ರೂ.10 ಲಕ್ಷ ಕಿತ್ತೊಯ್ದ ಪ್ರಕರಣ: ಓರ್ವನ ಬಂಧನ 9 ಲಕ್ಷ ರೂ. ವಶ

0

ಉಪ್ಪಿನಂಗಡಿ: ಮಗಳ ಮದುವೆಗೆ ಚಿನ್ನಾಭರಣ ಖರೀದಿಸಲೆಂದು ದ್ವಿಚಕ್ರ ವಾಹನದಲ್ಲಿ ಹತ್ತು ಲಕ್ಷ ರೂಪಾಯಿ ನಗದು ಹಣ ಕೊಂಡೊಯ್ಯುತ್ತಿದ್ದ ವೇಳೆ ಅಪರಿಚಿತ ಯುವಕನೋರ್ವ ಹಣದ ಕಟ್ಟನ್ನು ಕಿತ್ತೊಯ್ದ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಆತನಿಂದ 9 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ.

ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಇಳಂತಿಲ ಗ್ರಾಮದ ಪೆದಮಲೆಯ ಸರಳೀಕಟ್ಟೆ ರಸ್ತೆಯಲ್ಲಿ ಕಳೆದ ಸೋಮವಾರದಂದು ಈ ಪ್ರಕರಣ ಸಂಭವಿಸಿತ್ತು. ಇಳಂತಿಲ ಗ್ರಾಮದ ಕಾಯರ್ಪಾಡಿ ಮನೆ ನಿವಾಸಿ 60 ವರ್ಷ ಪ್ರಾಯದ ಮಹಮ್ಮದ್ ಕೆ. ಎಂಬವರು ತನ್ನ ಮಗಳ ಮದುವೆಗೆಂದು ಸಂಗ್ರಹಿಸಿಟ್ಟಿದ್ದ ಹತ್ತು ಲಕ್ಷ ರೂ. ಹಣವನ್ನು ಚಿನ್ನಾಭರಣ ಖರೀದಿಸುವ ಸಲುವಾಗಿ ಪ್ಲ್ಯಾಸ್ಟಿಕ್ ಚೀಲವೊಂದರಲ್ಲಿ ಹಾಕಿ ಪೆದಮಲೆ – ಸರಳೀಕಟ್ಟೆ ರಸ್ತೆಯ ರಿಫಾಯಿನಗರ ಎಂಬಲ್ಲಿ ನಿಲ್ಲಿಸಿದ್ದ ತನ್ನ ದ್ವಿಚಕ್ರ ವಾಹನದ ಸೀಟಿನ ಅಡಿಯಲ್ಲಿ ಇಡಲೆತ್ನಿಸುವಾಗ ಹಿಂಬದಿಯಿಂದ ಬಂದ ಅಪರಿಚಿತ ವ್ಯಕ್ತಿಯೋರ್ವ ಮಿಂಚಿನಂತೆ ಬಂದು ಅವರ ಕೈಯಲ್ಲಿದ್ದ ಹಣದ ಕಟ್ಟನ್ನು ಕಿತ್ತುಕೊಂಡು ಓಡಿ ಪರಾರಿಯಾಗಿದ್ದ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಉಪ್ಪಿನಂಗಡಿ ಪೊಲೀಸರು ವೃತ್ತ ನಿರೀಕ್ಷಕ ರವಿ ಬಿ.ಎಸ್. ನೇತೃತ್ವದಲ್ಲಿ ತನಿಖೆ ನಡೆಸಿ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಪೈಕಿ ಇಳಂತಿಲ ಗ್ರಾಮದ ಕಡವಿನಬಾಗಿಲು ಮನೆ ನಿವಾಸಿ ಅಬ್ದುಲ್ ಖಾದ್ರಿ ಎಂಬವರ ಮಗ ಮುಸ್ತಾಫ (41) ಎಂಬಾತನನ್ನು ಗುರುವಾರದಂದು ಬಂಧಿಸಿ ಆತ ಎರಡು ಕಡೆಗಳಲ್ಲಿ ಅಡಗಿಸಿಟ್ಟಿದ್ದ 9 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದ ಇನ್ನೋರ್ವ ಆರೋಪಿಯು ಒಂದು ಲಕ್ಷ ರೂಪಾಯಿಯೊಂದಿಗೆ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸ್ ಕಾರ್ಯಾಚರಣೆ ಮುಂದುವರೆದಿದೆ.

ದೈವಕ್ಕೆ ನೀಡಿದ ಹರಕೆ ಫಲಿಸಿತೇ

ಬರೋಬ್ಬರಿ ಹತ್ತು ಲಕ್ಷ ರೂ. ಹಣವನ್ನು ಹಾಡ ಹಗಲೇ ಕಿತ್ತೊಯ್ದ ಪ್ರಕರಣ ಸಮಾಜದಲ್ಲಿ ಅಭದ್ರತೆಯ ಭಾವನೆಯನ್ನು ಮೂಡಿಸುತ್ತಿದ್ದಂತೆಯೇ, ಹಣವನ್ನು ಕಿತ್ತೊಯ್ದ ತಂಡವನ್ನು ಪತ್ತೆ ಹಚ್ಚಲು ಹಾಗೂ ಹಣವನ್ನು ಮರಳಿ ದೊರಕಿಸಿಕೊಡುವಂತಾಗಲು ತಂಡವೊಂದು ಉಪ್ಪಿನಂಗಡಿಯ ಕಡವಿನ ಕಲ್ಕುಡ ಎಂದೇ ಪ್ರಖ್ಯಾತವಾಗಿರುವ ಕಡವಿನಬಾಗಿಲು ಶ್ರೀ ಕಲ್ಕುಡ ದೈವ ಸ್ಥಾನದಲ್ಲಿ ಮಂಗಳವಾರದಂದು ಪ್ರಾರ್ಥನೆ ಸಲ್ಲಿಸಿದ್ದರು. ದೈವದ ಕೃಪೆಯೋ ಎಂಬಂತೆ ಹಣ ಕಿತ್ತೊಯ್ದ ತಂಡದ ಸುಳಿವು ಅದೇ ದಿನ ಪೊಲೀಸರಿಗೆ ಲಭಿಸಿ, ತನಿಖೆಯಲ್ಲಿ ಪ್ರಗತಿ ಸಾಧಿಸಲ್ಪಟ್ಟು ಇದೀಗ ಒರ್ವ ಆರೋಪಿಯು ಪೊಲೀಸರ ವಶವಾಗಿ ಕಿತ್ತೊಯ್ಯಲ್ಪಟ್ಟ ಹಣದಲ್ಲಿ ಗರಿಷ್ಟ ಮೊತ್ತದ ಹಣ ದೊರೆತಂತಾಗಿದೆ ಎಂದು ಕಲ್ಕುಡ ದೈವಸ್ಥಾನದ ಪ್ರಧಾನ ಪೂಜಾಕರ್ತೃ ಐ. ಚಂದ್ರಶೇಖರ್ ನಾಯಕ್‌ರವರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ದೈವಸ್ಥಾನದಲ್ಲಿ ಸಮಾಜದ ಎಲ್ಲಾ ಮತೀಯರೂ ಹರಕೆ ಪ್ರಾರ್ಥನೆ ಸಲ್ಲಿಸುತ್ತಿರುವುದು ಸಾಮಾನ್ಯವಾಗಿದೆ.

LEAVE A REPLY

Please enter your comment!
Please enter your name here