ರಜೆಯ ಮಜಾ ಮಕ್ಕಳ ಮೇಲೆ ಇರಲಿ ನಿಗಾ ಮಕ್ಕಳ ಆಟ ತಾರದಿರಲಿ ಹೆತ್ತವರಿಗೆ ಸಂಕಟ

0

ಯೂಸುಫ್ ರೆಂಜಲಾಡಿ

ಪುತ್ತೂರು: ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಸಿಕ್ಕಿದೆ. ರಜೆ ಸಿಕ್ಕರೆ ಸಾಕು ಮಕ್ಕಳು ಹೆತ್ತವರ ಕೈಗೆ ಸಿಗುವುದಿಲ್ಲ. ಇತರೆ ಮಕ್ಕಳೊಂದಿಗೆ ಆಟದಲ್ಲಿ ನಿರತರಾಗಿರುತ್ತಾರೆ. ಆಟವಾಡಿದರೆ ಪರವಾಗಿಲ್ಲ ಆದರೆ ಆಟವಾಡಲು ತೆರಳಿ ಜೀವಕ್ಕೆ ಅಪಾಯವಾಗದೇ ಇರಲಿ ಎಂಬ ಉದ್ದೇಶಕ್ಕಾಗಿ ರಜೆಯ ಮಜಾದಲ್ಲಿರುವ ಮಕ್ಕಳ ಮೇಲೆ ಹೆತ್ತವರ ಕಣ್ಣು ಇರಬೇಕಾಗಿದೆ. ಅಪಾಯ ಯಾವುದು ಎಂಬುವುದು ಮುಗ್ದ ಮಕ್ಕಳಿಗೆ ಗೊತ್ತಿರುವುದಿಲ್ಲ, ನಾವು ಆಡಿದ್ದೇ ಆಟ, ಮಾಡಿದ್ದೇ ಸಾಹಸ, ಎಂಬ ಮನಸ್ಸು ಮಕ್ಕಳದ್ದು. ಮಕ್ಕಳಾಟಿಕೆ ಕೆಲವೊಮ್ಮೆ ಜೀವಕ್ಕೆ ಅಪಾಯವನ್ನು ತಂದೊಡ್ಡಿದ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇದೆ.

ಹೊಳೆ ಬದಿಗೆ ತೆರಳದಂತೆ ಎಚ್ಚರವಹಿಸಿ ಬೇಸಿಗೆಯಲ್ಲಿ ಹೊಳೆ ನದಿಗಳಲ್ಲಿ ನೀರು ಕಡಿಮೆಯಾಗಿರುತ್ತದೆ. ಮಕ್ಕಳು ಸ್ನಾನ ಮಾಡಲು ಅಥವಾ ನೀರಾಟ ಆಡಲು ಹೊಳೆಗೆ ಇಳಿಯುವ ಸಾಧ್ಯತೆ ಹೆಚ್ಚು. ಹೊಳೆಯಲ್ಲಿ ನೀರು ಹರಿಯುತ್ತಿರುವಾಗ ಸ್ನಾನ ಮಾಡಲೆಂದು ಮಕ್ಕಳು ನೀರಿಗೆ ಇಳಿದಾಗ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ನೀರು ಕಡಿಮೆ ಇರುವ ಹೊಳೆಗಳಲ್ಲಿಯೂ ಅಲ್ಲಲ್ಲಿ ನೀರು ಶೇಖರಣೆಯಗಿರುತ್ತದೆ. ನೀರು ಶೇಖರಣೆಯಾದ ಜಾಗದಲ್ಲಿ ಕಯ ಅಥವಾ ಭಾರೀ ಗಾತ್ರದ ಗುಂಡಿಗಳಿರುವ ಬಗ್ಗೆ ಮಕ್ಕಳಿಗೆ ಪರಿಜ್ಞಾನ ಇರುವುದಿಲ್ಲ ಇದಕ್ಕಾಗಿ ಮಕ್ಕಳನ್ನು ನದಿ ಹಾಗೂ ಹೊಳೆ ಬದಿಗೆ ತೆರಳದಂತೆ ಪೋಷಕರು ಎಚ್ಚರಿಕೆ ವಹಿಸುವುದು ಅತೀ ಅಗತ್ಯ.

ಆಪತ್ತು ತಾರದಿರಲಿ ಮಕ್ಕಳ ಉಯ್ಯಾಲೆಯಾಟ: ಗ್ರಾಮೀಣ ಪ್ರದೇಶದಲ್ಲಿ ರಜೆಯಲ್ಲಿ ಮಕ್ಕಳು ಮನೆಯ ಬಳಿ ಇರುವ ಮರಗಳಿಗೆ ಹಗ್ಗದ ಉಯ್ಯಾಲೆಯನ್ನು ಹಾಕಿ ಜೋಕಾಲಿ ಆಡುತ್ತಾರೆ. ಹಲವು ಮಕ್ಕಳು ಸೇರಿ ಜೋಕಾಲಿಯಾಟವಾಡುವ ವೇಳೆ ಕೆಲವೊಮ್ಮೆ ಉಯ್ಯಾಲೆಯ ಹಗ್ಗ ಮಕ್ಕಳ ಕುತ್ತಿಗೆಗೋ, ಕೈಕಾಲುಗಳಿಗೋ ಸಿಲುಕಿ ಅಪಾಯವನ್ನು ತಂದೊಡ್ಡಬಹುದು. ಮಕ್ಕಳು ಉಯ್ಯಾಲೆಯಾಡುವಾಗಲೂ ಅದರ ಮೇಲೊಂದು ಪೋಷಕರ ಕಣ್ಣಿರಲಿ. ಉಯ್ಯಾಲೆ ಆಟ ಎಂಬ ನಿರ್ಲಕ್ಷ್ಯ ಖಂಡಿತಾ ಬೇಡ. ಅನೇಕ ಮಕ್ಕಳ ಜೀವವನ್ನು ಇದೇ ಉಯ್ಯಾಲೆ ಆಟ ಬಲಿ ಪಡೆದುಕೊಂಡ ನಿದರ್ಶನಗಳಿವೆ.

ಸೈಕಲ್ ಸವಾರಿ ಬಗ್ಗೆಯೂ ನಿಗಾ ಇರಲಿ: ಮನೆಯಲ್ಲಿ ಸೈಕಲ್ ಇದ್ದರೆ ಅದನ್ನು ರಸ್ತೆ ಮೇಲೆ ಚಲಾಯಿಸಿಕೊಂಡು ಹೋಗುವ ಮಕ್ಕಳೂ ಇದ್ದಾರೆ. ರಸ್ತೆಗೆ ತೆರಳಿದರೆ ಇತರೆ ವಾಹನಗಳು ಬರುವಾಗ ಅಪಾಯ ಸಂಭವಿಸುವ ಸಾದ್ಯತೆ ಇದೆ. ಮಾತ್ರವಲ್ಲದೇ ಎದುರಿನಿಂದ ಬರುವ ವಾಹನಗಳಿಗೆ ಯಾವ ಬದಿಯಲ್ಲಿ ಸೈಡ್ ಕೊಡಬೇಕೆಂದು ಅನೇಕ ಮಕ್ಕಳಿಗೆ ಗೊತ್ತಿರುವುದಿಲ್ಲ, ಇದೆಲ್ಲವೂ ಅಪಘಾತಕ್ಕೆ ಕಾರಣವಾಗುತ್ತದೆ, ಹಾಗಾಗಿ ಮಕ್ಕಳು ರಸ್ತೆಯಲ್ಲಿ ಸೈಕಲ್ ಸವಾರಿ ಮಾಡುವ ವಿಚಾರದಲ್ಲೂ ಪೋಷಕರು ನಿಗಾವಹಿಸುವುದು ಅತ್ಯಗತ್ಯವಾಗಿದೆ.

ನೆಂಟರ ಮನೆಗೆ ಕಳಿಸುವಾಗಲೂ ಎಚ್ಚರ: ರಜೆಯಲ್ಲಿ ಮಕ್ಕಳು ನೆಂಟರ ಮನೆಗೆ ಹೋಗುವ ಪರಿಪಾಠ ಬಹುತೇಕ ಕಡೆಗಳಲ್ಲಿದೆ. ನೆಂಟರ ಮನೆಗೆ ನಿಮ್ಮ ಮಕ್ಕಳನ್ನು ಮಾತ್ರ ಕಳುಹಿಸಬೇಡಿ. ಮಕ್ಕಳ ಜೊತೆ ಪೋಷಕರೂ ತೆರಳಬೇಕು. ಮಕ್ಕಳು ರಜೆಯ ಮಜಾವನ್ನು ಅನುಭವಿಸಬೇಕಾದರೆ ಜೊತೆಗೆ ಪೋಷಕರು ಇದ್ದರೇನೇ ಚೆಂದ. ಪೋಷಕರು ತಮ್ಮ ಬಳಿ ಇಲ್ಲದೇ ಇದ್ದರೆ ಅವರ ಲೋಕವೇ ಬೇರೆಯಾಗಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಮಕ್ಕಳು ಮೊಬೈಲ್‌ಗೆ ಜೋತು ಬಿದ್ದಿದ್ದು ಪೋಷಕರ ಯಾ ಮನೆಯವರ ಮೊಬೈಲ್‌ನಲ್ಲೇ ಮಕ್ಕಳು ತಲ್ಲೀನರಾಗುತ್ತಾರೆ. ಹೆಚ್ಚು ಮೊಬೈಲ್ ಬಳಕೆಯೂ ಮಕ್ಕಳಿಗೆ ಒಳ್ಳೆಯದಲ್ಲ. ಈ ಬಗ್ಗೆಯೂ ಪೋಷಕರ ಎಚ್ಚರಿಕೆ ಅಗತ್ಯ.

ಮಕ್ಕಳ ಮೇಲೆ ಕಣ್ಣಿಡಿ:

ರಜೆ ಸಿಕ್ಕಿದೆಯಲ್ಲಾ ಮಕ್ಕಳು ಮಜಾ ಮಾಡಲಿ ಎಂದು ಅವರನ್ನು ಹಾಗೇ ಬಿಟ್ಟು ಬಿಡಬೇಡಿ. ಮಕ್ಕಳ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಮಕ್ಕಳು ಮನೆಯಿಂದ ಹೊರಗಡೆ ಆಟವಾಡಲು ತೆರಳಿದಲ್ಲಿ ಅವರನ್ನು ವಿಚಾರಿಸುತ್ತಲೇ ಇರಿ. ನನ್ನ ಮಗ ಅಥವಾ ಮಗಳು ‘ಅಂಥವರಲ್ಲ’ ಎಂದು ಪೂರ್ಣವಾಗಿ ನಂಬಬೇಡಿ. ಮಕ್ಕಳು ಇತರ ಮಕ್ಕಳೊಂದಿಗೆ ಸೇರಿದರೆ ಎಲ್ಲಾ ಮಕ್ಕಳೂ ಒಂದೇ ಆಗಿಬಿಡುತ್ತದೆ. ನಾವು ಮಾಡುತ್ತಿರುವುದು ತಪ್ಪು, ಅಪಾಯಕಾರಿ ಕಾರ್ಯ ಎಂಬುದು ಮಕ್ಕಳಿಗೆ ಪರಿಜ್ಞಾನವೇ ಇರುವುದಿಲ್ಲ. ಘಟನೆ ನಡೆದ ಮೇಲೆಯೇ ಮಕ್ಕಳ ತಪ್ಪಿನ ಅರಿವಾಗುತ್ತದೆ. ಈ ವಿಚಾರದಲ್ಲಿ ಪೋಷಕರು ಮಕ್ಕಳಿಗೆ ಏನೇ ನೀತಿ ಪಾಠ ಹೇಳಿದರೂ ಅದನ್ನು ಕೇಳುವ ಪ್ರಾಯ ಮಕ್ಕಳದ್ದಲ್ಲ. ಮಕ್ಕಳಿಗೆ ತುಂಟಾಟ ಪ್ರಾಯದಲ್ಲಿ ನಿಮ್ಮ ಯಾವ ಸಲಹೆ ಸೂಚನೆಗಳೂ ನಗಣ್ಯ. ಮಕ್ಕಳು ಎಷ್ಟೇ ಬುದ್ದಿವಂತರಾದರೂ ಅವರ ಮೇಲೆ ನಿಮ್ಮ ಕಣ್ಣಿರಲಿ. ಮಿಂಚಿ ಹೋದ ಮೇಲೆ ಚಿಂತಿಸಿ ಫಲವಿಲ್ಲ.

LEAVE A REPLY

Please enter your comment!
Please enter your name here