ಅಬಕಾರಿ ನಿವೃತ್ತ ಇನ್ಸ್‌ಪೆಕ್ಟರ್, ಕಡಬ ತಾ| ಕಸಾಪ ಸದಸ್ಯ ನಾರ್ಣಪ್ಪ ನಾಯ್ಕ್‌ರವರಿಗೆ ನುಡಿನಮನ

0

ರಾಮಕುಂಜ: ಫೆ.19ರಂದು ನಿಧನರಾದ ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸದಸ್ಯ, ನಿವೃತ್ತ ಅಬಕಾರಿ ಇನ್ಸ್‌ಪೆಕ್ಟರ್, ಸವಣೂರು ಪುಣ್ಚಪ್ಪಾಡಿ ನಿವಾಸಿ ಎನ್.ನಾರ್ಣಪ್ಪ ನಾಯ್ಕ್(75ವ.)ರವರಿಗೆ ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನುಡಿನಮನ ಕಾರ್ಯಕ್ರಮ ರಾಮಕುಂಜದಲ್ಲಿರುವ ಕಸಾಪ ಕಡಬ ತಾಲೂಕು ಘಟಕದ ಅಧ್ಯಕ್ಷರ ಕಚೇರಿಯಲ್ಲಿ ಫೆ.21ರಂದು ನಡೆಯಿತು.

ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಸೇಸಪ್ಪ ರೈಯವರು ಮಾತನಾಡಿ, ನಾರ್ಣಪ್ಪ ನಾಯ್ಕ್‌ರವರು ಸರಳ, ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದರು. ಎಲ್ಲರೊಂದಿಗೂ ಆತ್ಮೀಯತೆ ಬೆಳೆಸಿಕೊಂಡಿದ್ದರು. ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದ ಅವರು ಸಾಹಿತ್ಯ ಪರಿಷತ್‌ನ ಎಲ್ಲಾ ಚಟುವಟಿಕೆಗಳಲ್ಲೂ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದು ಸಲಹೆ ಸೂಚನೆ ನೀಡುತ್ತಿದ್ದರು. ಅತ್ಯುತ್ತಮ ಸದಸ್ಯರೋರ್ವರನ್ನು ಸಾಹಿತ್ಯ ಪರಿಷತ್ ಕಳೆದುಕೊಂಡಿದೆ. ಅಕಾಲಿಕವಾಗಿ ಅಗಲಿದ ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ. ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತನು ಅವರ ಮನೆಯವರಿಗೆ, ಕುಟುಂಬಸ್ಥರಿಗೆ ನೀಡಲಿ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಕಡಬ ತಾಲೂಕು ಘಟಕದ ಮಾಜಿ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಕೋಶಾಧ್ಯಕ್ಷ ಬಾಲಚಂದ್ರ ಮುಚ್ಚಿಂತಾಯ, ಕಾರ್ಯಕಾರಿ ಸಮಿತಿ ಸದಸ್ಯರಾದ ಯಶವಂತ ರೈ ಸುಬ್ರಹ್ಮಣ್ಯ, ವೆಂಕಟ್ರಮಣ ನೆಲ್ಯಾಡಿ, ಪುಷ್ಪಾವತಿ ರಾಮಕುಂಜ ಅವರು ಅಗಲಿದ ನಾರ್ಣಪ್ಪ ನಾಯ್ಕ್‌ರವರಿಗೆ ನುಡಿನಮನ ಸಲ್ಲಿಸಿದರು. ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ೧ ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here