ರಾಜ್ಯ ಸರಕಾರಿ ನೌಕರರ ಮುಷ್ಕರ ವಾಪಸ್

0

ಬೆಂಗಳೂರು: 7 ನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹಿಸಿ ರಾಜ್ಯ ಸರಕಾರಿ ನೌಕರರ ಸಂಘ ನೀಡಿರುವ ಕರೆಯಂತೆ ರಾಜ್ಯಾದ್ಯಂತ ಸರಕಾರಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರವನ್ನು ಸರಕಾರ 17 ಶೇ. ವೇತನ ಹೆಚ್ಚಿಸುವ ಬಗ್ಗೆ ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ಹಿಂಪಡೆದಿದೆ.

2022 ಜು.1ರಿಂದ ಜಾರಿಗೆ ಬರುವಂತೆ ಶೇ.40 ರಷ್ಟು ವೇತನ ಹೆಚ್ಚಳ ಮತ್ತು ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕೆಂಬುದು ಸರಕಾರಿ ನೌಕರರ ಬೇಡಿಕೆಯಾಗಿದ್ದು ಕಳೆದ ರಾತ್ರಿ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ನಡೆಸಿದ ಸಂಧಾನ ಸಭೆ ವಿಫಲವಾಗಿತ್ತು. ಇಂದು (ಮಾ.1) ಮುಷ್ಕರ ಆರಂಭಗೊಳ್ಳುತ್ತಿದ್ದಂತೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ 2023 ಎ.1ರಿಂದ ಜಾರಿಗೆ ಬರುವಂತೆ 17ಶೇ. ವೇತನ ಹೆಚ್ಚಿಸುವ ಬಗ್ಗೆ ತಕ್ಷಣ ಆದೇಶ ನೀಡಿದ್ದಲ್ಲದೆ ಹೊಸ ಪಿಂಚಣಿ ಯೋಜನೆ ಬಗ್ಗೆ ಪರಿಶೀಲನೆ ನಡೆಸಲು ಸಮಿತಿ ರಚಿಸುವುದಾಗಿ ಹೇಳಿದ ಹಿನ್ನೆಲೆಯಲ್ಲಿ ಸಭೆ ನಡೆಸಿದ ಸರಕಾರಿ ನೌಕರರ ಸಂಘ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಿಂಪಡೆಯಲು ತೀರ್ಮಾನಿಸಿದೆ.

40 ಶೇ. ವೇತನ ಹೆಚ್ಚಳದ ಬೇಡಿಕೆಯನ್ನು ಶೇ.17 ಕ್ಕಿಳಿಸಿ ಸರಕಾರಿ ನೌಕರರ ಬೇಡಿಕೆಯನ್ನು ಈಡೇರಿಸಿ ಆದೇಶ ನೀಡಿದ ಸರಕಾರ ಪ್ರತಿಫಲವಾಗಿ ಭ್ರಷ್ಟಾಚಾರ ರಹಿತ ಸೇವೆ ನೀಡುವುದಾಗಿ ಸರಕಾರಿ ನೌಕರರಿಂದ ಮುಚ್ಚಳಿಕೆ ಪಡೆದುಕೊಳ್ಳಬೇಕು ಎಂಬ ಕೂಗು ಸಾರ್ವಜನಿಕರಿಂದ ಸಾಂದರ್ಭಿಕವಾಗಿ ಕೇಳಿಬಂದಿದೆ.

LEAVE A REPLY

Please enter your comment!
Please enter your name here