ಸುಳ್ಯ ‘ಕೈ’ ಅಭ್ಯರ್ಥಿ ಆಯ್ಕೆ ಗೊಂದಲ; ಪಕ್ಷದ ಆದೇಶ ಪಾಲಿಸಲು ಬದ್ಧ: ಕಡಬ ಬ್ಲಾಕ್ ಕಾಂಗ್ರೆಸ್ ಸ್ಪಷ್ಟನೆ

0

ಕಡಬ: ಕಾಂಗ್ರೆಸ್ ಪಕ್ಷ ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಜಿ. ಕೃಷ್ಣಪ್ಪ ಅವರನ್ನು ಘೋಷಣೆ ಮಾಡಿದ್ದು, ಯಾರೂ ಏನೇ ಹೇಳಿದರೂ ಅವರೇ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ. ಪಕ್ಷದ ಆದೇಶ ಪಾಲಿಸಲು ನಾವೆಲ್ಲರೂ ಬದ್ಧ ಎಂದು ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಅವರು ಗುರುವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕೃಷ್ಣಪ್ಪ ಅವರನ್ನು ಪಕ್ಷ ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಿದೆ. ಗೊಂದಲಗಳನ್ನು ಸರಿಪಡಿಸಿಕೊಂಡು ಕೃಷ್ಣಪ್ಪ ಅವರನ್ನು ನಾವು ಗೆಲ್ಲಿಸಿ ವಿಧಾನ ಸಭೆಗೆ ಕಳುಹಿಸುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಕೃಷ್ಣಪ್ಪ ಅವರು ಕಳೆದ ಎಂಟು ವರ್ಷಗಳಿಂದ ಸುಳ್ಯ ವಿಧಾನಸಭಾ ಕ್ಷೇತ್ರಾದ್ಯಂತ ಓಡಾಟ ಮಾಡಿ ಕ್ಷೇತ್ರದ ಪ್ರತೀ ಬೂತ್‌ನಲ್ಲಿಯೂ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರುಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ಪಕ್ಷ ಬಲವರ್ಧನೆ ಮಾಡುತ್ತಾ ಬಂದಿದ್ದಾರೆ. ಕೊರೋನಾ ಸಂದರ್ಭದಲ್ಲಿ ಜಾತಿ ಮತ ನೋಡದೆ ದಿನಸಿ ಕಿಟ್ ವಿತರಣೆ ಮಾಡಿದ್ದಾರೆ. ಸುಬ್ರಹ್ಮಣ್ಯ, ಹರಿಹರ ಪಲ್ಲತಡ್ಕ, ಕೊಲ್ಲಮೊಗ್ರು ಮುಂತಾದೆಡೆ ಪ್ರಾಕೃತಿಕ ವಿಕೋಪದಲ್ಲಿ ಭೂಕುಸಿತ ಉಂಟಾದಾಗ ಕೃಷ್ಣಪ್ಪ ಅವರು ಜನರ ನೆರವಿಗೆ ಬಂದಿದ್ದಾರೆ. ನೂರಾರು ಕುಟುಂಬಗಳಿಗೆ ನೆರವಿನ ಹಸ್ತ ನೀಡಿದ್ದಾರೆ. ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಪಕ್ಷ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ . ಈ ಎಲ್ಲಾ ಹಿನ್ನೆಲೆಯಲ್ಲಿ ಹೈಕಮಾಂಡ್ ಅವರಿಗೆ ಟಿಕೆಟ್ ನೀಡಿದೆ ಎಂದು ಅವರು ಅಭಿಪ್ರಾಯಪಟ್ಟರು. ನಂದಕುಮಾರ್ ಅಭಿಮಾನಿಗಳು ಅಭ್ಯರ್ಥಿ ಬದಲಾವಣೆ ಮಾಡಬೇಕೆಂದು ಪಕ್ಷದ ಮುಖಂಡರಿಗೆ ಮನವಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸುಧೀರ್ ಕುಮಾರ್‌ರವರು ಕ್ಷೇತ್ರದಲ್ಲಿ ಅನೇಕ ಆಕಾಂಕ್ಷಿಗಳು ಇದ್ದಾರೆ. ನಂದಕುಮಾರ್ ಕೂಡಾ ಆಕಾಂಕ್ಷಿಯಾಗಿದ್ದರು. ಟಿಕೆಟ್ ಸಿಗದೇ ಇದ್ದಾಗ ಅಸಮಾಧಾನ ಸಹಜ. ಆದರೆ ಯಾರೂ ಪಕ್ಷ ವಿರೋಧಿ ಕೆಲಸ ಮಾಡುತ್ತಿಲ್ಲ, ಗೊಂದಲಗಳನ್ನು ಸರಿಪಡಿಸುವ ಶಕ್ತಿ ಪಕ್ಷಕ್ಕಿದೆ. ಅಭ್ಯರ್ಥಿ ಘೋಷಣೆ ಮಾಡಿದ ಬಳಿಕ ನಾವು ಅಭ್ಯರ್ಥಿಯ ಗೆಲುವಿಗೆ ಒಟ್ಟಾಗಿ ಶ್ರಮಿಸುತ್ತೇವೆ. 28 ವರ್ಷಗಳಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿಲ್ಲದ ಕೊರಗನ್ನು ಈ ಬಾರಿ ನೀಗಿಸುತ್ತೇವೆ ಎಂದು ಸುಧೀರ್‌ಕುಮಾರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ ನೆಲ್ಯಾಡಿ, ಸತೀಶ್ ನಾಯ್ಕ್ ಮೇಲಿನಮನೆ, ಕೆ.ಪಿ.ತೋಮಸ್, ಎಚ್.ಆದಂ, ದಿವಾಕರ ಗೌಡ ಶಿರಾಡಿ, ರೋಯಿ ಅಬ್ರಹಾಂ, ಮಾಧವ ಪೂಜಾರಿ, ಬಾಬು ಮುಗೇರ, ಅಝೀಝ್ ಕೋಲ್ಪೆ ಮತ್ತಿತರರು ಉಪಸ್ಥಿತರಿದ್ದರು.

ಪಕ್ಷ ಅವಕಾಶ ಕಲ್ಪಿಸಿದೆ: ಘೋಷಿತ ಅಭ್ಯರ್ಥಿ ಜಿ.ಕೃಷ್ಣಪ್ಪ ಮಾತನಾಡಿ, ನಾನೇನು ಹೊರಗಿನವನಲ್ಲ. ನಾನು ಸುಳ್ಯ ವಿಧಾನಸಭಾ ‌ಕ್ಷೇತ್ರದ ರಾಮಕುಂಜದಲ್ಲಿ ವಾಸ್ತವ್ಯವಿದ್ದೇನೆ. ನನ್ನ ಪತ್ನಿಯ ತವರುಮನೆ ಕ್ಷೇತ್ರದ ರಾಮಕುಂಜದಲ್ಲಿದೆ. ಪಕ್ಷ ನನಗೆ ಜವಾಬ್ದಾರಿ ನೀಡಿದ ಬಳಿಕ ಕ್ಷೇತ್ರದಲ್ಲಿ ವಿವಿಧ ಚುನಾವಣೆಗಳ ಸಂದರ್ಭದಲ್ಲಿ ಪಕ್ಷದ ಪರವಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಆಲಂಕಾರಿನಿಂದ ಕಡಬ ತನಕ ನಡೆದ ಕಾಂಗ್ರೆಸ್ ಕಾಲ್ನಡಿಗೆ ಯಾತ್ರೆಯನ್ನು ಅತ್ಯಂತ ಯಶಸ್ವಿಯಾಗಿ ಮಾಡಲಾಗಿದೆ. ಭಾರತ್ ಜೋಡೋ ಕಾರ್ಯಕ್ರಮ ಕೂಡ ಜಿಲ್ಲೆಯಲ್ಲೇ ಹೆಚ್ಚು ಪರಿಣಾಮಕಾರಿಯಾಗಿ ಕ್ಷೇತ್ರದಲ್ಲಿ ನಡೆದಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯಾಧ್ಯಕ್ಷರಾಗಿದ್ದಾಗ ಅವರು ನೀಡಿದ ರಾಜ್ಯ ಮಟ್ಟದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಈಗ ಸುಳ್ಯ ವಿಧಾನ ಸಭೆಗೆ ಸ್ಪರ್ಧಿಸಲು ಪಕ್ಷ ಅವಕಾಶ ಕಲ್ಪಿಸಿದೆ. ನನ್ನನ್ನು ಗೆಲ್ಲಿಸಿ ಕ್ಷೇತ್ರದ ಸೇವೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

LEAVE A REPLY

Please enter your comment!
Please enter your name here