ರಾಷ್ಟ್ರ ಮಟ್ಟದ ಪಂದ್ಯಾಟಕ್ಕೆ ಭರದ ಸಿದ್ಧತೆ..!!!

0

ಜ. 13ರಿಂದ ಉಪ್ಪಿನಂಗಡಿಯಲ್ಲಿ ಬಾಲ್ ಬ್ಯಾಡ್ಮಿಂಟನ್ ಕಲರವ..!!

  •  ಸರ್ಕಾರಿ ಕಾಲೇಜಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಒದಗಿದ ಅವಕಾಶ
  •  ಗುಡ್ಡದಂತಿದ್ದ ಪಾಳುಬಿದ್ದಿದ ಜಾಗ ಇದೀಗ ಬೃಹತ್ ಮೈದಾನ.
  •  6 ಅಂಕಣಗಳಲ್ಲಿ ಪಂದ್ಯಾಟ.
  •  89 ತಂಡಗಳನ್ನೊಳಗೊಂಡಂತೆ 1500 ಮಂದಿ ಕ್ರೀಡಾಪಟುಗಳು ಭಾಗವಹಿಸುವಿಕೆ.
  •  ಪೇಟೆ, ಬೀದಿಯಲ್ಲಿ ಸ್ವಾಗತ ಕಮಾನು, ಅಲಂಕಾರ.
  •  ಪಂದ್ಯಾಟ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ.

ವಿಶೇಷ ವರದಿ/ಚಿತ್ರಗಳು: ಸಿದ್ದಿಕ್ ನೀರಾಜೆ.

ಉಪ್ಪಿನಂಗಡಿ: ಜ. 13ರಿಂದ 17ರ ತನಕ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಖಿಲ ಭಾರತ ಮಟ್ಟದ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯಲಿದ್ದು, ಕಾಲೇಜಿನಲ್ಲಿ ನಿರ್ಮಾಣಗೊಂಡ ಹೊಸ ಮೈದಾನ ಭರದ ಸಿದ್ಧತೆಯೊಂದಿಗೆ ಅಣಿಯಾಗುತ್ತಿದ್ದು, ಕಾಲೇಜಿನ ಸುತ್ತಮುತ್ತ ಖುಷಿ, ಸಂಭ್ರಮದ, ಹಬ್ಬದ ವಾತಾವರಣ ನಿರ್ಮಾಣವಾಗತೊಡಗಿದೆ.

ಕಾಲೇಜು ಆವರಣ ವ್ಯಾಪ್ತಿಯಲ್ಲಿ, ನೇತ್ರಾವತಿ ನದಿ ದಡಕ್ಕೆ ತಾಗಿಕೊಂಡು ಪಾಳು ಬಿದ್ದು ಗುಡ್ಡದಂತಿದ್ದ ಜಾಗ ಇದೀಗ ವಿಶಾಲವಾದ ಕ್ರೀಡಾಂಗಣವಾಗಿ ಕಂಗೊಳಿಸತೊಡಗಿದೆ. ಕಳೆದ 1 ತಿಂಗಳಿಂದ ದಿನಂಪ್ರತಿ 25ಕ್ಕೂ ಅಧಿಕ ವಿದ್ಯಾರ್ಥಿಗಳು ಕೆಲಸ ನಿರ್ವಹಿಸುತ್ತಿದ್ದು, ಬಹುತೇಕ ಕೆಲಸಗಳು ಮುಗಿದ್ದಿದ್ದು, ಅಂಕಣ, ಟ್ರಾಕ್‌ಗಳಿಗೆ ಬಣ್ಣ ಬಳಿಯುವ ಮೊದಲಾದ ಕೊನೇ ಕ್ಷಣದ ಕೆಲಸಗಳು ಮಾತ್ರ ಬಾಕಿ ಉಳಿದಿದ್ದು, ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಮೈದಾನ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಲಿದೆ.

6 ಅಂಕಣದಲ್ಲಿ ಪಂದ್ಯಾಟ:

ಮೈದಾನದಲ್ಲಿ 6 ಅಂಕಣಗಳನ್ನು ನಿರ್ಮಿಸಲಾಗುವುದು. ಈಗಾಗಲೇ ದೇಶದ ವಿವಿಧ ವಿಶ್ವವಿದ್ಯಾನಿಲಯಗಳನ್ನು ಪ್ರತಿನಿಧಿಸುವ ಸುಮಾರು 89 ತಂಡಗಳು ಹೆಸರನ್ನು ನೋಂದಾಯಿಸಿಕೊಂಡಿದೆ. 1000 ಸಾವಿರ ಕ್ರೀಡಾಪಟುಗಳು, 200 ಮಂದಿ ತೀರ್ಪುಗಾರರು, 300 ಮಂದಿ ಅಧಿಕಾರಿಗಳನ್ನೊಳಗೊಂಡಂತೆ ದೇಶದಾದ್ಯಂತದಿಂದ ಒಟ್ಟು 1500 ಮಂದಿ ಪಂದ್ಯಾಟದಲ್ಲಿ ನೇರವಾಗಿ ಭಾಗಿಯಾಗಲಿದ್ದಾರೆ ಎಂದು ಪಂದ್ಯಾಟದ ಸಂಚಾಲಕ, ಕಾಲೇಜಿನ ಕ್ರೀಡಾ ನಿರ್ದೇಶಕ ಪ್ರವೀಣ್ ಕುಮಾರ್ ವಿವರಿಸಿದರು.

ನದಿ ದಡದಲ್ಲಿದೆ, ರಕ್ಷಣೆಗೆ ಆದ್ಯತೆ:

ಪಂದ್ಯಾಟ ನಡೆಯುವ ಮೈದಾನ ನದಿ ದಡದಲ್ಲಿರುವುದರಿಂದ ಈಗಾಗಲೇ ಎಲ್ಲಾ ತಂಡಗಳಿಗೆ ಮತ್ತು ಅದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸ್ವಚ್ಛತೆ ಮತ್ತು ರಕ್ಷಣೆಗೆ ಆದ್ಯತೆ ನೀಡಲಾಗಿದ್ದು, 100 ಮಂದಿ ಸ್ವಯಂ ಸೇವಕರನ್ನು ಮೈದಾನ ಸುತ್ತ ನಿಯೋಜನೆ ಮಾಡಲಾಗುವುದು. 10 ಮಂದಿ ರಾಷ್ಟ್ರ ಮಟ್ಟದ ತಾಂತ್ರಿಕ ಅಧಿಕಾರಿಗಳು, 50 ಮಂದಿ ದೈಹಿಕ ಶಿಕ್ಷಣ ನಿರ್ದೇಶಕರು ಸ್ಥಳದಲ್ಲಿ ಇರಲಿದ್ದಾರೆ ಎಂದು ಅವರು ವಿವರಿಸಿದರು.

ಪಂದ್ಯಾಟಕ್ಕೆ ಆಗಮಿಸುವ ಅಧಿಕಾರಿಗಳಿಗೆ ಉಪ್ಪಿನಂಗಡಿಯ ವಸತಿ ಗೃಹದಲ್ಲಿ ಮತ್ತು ಕ್ರೀಡಾಪಟುಗಳಿಗೆ ಶಾಲಾ ಕಾಲೇಜುಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೋರ್ವ ಆಟಗಾರರಿಗೂ ಬೆಡ್ ವ್ಯವಸ್ಥೆಯನ್ನು ಮಾಡಲಾಗಿದೆ. ಪಂದ್ಯಾಟ ವೀಕ್ಷಣೆಗೆ ಬರುವವರ ವಾಹನವನ್ನು ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಿಲುಗಡೆ ಮಾಡಬಹುದಾಗಿದೆ.

ಒಟ್ಟಿನಲ್ಲಿ ಪಂದ್ಯಾಟ ವ್ಯವಸ್ಥಿತವಾಗಿ ಮತ್ತು ಶಿಸ್ತುಬದ್ಧವಾಗಿ ನಡೆಯುವಂತೆ ಎಲ್ಲಾ ಅಗತ್ಯ ಕ್ರಮ ಅನುಸರಿಸಲಾಗುವುದು ಎಂದರು.

ಕ್ರೀಡಾ ಸಚಿವರಿಂದ ಉದ್ಘಾಟನೆ

ಪಂದ್ಯಾಟ ಜ. 13ರಂದು ಸಂಜೆ ಕರ್ನಾಟಕ ಸರ್ಕಾರದ ಯುವಜನ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣ ಗೌಡ ಉದ್ಘಾಟಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರು ಧ್ವಜಾರೋಹಣ ನೆರವೇರಿಸಲಿದ್ದು, ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ಮತ್ತು ಸಂಸ್ಖೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಮೊದಲಾದವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಸಾರ್ವಜನಿಕರ ಸಹಕಾರ ಅಗತ್ಯ-ಸುಬ್ಬಪ್ಪ ಕೈಕಂಬ

ಸರ್ಕಾರಿ ಕಾಲೇಜಿನ ಇತಿಹಾಸದಲ್ಲೇ ಅದರಲ್ಲೂ ಗ್ರಾಮೀಣ ಭಾಗದ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ನಡೆಸಲು ಅವಕಾಶ ಲಭಿಸಿರುವುದು ಹೆಮ್ಮೆಯ ವಿಚಾರವಾಗಿದ್ದು, ಪಂದ್ಯಾಟ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗುವುದು. ಕಾರ‍್ಯಕ್ರಮದ ಯಶಸ್ವಿಗೆ ಸಾರ್ವಜನಿಕರ ಸಹಕಾರ ಬೇಕಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಸುಬ್ಬಪ್ಪ ಕೈಕಂಬ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here