಗರಡಿಯಲ್ಲಿ ನೆಲನಿಂತಿರುವ ಶ್ರೀ ಬ್ರಹ್ಮಬೈದೆರ್ಕಳ ಕೋಟಿ ಚೆನ್ನಯರ ಅನುಗ್ರಹ ಹಾಗೂ ಭಕ್ತರ ಸಹಕಾರದಿಂದ ಇದೆಲ್ಲವೂ ಸಾಧ್ಯವಾಗಿದೆ. ಇಲ್ಲಿ ನಾನು ನಿಮಿತ್ತ ಮಾತ್ರ ಎಲ್ಲವೂ ದೈವ ದೇವರ ಕೃಪೆ ಆಗಿದೆ. ದೈವ ದೇವರು ಕೊಟ್ಟಿರುವುದಲ್ಲಿ ಒಂದಂಶವನ್ನು ದೈವ ದೇವರ ಸೇವೆಗೆ ಮೀಸಲು ಇಡುತ್ತಿದ್ದೇನೆ. ಮುಂದೆಯೂ ತಮ್ಮೆಲ್ಲರ ಸಹಕಾರ ಇರಲಿ ಎಂದು ಹೇಳಿ ಶುಭ ಹಾರೈಸಿದರು. ವೇದಿಕೆಯಲ್ಲಿ ಪಂಬ್ರಾಣಕೊಟ್ಯದ ಮನೆ ನಾರಾಯಣ ಪೂಜಾರಿ, ಸರಸ್ವತಿ ಸಂಜೀವ ಪೂಜಾರಿ ಕೂರೇಲು ಉಪಸ್ಥಿತರಿದ್ದರು. ಹರ್ಷಿತ್ ಕುಮಾರ್ ಕೂರೇಲು ಸ್ವಾಗತಿಸಿದರು. ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರು ಅತಿಥಿಗಳಿಗೆ ತಾಂಬೂಲ ನೀಡಿ. ಶಾಲು ಹಾಕಿ ಸ್ಬಾಗತಿಸಿದರು.ನೇಮಾಕ್ಷ ಸುವರ್ಣ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು. ಕಿರಣ್ ಮಾಸ್ತರ್ ಸಹಕರಿಸಿದ್ದರು.

‘ಕೂರೇಲುಗುತ್ತು ಸುಬ್ಬಪ್ಪ ಪೂಜಾರಿ’ ಪ್ರಶಸ್ತಿ ಪ್ರಧಾನ
ರಾಮಜಾಲು ಗರಡಿಯ ವತಿಯಿಂದ ಕಳೆದರೆಡು ವರ್ಷಗಳಿಂದ ಕೊಡಮಾಡುತ್ತಾ ಬಂದಿರುವ ಪ್ರತಿಷ್ಠಿತ ‘ಕೂರೇಲುಗುತ್ತು ಸುಬ್ಬಪ್ಪ ಪೂಜಾರಿ’ ೨೦೨೩ ನೇ ವರ್ಷದ ಪ್ರಶಸ್ತಿಯನ್ನು ಉದ್ಯಮಿ, ಸಮಾಜ ಸೇವಕ ರವಿ ಕಕ್ಕೆಪದವುರವರಿಗೆ ಪ್ರಧಾನ ಮಾಡಲಾಯಿತು. ಪುತ್ತೂರಿನ ಸ್ವರ್ಣೋದ್ಯಮಿ ಬಲರಾಮ ಆಚಾರ್ಯರವರು ರವಿ ಕಕ್ಕೆಪದವುರವರಿಗೆ ಪೇಟಾ, ಶಾಲು ಹೊದಿಸಿ ಹಾರ ಹಾಕಿ,ಫಲಪುಷ್ಪ, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡುವ ಪ್ರಶಸ್ತಿ ಪ್ರಧಾನ ಮಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರವಿ ಕಕ್ಕೆಪದವುರವರ ಪತ್ನಿ ಹಾಗೂ ಪುತ್ರ, ಪುತ್ರಿ ಉಪಸ್ಥಿತರಿದ್ದರು.

‘ಶ್ರೀ ರಾಮಜಾಲು ಗರಡಿ’ ಪ್ರತಿಭಾ ಪುರಸ್ಕಾರ
ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ವಿಭಾಗ ಎಂ.ಎಸ್ಸಿಯಲ್ಲಿ ಪ್ರಥಮ ರ‍್ಯಾಂಕ್ ಗಳಿಸಿಕೊಂಡಿರುವ ಹರ್ಷಿತ್ ಕುಮಾರ್ ಕೂರೇಲುರವರಿಗೆ ರಾಮಜಾಲು ಗರಡಿ ಅಭಿಮಾನಿ ಬಳಗದ ವತಿಯಿಂದ ‘ ಶ್ರೀ ರಾಮಜಾಲು ಗರಡಿ’ ಪ್ರತಿಭಾ ಪುರಸ್ಕಾರ ನಡೆಯಿತು. ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಹರ್ಷಿತ್ ಕುಮಾರ್‌ರವರಿಗೆ ಪೇಟಾ,ಶಾಲು,ಫಲಪುಷ್ಪ, ಸ್ಮರಣಿಕೆ ಕೊಟ್ಟು ಶುಭ ಹಾರೈಸಿದರು. ಹರ್ಷಿತ್ ಕುಮಾರ್ ಕೂರೇಲುರವರು ರಾಮಜಾಲು ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರ ಪುತ್ರರಾಗಿದ್ದಾರೆ.

ಗೌರವಾರ್ಪಣೆ
ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಣೆ ಮಾಡಿದ ಅಭಿಷೇಕ್ ಮತ್ತು ರೇಖಾರವರಿಗೆ ಹಾಗೇ ವಿವಿಧ ಕಾರ್ಯಕ್ರಮ ನಿರ್ವಹಿಸಿದ ಪ್ರಭಾಕರ ಪೂಜಾರಿ, ಜನಾರ್ದನ ಟಿ, ನೇಮಾಕ್ಷ ಸುವರ್ಣ, ನವೀನ್ ಮರಿಕೆ, ರವೀಂದ್ರ ಸಂಪ್ಯ, ಸಭಾ ಕಾರ್ಯಕ್ರಮ ನಿರ್ವಾಹಕ ಬಾಲಕೃಷ್ಣ ಪೊರ್ದಾಳ್‌ರವರಿಗೆ ಕೆ.ಸಂಜೀವ ಪೂಜಾರಿ ಕೂರೇಲುರವರು ಶಾಲು, ಸ್ಮರಣಿಕೆ ನೀಡಿ ಗೌರವಿಸಿದರು. ಸ್ನೇಹ ಯುವಕ ಮಂಡಲ ಮತ್ತು ಯುವತಿ ಮಂಡಲದ ಪರವಾಗಿ ಸಂಚಾಲಕ ರಾಜೇಶ್ ರೈ ಪರ್ಪುಂಜರವರನ್ನು ಗೌರವಿಸಲಾಯಿತು.


ಶ್ರೀ ಬ್ರಹ್ಮಬೈದೆರ್ಕಳ ಅದ್ಧೂರಿ ನೇಮೋತ್ಸವ
ಜ. ೭ ರಂದು ಸಂಜೆ ಭಂಡಾರ ತೆಗೆಯುವ ಕಾರ್ಯಕ್ರಮ ನಡೆದು ಆ ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ಬೈದೇರುಗಳ ಗರಡಿ ಇಳಿಯುವ ಕಾರ್ಯಕ್ರಮ, ಆಕರ್ಷಕ ಸುಡುಮದ್ದು ಪ್ರದರ್ಶನ (ರಾಮಜಾಲು ಬೆಡಿ) ಮನಸೂರೆಗೊಂಡಿತ್ತು. ಬಳಿಕ ಬೈದೇರುಗಳ ಮೀಸೆ ಧರಿಸುವುದು, ಮಾಯಂದಾಲೆ (ಮಾಣಿ ಬಾಲೆ) ಗರಡಿ ಇಳಿಯುವುದು ,ಕೋಟಿ ಚೆನ್ನಯ ದರ್ಶನ ಪಾತ್ರಿಗಳ ಸೇಟ್ (ಸುರ್ಯ ಹಾಕಿಕೊಳ್ಳುವುದು), ಬೈದೇರುಗಳ ಸೇಟ್ (ಸುರ್ಯ ಹಾಕಿಕೊಳ್ಳುವುದು) ನಡೆದು ಭಕ್ತರಿಗೆ ಪ್ರಸಾದ ವಿತರಣೆ ನಡೆದು ಅರುಣೋದಯಕ್ಕೆ ನೇಮೋತ್ಸವದಿಂದ ದೈವ ಸಂತೃಪ್ತಿಗಾಗಿ ಕಂಚಿಕಲ್ಲಿಗೆ ಕಾಯಿ ಸೇಜನೆಯೊಂದಿಗೆ ಪರಿಸಮಾಪ್ತಿಗೊಂಡಿತು. ಸಾವಿರಾರು ಮಂದಿ ಭಕ್ತರು ನೇಮೋತ್ಸವದಲ್ಲಿ ಪಾಲ್ಗೊಂಡು ಶ್ರೀ ದೈವ ದೇವರ ಕೃಪೆಗೆ ಪಾತ್ರರಾದರು.

15 ಸಾವಿರಕ್ಕೂ ಅಧಿಕ ಮಂದಿ ಭಾಗಿ, ೮ ಸಾವಿರಕ್ಕೂ ಅಧಿಕ ಮಂದಿಗೆ ಅನ್ನಸಂತರ್ಪಣೆ
ರಾಮಜಾಲು ಗರಡಿ ಜಾತ್ರೋತ್ಸವವು ಕಂಕನಾಡಿ ಗರಡಿ ಜಾತ್ರೋತ್ಸವದ ನಂತರದ ಸ್ಥಾನದಲ್ಲಿ ನಡೆಯುವ ಅದ್ಧೂರಿ ನೇಮೋತ್ಸವ ಆಗಿದೆ. ಪ್ರತಿವರ್ಷದಂತೆ ಈ ವರ್ಷವೂ ನೇಮೋತ್ಸವಕ್ಕೆ ಸುಮಾರು ೧೮ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದು ಕಂಡು ಬಂದಿದೆ. ಸುಮಾರು ೯ ಸಾವಿರಕ್ಕೂ ಅಧಿಕ ಮಂದಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.

ಮನರಂಜಿಸಿದ ಶಿವಧೂತ ಗುಳಿಗ ತುಳು ನಾಟಕ
ನೇಮೋತ್ಸವದ ಅಂಗವಾಗಿ ಸಂಜೆ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಮನೋರಂಜನ ನೃತ್ಯಗಳು ನಡೆಯಿತು. ರಾತ್ರಿ ವಿಜಯ ಕುಮಾರ್ ಕೋಡಿಯಾಲ್‌ಬೈಲ್ ನಿರ್ದೇಶನದ ವಿನೂತನ ತುಳು ನಾಟಕ ‘ ಶಿವಧೂತ ಗುಳಿಗೆ’ ನಡೆಯಿತು. ಸಾವಿರಾರು ಮಂದಿ ನಾಟಕ ವೀಕ್ಷಣೆ ಮಾಡಿದರು.

“ ಎಲ್ಲವೂ ದೈವ ದೇವರ ಕೃಪೆ, ನಾನು ಇಲ್ಲಿ ನಿಮಿತ್ತ ಮಾತ್ರ. ರಾಮಜಾಲು ಗರಡಿಯ ಶ್ರೀ ಬ್ರಹ್ಮಬೈದೆರ್ಕಳ ಕೋಟಿ ಚೆನ್ನಯರ ಅನುಗ್ರಹ ಹಾಗೂ ಭಕ್ತಸಮೂಹದ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿದೆ. ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ. ಶ್ರೀ ಬ್ರಹ್ಮಬೈದೆರುಗಳು ಎಲ್ಲರಿಗೂ ಒಳ್ಳೆಯದನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.”
ಕೆ.ಸಂಜೀವ ಪೂಜಾರಿ ಕೂರೇಲು, ಆಡಳಿತ ಮೊಕ್ತೇಸರರು ರಾಮಜಾಲು ಗರಡಿ ಪರ್ಪುಂ

     

LEAVE A REPLY

Please enter your comment!
Please enter your name here