ಕಡಬ ಕಾಡಾನೆ ದಾಳಿಗೆ ಅಮಾಯಕರಿಬ್ಬರು ಬಲಿಯಾದ ಘಟನೆ ಬಳಿಕದ ಬೆಳವಣಿಗೆ : ಅಧಿಕಾರಿಗಳೊಂದಿಗೆ ವಾಗ್ವಾದ ಕರ್ತವ್ಯಕ್ಕೆ ಅಡ್ಡಿ, ಕೊಲೆಗೆ ಯತ್ನ ಪ್ರಕರಣ -ಮೂವರಿಗೆ ನಿರೀಕ್ಷಣಾ ಜಾಮೀನು

0

ಪುತ್ತೂರು:ಎರಡು ತಿಂಗಳ ಹಿಂದೆ ಕಡಬ ರೆಂಜಿಲಾಡಿ ಮೀನಾಡಿ ಸಮೀಪದ ನೈಲ ಎಂಬಲ್ಲಿ ಕಾಡಾನೆಯೊಂದು ಅಮಾಯಕರಿಬ್ಬರನ್ನು ಬಲಿತೆಗೆದುಕೊಂಡ ನಂತರದ ಬೆಳವಣಿಗೆಯಲ್ಲಿ ಸೆರೆ ಹಿಡಿಯಲಾದ ಕಾಡಾನೆಯೊಂದನ್ನು ಕೊಂಡೊಯ್ಯುವುದಕ್ಕೆ ಆಕ್ಷೇಪಿಸಿದ ನಾಗರಿಕರ ಗುಂಪೊಂದು, ಎಲ್ಲ ಕಾಡಾನೆಗಳನ್ನೂ ಸೆರೆಹಿಡಿದು ಕೊಂಡೊಯ್ಯುವಂತೆ ಹೇಳಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ ಅರಣ್ಯ, ಪೊಲೀಸ್ ಇಲಾಖಾ ವಾಹನಗಳಿಗೆ ಕಲ್ಲು ತೂರಾಟ ಮಾಡಿ ಹಾನಿ ಉಂಟು ಮಾಡಿದ್ದಲ್ಲದೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಮೂವರು ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಘಟನೆಗೆ ಸಂಬಂಧಿಸಿದಂತೆ ಉಮೇಶ್ ಕಮರ್‌ಕಜೆ, ರಾಜೇಶ್ ಕನಡ ಕಮರ್‌ಕಜೆ, ಜನಾರ್ದನ ರೈ ಕೊಲ್ಯ, ಕೋಕಿಲ ಕಮರ್‌ಕಜೆ, ತೀರ್ಥಕುಮಾರ ಕೋಲ್ಪೆ, ಗಂಗಾಧರ ಗೌಡ ಬಾರ್ಯ ಸಿರಿಬಾಗಿಲು ಮತ್ತು ಅಜಿತ್ ಕುಮಾರ್ ರೆಂಜಾಳ ಎಂಬವರನ್ನು ಕಡಬ ಪೊಲೀಸರು ಬಂಧಿಸಿದ್ದರು.

ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳನ್ನು ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿತ್ತು.ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವರಾಮ, ರಕ್ಷಿತ್ ಬಿ ಮತ್ತು ಉದಯ ಎಂಬವರಿಗೆ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಆರೋಪಿಗಳ ಪರ ವಕೀಲ ಮಹೇಶ್ ಕಜೆ ಅವರು ವಾದಿಸಿದ್ದರು.

ರೆಂಜಿಲಾಡಿ ನೈಲದಲ್ಲಿ ಫೆ.20ರಂದು ಬೆಳ್ಳಂಬೆಳಗ್ಗೆ ಕಾಡಾನೆಯೊಂದು ದಾಳಿ ನಡೆಸಿ ಪೇರಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ರಂಜಿತಾ ರೈ ಮತ್ತು ನೈಲ ರಮೇಶ್ ರೈ ಎಂಬವರು ಮೃತಪಟ್ಟಿದ್ದರು.ಆನೆ ದಾಳಿ ನಡೆಸಿ ಅಮಾಯಕರಿಬ್ಬರನ್ನು ಬಲಿ ತೆಗೆದುಕೊಂಡ ನಂತರದ ಬೆಳವಣಿಗೆಯಲ್ಲಿ ಪರಿಸರದ ನಾಗರಿಕರು ಆತಂಕದಿಂದಲೇ ದಿನ ಕಳೆಯುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ವಿಚಾರ ವಿಧಾನಸಭಾ ಅಧಿವೇಶದನದಲ್ಲಿಯೂ ಪ್ರಸ್ತಾಪವಾಗಿತ್ತು.ಈ ಭಾಗದಲ್ಲಿ ಕಳೆದ ಹಲವು ಸಮಯಗಳಿಂದ ಕಾಡಾನೆ ಉಪಟಳದಿಂದ ಜನ ನೆಮ್ಮದಿ ಕಳೆದುಕೊಂಡು ಭಯದಿಂದಲೇ ಬದುಕುವಂತಹ ಸ್ಥಿತಿ ನಿರ್ಮಾಣವಾಗಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವಿರುದ್ಧ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದರು ಮಾತ್ರವಲ್ಲದೆ ಕಾಡಾನೆಗಳನ್ನು ಸೆರೆ ಹಿಡಿದು ಕೊಂಡೊಯ್ಯುವಂತೆ ಒಕ್ಕೊರಳ ಆಗ್ರಹ ವ್ಯಕ್ತಪಡಿಸಿದ್ದರು.ಕೊನೆಗೂ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭಗೊಂಡಿತ್ತಲ್ಲದೆ ನರಹಂತಕ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ತಂಡ ಯಶಸ್ವಿಯಾಗಿತ್ತು.

ಫೆ.23ರಂದು ರಾತ್ರಿ ಕೊಂಬಾರು ಗ್ರಾಮದ ಮಂಡೆಕರ ಸಮೀಪದ ಮೂಜೂರು ಅರಣ್ಯ ಪ್ರದೇಶದಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು.ಅದೇ ದಿನ ರಾತ್ರಿ 9 ಗಂಟೆ ಸುಮಾರಿಗೆ ಕಾಡಾನೆಯನ್ನು ದುಬಾರೆ ಆನೆ ಬಿಡಾರಕ್ಕೆ ಬಿಟ್ಟು ಬರಲು ಕಾರ್ಯಾಚರಣಾ ತಂಡ ಮುಂದಾದಾಗ ನಾಗರಿಕರ ಗುಂಪೊಂದು ಕಾಡಾನೆಯಿದ್ದ ಲಾರಿಯನ್ನು ತಡೆಹಿಡಿದು ನಿಲ್ಲಿಸಿ, ಹಿಡಿದಿರುವ ಆನೆಯನ್ನು ಇಲ್ಲಿಯೇ ನಿಲ್ಲಿಸಿ ಇತರ ಕಾಡಾನೆಗಳನ್ನೂ ಸೆರೆ ಹಿಡಿದು ಒಟ್ಟಿಗೇ ಎಲ್ಲಾ ಆನೆಗಳನ್ನು ಕೊಂಡು ಹೋಗಬೇಕು ಎಂದು ಹೇಳಿ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದಿದ್ದರು.

ಸೆರೆ ಹಿಡಿದ ಕಾಡಾನೆಯನ್ನು ಹೆಚ್ಚು ಸಮಯ ಲಾರಿಯಲ್ಲಿ ನಿಲ್ಲಿಸಲು ಆಗುವುದಿಲ್ಲವಾದ್ದರಿಂದ ನಾವು ಮೊದಲು ಹಿಡಿದ ಆನೆಯನ್ನು ಬಿಟ್ಟು ಬಂದು ಉಳಿದ ಆನೆಗಳನ್ನೂ ಸೆರೆಹಿಡಿಯವುದಾಗಿ ಅಧಿಕಾರಿಗಳು ಹೇಳಿದರೂ ಕೇಳದ ಕೆಲವರು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದಿದ್ದರು.ಪೊಲೀಸ್ ಅಧಿಕಾರಿಗಳೂ ಬಂದು ವಿಷಯ ಮನವರಿಕೆ ಮಾಡಿದರೂ ಕೇಳದೆ ಕೆಲವರು ಕರ್ತವ್ಯದಲ್ಲಿದ್ದ ಪೊಲೀಸ್, ಅರಣ್ಯ ಇಲಾಖಾ ಸಿಬ್ಬಂದಿಗಳ ಮೇಲೆ ಕಲ್ಲುತೂರಾಟ ಮಾಡಿದ್ದರು.

ಇಲಾಖಾ ವಾಹನಗಳಿಗೂ ಕಲ್ಲು ತೂರಾಟ ಮಾಡಿ ಹಾನಿ ಉಂಟು ಮಾಡಿದ್ದರಲ್ಲದೆ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಕೊಲೆಗೆ ಯತ್ನಿಸಿದ್ದಾಗಿ ಉಪವಲಯ ಅರಣ್ಯಾಧಿಕಾರಿ ಮದನ್ ಬಿ.ಕೆ.ಅವರು ಕಡಬ ಪೊಲೀಸರಿಗೆ ದೂರು ನೀಡಿದ್ದರು.ಈ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು 7 ಮಂದಿ ಆರೋಪಿಗಳನ್ನು ಬಂಧಿಸಿದ್ದರು.ಬಂಧಿತ ಆರೋಪಿಗಳನ್ನು ನ್ಯಾಯಾಲಯ ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.ಇದೀಗ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ದೊರೆತಿದೆ.

LEAVE A REPLY

Please enter your comment!
Please enter your name here